Kundapra.com ಕುಂದಾಪ್ರ ಡಾಟ್ ಕಾಂ

ಏಳೇಳು ಜನ್ಮದಲ್ಲೂ ಯೋಧನ ಪತ್ನಿಯಾಗಿ ಹುಟ್ಟುವೆ: ಮಾದೇವಿ ಕೊಪ್ಪದ

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಏಳೇಳು ಜನ್ಮ ಅನ್ನೊದು ಇದ್ರೆ ಯೋಧನ ಪತ್ನಿಯಾಗಿ ಹುಟ್ಟೋಕೆ ಇಷ್ಟ ಪಡ್ತೆನೆ. ಯೋಧನ ಮಡದಿಯಾಗಿ ಹುಟ್ಟಬೇಕಾದ್ರೆ ಹಿಂದಿನ ಜನ್ಮದಲ್ಲಿ ಪುಣ್ಯ ಮಾಡಿರಬೇಕು.

ಹೀಗೆಂದು ಹೇಳಿದವರು ಆರು ದಿನಗಳ ಕಾಲ ಸಿಯಾಚಿನ್‌ನಲ್ಲಿ ಹಿಮದಡಿ ಸಿಲುಕಿ ಜೀವವನ್ನು ಹಿಡಿದಿಟ್ಟುಕೊಂಡು ಬಳಿಕ ಹುತಾತ್ಮರಾದ ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ ಅವರ ಮಡದಿ ಮಾದೇವಿ ಕೊಪ್ಪದ. ಅರಮಣಕೋಡಿ ಶ್ರೀ ಈಶ್ವರ ಸೇವಾ ಸಮಿತಿ ಉಪ್ಪುಂದೋತ್ಸವದ ಅಂಗವಾಗಿ ಆಯೋಜಿಸಿದ್ದ ಯೋಧರಿಗೊಂದು ಸಲಾಂ ಕಾರ್ಯಕ್ರದಲ್ಲಿ ಕುಟುಂಬದೊಂದಿಗೆ ಸಮಿತಿಯ ಗೌರವ ಸ್ವೀಕರಿಸಿ ಮಾತನಾಡಿದರು.

ಅರಮಣಕೋಡಿ ಶ್ರೀ ಈಶ್ವರ ಸೇವಾ ಸಮಿತಿಯ ಗೌರವಾಧ್ಯಕ್ಷ ನವೀನ್‌ಚಂದ್ರ ಉಪ್ಪುಂದ ಮಾತನಾಡಿ ಒಂದು ದೇಶವನ್ನು ದೇವರೆಂದು ಪೂಜಿಸುವ ಜಗತ್ತಿನ ಏಕೈಕ ರಾಷ್ಟ್ರವಿದ್ದರೇ ಅದು ಭಾರತ ಮಾತ್ರ. ತನ್ನೆಲ್ಲಾ ಒಳ್ಳೆಯದನ್ನು ಜಗತ್ತಿಗೆ ನೀಡಿದ ಹಿರಿಮೆ ನಮ್ಮ ದೇಶದ್ದು. ಭಾರತ ಮಾತೆಯ ರಕ್ಷಣೆಗಾಗಿ ಪ್ರತಿ ಯೋಧನೂ ನಮಗಾಗಿ ಕರ್ತವ್ಯನಿರತನಾಗಿರುತ್ತಾನೆ. ಆತನ ಸ್ಮರಣೆ ದಿತ್ಯವೂ ಆಗಬೇಕಿದೆ. ಪ್ರತಿ ಕುಟುಂಬದಲ್ಲೊಂದು ಯೋಧನಾಗುವ ಕನಸು ಚಿಗುರಬೇಕಿದೆ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ

ನಿವೃತ್ತ ಯೋಧ, ಉಪ್ಪುಂದ ಗ್ರಾಮ ಕರಣಿಕ ಮಂಜುನಾಥ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀ ಮೂಡುಗಣಪತಿ ಶಿಶುಮಂದಿರದ ಗೌರವಾಧ್ಯಕ್ಷ ರಾಜೀವ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸ್ನೇಹ ಪ್ರಿಂಟರ‍್ಸ್‌ನ ಮಂಜುನಾಥ ದೇವಾಡಿಗ ಉಪಸ್ಥಿತರಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ

ಭಾರತೀಯ ಸೇನೆಯ ಯೋಧರುಗಳಾದ ಶಿವರಾಮ ಖಾರ್ವಿ, ಸಂತೋಷ ಮೊಗವೀರ ಶ್ರೀಕಾಂತ ಹಾಗೂ ಈ ಭಾಗದ ಯೋಧರ ಕುಟುಂಬಗಳನ್ನು ಗೌರವಿಸಲಾಯಿತು. ವೀರಯೋಧ ಹನುಮಂತಪ್ಪ ಕೊಪ್ಪದ ಅವರ ಕುಟುಂಬಕ್ಕೆ ಸಮಾಜನಿಧೀ ಸಮರ್ಪಿಸಲಾಯಿತು. ಅರಮಣಕೋಡಿ ಶ್ರೀ ಈಶ್ವರ ಸೇವಾ ಸಮಿತಿ ಉಪಾಧ್ಯಕ್ಷ ಜಗನ್ನಾಥ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಣ್ಣಯ್ಯ ಖಾರ್ವಿ ಸ್ವಾಗತಿಸಿ, ಪ್ರಸನ್ನಕುಮಾರ್ ನಿರೂಪಿಸಿದರು.

See Video Here

Exit mobile version