Kundapra.com ಕುಂದಾಪ್ರ ಡಾಟ್ ಕಾಂ

ನಾವುಂದ ಸರಕಾರಿ ಪದವಿಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿ ಪುನರ್ಮಿಲನ

ನಾವುಂದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ 1994-95ರ ಅವಧಿಯಲ್ಲಿ ಪಿಯುಸಿ ವಿಜ್ಞಾನ ವಿಷಯ ಅಧ್ಯಯನ ಮಾಡಿ ಈಗ ವಿವಿಧೆಡೆ ಯಶಸ್ವಿಯಾಗಿ ಉದ್ಯೋಗ ನಿರತರಾಗಿರುವವರು ಭಾನುವಾರ ಕಾಲೇಜಿನಲ್ಲಿ ’ಪುನರ್ಮಿಲನ’ ಸಮಾರಂಭ ಏರ್ಪಡಿಸಿದ್ದರು. ಆ ಅವಧಿಯಲ್ಲಿ ಅವರಿಗೆ ಬೋಧಿಸಿ ಈಗ ನಿವೃತ್ತರಾಗಿರುವ ಒಬ್ಬ ಉಪನ್ಯಾಸಕರು, ಈಗಲೂ ಸೇವೆಯಲ್ಲಿರುವ ಇಬ್ಬರು, ಇಪ್ಪತ್ತು ವರ್ಷಗಳ ಹಿಂದಿನ ವಿದ್ಯಾರ್ಥಿಗಳು ಮತ್ತು ಇಂದಿನ ವಿದ್ಯಾರ್ಥಿಗಳು ಒಂದೆಡೆ ಸೇರಿದ್ದ ಈ ಸಮಾರಂಭ ನಾಲ್ಕು ತಲೆಮಾರುಗಳ ಸಮ್ಮಿಲನವಾಗಿ ಮೂಡಿಬಂತು.

ಈ ವಿಶಿಷ್ಟ ಪುನರ್ಮಿಲನ ಸೃಷ್ಟಿಸಿದ ಭಾವನಾತ್ಮಕ ಸನ್ನಿವೇಶದ ನಡುವೆ ಬೆಳಗ್ಗಿನಿಂದ ಮಧ್ಯಾಹ್ನದ ವರೆಗೆ ಸಾಗಿದ ಕಾರ್ಯಕ್ರಮದಲ್ಲಿ ಹಿಂದಿನ ವಿದ್ಯಾರ್ಥಿಗಳು ತಮ್ಮ ಕಾಲೇಜು ದಿನಗಳಲ್ಲಿ ಸಹಾಧ್ಯಾಯಿಗಳೊಂದಿಗೆ ನಡೆಸಿದ ಒಡನಾಟವನ್ನು, ಶಿಕ್ಷಕರೊಂದಿಗಿನ ಸುಮಧುರ ಸಂಬಂಧವನ್ನು, ಅವರ ಬೋಧನಾ ವೈಖರಿಗಳನ್ನು ಮತ್ತು ಆ ಬಳಿಕದ ತಮ್ಮ ಸಾಧನೆಗಳನ್ನು ತೆರೆದಿಟ್ಟರು. ಉಪಸ್ಥಿತರಿದ್ದ ಬೋಧಕರು ಹಿಂದಿನ ವಿದ್ಯಾರ್ಥಿಗಳು ಆಯೋಜಿಸಿರುವ ಸಮಾರಂಭವು ಹೇಗೆ ಇದರಲ್ಲಿ ಪಾಲ್ಗೊಂಡ ಎಲ್ಲರಿಗೆ ಅಪೂರ್ವ ಅನುಭವ ನೀಡಿದೆ ಎನ್ನುವುದನ್ನು ನೆನೆದರು.

