Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿಯಲ್ಲಿ ಶಿವ ಪಾರ್ವತಿ ಕಲ್ಯಾಣೋತ್ಸವ ಸಂಪನ್ನ

ಗಂಗೊಳ್ಳಿ : ಗಂಗೊಳ್ಳಿ ಮೇಲ್‌ಗಂಗೊಳ್ಳಿಯ ಶ್ರೀ ಬಸವೇಶ್ವರ ದೇವಸ್ಥಾನದ ಪ್ರಾಯೋಜಿತ ಓಂ ಶ್ರೀ ಮಾತೃ ಮಂಡಳಿ ನೇತೃತ್ವದಲ್ಲಿ ಶಿವ ಪಾರ್ವತಿ ಕಲ್ಯಾಣೋತ್ಸವ ಕಾರ್ಯಕ್ರಮ ಭಾನುವಾರ ಸಂಜೆ ಗೋಧೂಳಿ ಲಗ್ನ ಸುಮೂರ್ಹತದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ಜರಗಿತು.

ಶಿವ ಪಾರ್ವತಿಯ ವಿಗ್ರಹವನ್ನು ನಾಯಕವಾಡಿಯ ಶ್ರೀ ಸಂಗಮೇಶ್ವರ ದೇವಸ್ಥಾನದ ಬಳಿಯಿಂದ ವೈಭವೋಪಿತ ಪುರಮೆರವಣಿಗೆಯಲ್ಲಿ ತರಲಾಯಿತು. ವೇದಮೂರ್ತಿ ಶ್ರೀಪತಿ ಭಟ್ ಮಂಕಿ ನೇತೃತ್ವದಲ್ಲಿ ಪುರೋಹಿತರು ಕಲ್ಯಾಣೋತ್ಸವದ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ವಧು ನಿರೀಕ್ಷಣೆ, ಅರಶಿನ ಕುಂಕುಮ ಸಮರ್ಪಣೆ, ಧಾರೆಮಣಿ ಕಟ್ಟುವಿಕೆ, ಶಿವನಿಗೆ ಮಧುಪರ್ಕ ಸಮರ್ಪಣೆ, ಮಾಲಾಧಾರಣೆ, ಕನ್ಯಾದಾನ, ಕಂಕಣ ಮಾಂಗಲ್ಯ ಸೂತ್ರ ಧಾರಣೆ, ಚಿನ್ನಾಭರಣಾಧಿ ಕಪ್ಪ ಕಾಣಿಕೆಗಳ ಸಮರ್ಪಣೆ, ಪ್ರಸನ್ನ ಪೂಜೆ, ಅಷ್ಟಾವಧಾನ ಸೇವೆಗಳ ಮೂಲಕ ಕಲ್ಯಾಣೋತ್ಸವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಭಕ್ತಿ ಶ್ರದ್ಧಾಪೂರ್ವಕ ನೆರವೇರಿಸಲಾಯಿತು.

ಓಂ ಶ್ರೀ ಮಾತೃ ಮಂಡಳಿಯ ಅಧ್ಯಕ್ಷೆ ಭೂದೇವಿ, ಗೌರವಾಧ್ಯಕ್ಷೆ ಪದ್ಮಾವತಿ, ಪ್ರಧಾನ ಕಾರ್ಯದರ್ಶಿ ಜ್ಯೋತಿ, ಕಾರ್ಯದರ್ಶಿ ಶಾಂತಿ, ದೇವಸ್ಥಾನದ ಆಡಳಿತ ಮೊಕ್ತೇಸರ ಈಶ್ವರ ಜಿ., ಜಿಪಂ ಸದಸ್ಯೆ ಶೋಭಾ ಪುತ್ರನ್, ಗಂಗೊಳ್ಳಿ ಗ್ರಾಪಂ ಸದಸ್ಯೆ ಚೆಂದು, ತಾಪಂ ಸದಸ್ಯ ರಾಜು ದೇವಾಡಿಗ, ಶ್ರೀ ಗಣೇಶೋತ್ಸವ ಸಮಿತಿಯ ಜಗದೀಶ, ವಕೀಲ ಆನಂದ, ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರಯ, ಮಾತೃ ಮಂಡಳಿಯ ಸದಸ್ಯರು ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

Exit mobile version