ಆರಂಭದಲ್ಲಿ ಡಾ. ಪ್ರತಿಭಾ ರೈ ಪ್ರತಿಭಾ ಪ್ರಾರ್ಥನೆ ಹಾಡಿದರು. ವಸುಧಾ ಸ್ವಾಗತಿಸಿದರು. ಈಗ ನಿವೃತ್ತರಾಗಿರುವ ಅಂದಿನ ಆಂಗ್ಲ ಭಾಷಾ ಉಪನ್ಯಾಸಕ ಎಸ್. ಜನಾರ್ದನ ಜ್ಯೋತಿ ಬೆಳಗಿಸಿ ಉದ್ಘಾಟಿಸಿ, ೨೦ ವರ್ಷ ಹಿಂದಿನ ವಿದ್ಯಾರ್ಥಿಗಳು, ಇಂದಿನ ವಿದ್ಯಾರ್ಥಿಗಳು ಮತ್ತು ಅಂದಿನ ಅಧ್ಯಾಪಕರ ’ಸಮ್ಮಿಲನ’ ಒಂದು ಸಂಭ್ರಮಾಚರಣೆಯಾಗಿದ್ದು, ಇಂದಿನ ವಿದ್ಯಾರ್ಥಿಗಳಿಗೆ ವಿಶೇಷ ಕಲಿಕಾ ಅನುಭವ ನೀಡಿದೆ ಎಂದರು. ಅಂದು ಭೌತಶಾಸ್ತ್ರ ಬೋಧಿಸಿದ್ದ, ಈಗ ಸಂಸ್ಥೆಯ ಪ್ರಾಂಶುಪಾಲರಾಗಿರುವ ಎಸ್. ಶ್ರೀನಿವಾಸ ಭಟ್ ಸರಕಾರಿ ಶಿಕ್ಷಣ ಸಂಸ್ಥೆಗಳ ಬಗೆಗೆ ಜನರಿಗೆ ಕೀಳಂದಾಜು ಇದೆ. ಆದರೆ ನಾವುಂದ ಸರಕಾರಿ ಪದವಿಪೂರ್ವ ಕಾಲೇಜು ಅದರ ಅಸ್ತಿತ್ವದ ದಿನದಿಂದಲೂ ಗುಣಮಟ್ಟದ ಶಿಕ್ಷಣ ನೀಡುತ್ತ ಬಂದಿದೆ. ಅದರ ಫಲವಾಗಿಯೇ ಅದರ ವಿದ್ಯಾರ್ಥಿಗಳು ಕಲಿಕೆ ಮತ್ತು ಉದ್ಯೋಗ ಎರಡರಲ್ಲೂ ಯಶಸ್ಸು ಕಂಡುಕೊಂಡಿದ್ದಾರೆ ಎಂದು ಹೇಳಿದರು. ಶಿಕ್ಷಣ ಸಂಸ್ಥೆಯ ಹಿಂದಿನ ವಿದ್ಯಾರ್ಥಿಗಳು ನಡೆಸಿದ ಶೈಕ್ಷಣಿಕ ಮತ್ತು ಉದ್ಯೋಗ ಸಂಬಂಧಿ ಸಾಧನೆಯಿಂದ ಆ ಸಂಸ್ಥೆಯ ಇಂದಿನ ವಿದ್ಯಾರ್ಥಿಗಳು ಮಾರ್ಗದರ್ಶನ ಮತ್ತು ಸ್ಫೂರ್ತಿ ಪಡೆಯಬೇಕು ಎಂದು ಹೇಳಿದರು. ಜೀವಶಾಸ್ತ್ರ ಉಪನ್ಯಾಸಕ ಕೆ. ಬಾಲಕೃಷ್ಣ ಭಟ್ ಶಿಕ್ಷಕರ ಮಾರ್ಗದರ್ಶನ ಮತ್ತು ವಿದ್ಯಾರ್ಥಿಗಳ ಪರಿಶ್ರಮ ಜತೆಗೂಡಿದಾಗ ಯಶಸ್ಸು ಕೈಗೂಡುತ್ತದೆ ಎನ್ನುವುದಕ್ಕೆ ಈ ತಂಡದ ವಿದ್ಯಾರ್ಥಿಗಳು ಉತ್ತಮ ಉದಾಹರಣೆ ಎಂದರು. ಡಾ. ಪ್ರತಿಭಾ ರೈ, ವಸುಧಾ, ವಿನಾಯಕ ಮರವಂತೆ, ರೇಖಾ, ಡಾ. ಮೂಕಾಂಬಿಕಾ, ಸುಜಾತಾ, ಡಾ. ದೀಪಕ್ ಖಂಬದಕೋಣೆ, ಡಾ. ಪ್ರಿಯಾ ಎನ್. ಜಿ, ಡಾ. ರಾಘವೇಂದ್ರ ಶೆಟ್ಟಿ, ಎನ್. ಕೃಷ್ಣಮೂರ್ತಿ ನಾವಡ, ಡಾ. ಆಶಾಲತಾ, ಪ್ರದೀಪ ಶೆಟ್ಟಿ, ಸುಧೀಂದ್ರ ಹೆಬ್ಬಾರ್, ಸಂತೋಷ್ ಉಪಸ್ಥಿತರಿದ್ದರು. ವಿನಾಯಕ ಮರವಂತೆ ನಿರೂಪಿಸಿ, ವಂದಿಸಿದರು.

ಮೂವರು ಉಪನ್ಯಾಸಕರನ್ನು ಹಿಂದಿನ ವಿದ್ಯಾರ್ಥಿಗಳು ಸನ್ಮಾನಿಸಿದರು. ನಡುನಡುವೆ ಇಂದಿನ ವಿದ್ಯಾರ್ಥಿಗಳಿಗೆ ಸರಸ ಸ್ಪರ್ಧೆ ನಡೆಸಿ ಬಹುಮಾನ ವಿತರಿಸಲಾಯಿತು. ಈ ವರ್ಷದಿಂದ ಪಿಯುಸಿ ವಿಜ್ಞಾನ ವಿಷಯದಲ್ಲಿ ಅತ್ಯಧಿಕ ಅಂಕ ಗಳಿಸುವ ಈ ಕಾಲೇಜಿನ ವಿದ್ಯಾರ್ಥಿಗೆ ಹಿಂದಿನ ವಿದ್ಯಾರ್ಥಿ ತಂಡದಿಂದ ರೂ ೧೦,೦೦೦ ಶಿಷ್ಯ ವೇತನ ನೀಡುವುದಾಗಿ ಪ್ರಕಟಿಸಲಾಯಿತು. ಭೋಜನ ಕೂಟದೊಂದಿಗೆ ’ಸಮ್ಮಿಲನ’ ಮುಕ್ತಾಯವಾಯಿತು./

Exit mobile version