Kundapra.com ಕುಂದಾಪ್ರ ಡಾಟ್ ಕಾಂ

ಕನ್ನಡ ಮಾಧ್ಯಮ ಉಳಿಸುವುದು ಸದ್ಯದ ತುರ್ತು: ಲಾವಣ್ಯ ರಂಗಸಂಭ್ರಮ ಸಮಾರೋಪದಲ್ಲಿ ಸುರೇಂದ್ರ ಅಡಿಗ

ಬೈಂದೂರು: ನಾಟಕದಂತಹ ರಂಗಕಲೆಗಳು ಮಕ್ಕಳನ್ನು ಸೃಜನಾತ್ಮಕವಾಗಿ ತೊಡಗಿಕೊಳ್ಳುವಂತೆ ಮಾಡುವುದರೊಂದಿಗೆ ಅವರ ಬೌದ್ಧಿಕ ಬೆಳವಣಿಗೆಗೂ ಪೂರಕವಾಗಿ ನಿಲ್ಲುತ್ತವೆ. ಶಾಲೆಗಳಲ್ಲಿ ಪಠ್ಯವನ್ನು ರಂಗಕಲೆಗಳ ಮೂಲಕ ಮಕ್ಕಳಿಗೆ ಭೋಧಿಸುವಂತಾದರೆ ಅದು ಬಹುಬೇಗ ಮಕ್ಕಳಿಗೆ ತಲುಪುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದರು.

ಲಾವಣ್ಯ ರಿ. ಬೈಂದೂರು ಆಶ್ರಯದಲ್ಲಿ ಬೈಂದೂರಿನ ಶಾರದಾ ವೇದಿಕೆಯಲ್ಲಿ ಮೂರು ದಿನಗಳ ಕಾಲ ಆಯೋಜಿಸಲಾದ ರಂಗ ಸಂಭ್ರಮ-೨೦೧೬ರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಕನ್ನಡ ಮಾಧ್ಯಮದಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಕನ್ನಡ ಶಾಲೆಗಳಲ್ಲಿ ಬಲಪಡಿಸಬೇಕಾದರೇ ಅಲ್ಲಿಯೂ ಒಂದು ಇಂಗ್ಲಿಷ್ ಮಾಧ್ಯಮವನ್ನು ಆರಂಭಸಬೇಕು ಎಂಬ ಮಾತುಗಳ ಕೇಳಿಬರುತ್ತಿವೆ. ಆದರೆ ಕನ್ನಡ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ಆರಂಭಗೊಂದರೇ ಕನ್ನಡವೇ ಇಲ್ಲವಾದಂತಾಗುತ್ತದೆ. ಮಕ್ಕಳು ಇಂಗ್ಲಿಷ್ ಕಲಿಯಲು ನಮ್ಮ ಅಭ್ಯಂತರವಿಲ್ಲ. ಇಂಗ್ಲಿಷ್ ಪರಿಣಾಮಕಾರಿ ಭೋಧನೆಗೆ ಉತ್ತಮ ಶಿಕ್ಷಕರನ್ನು ನೇಮಿಸಲು ಪ್ರಯತ್ನಿಸೋಣ. ಆದರೆ ಕನ್ನಡ ಶಾಲೆಗಳಲ್ಲಿ ಕನ್ನಡ ಮಾಧ್ಯಮವೇ ಇರಲಿ ಎಂದು ಆಶಿಸೋಣ. ಒಂದು ವೇಳೆ ಕನ್ನಡ ಶಾಲೆಗೆ ಧಕ್ಕೆ ಬರುವ ಸ್ಥಿತಿ ಬಂದರೇ ಉಪವಾಸ ಸತ್ಯಾಗ್ರಹಕ್ಕೂ ಸಿದ್ಧ ಎಂದರು.

ಲಾವಣ್ಯ ಬೈಂದೂರು ಗೌರವಾಧ್ಯಕ್ಷ ಯು. ಶ್ರೀನಿವಾಸ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಉಡುಪಿ ರಂಗಭೂಮಿಯ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ, ಲಾವಣ್ಯದ ಅಧ್ಯಕ್ಷ ಬಿ. ರಾಮ ಟೈಲರ್ ಉಪಸ್ಥಿತರಿದ್ದರು.

ರಂಗ ಕಲಾವಿದ ಗೋಪಾಲ ಪಡುವರಿ ಅವರನ್ನು ಸನ್ಮಾನಿಸಲಾಯಿತು. ಎರಡನೇ ಅವಧಿಗೆ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಆಯ್ಕೆಗೊಂಡ ನೀಲಾವರ ಸುರೇಂದ್ರ ಅಡಿಗ ಅವರನ್ನು ಗೌರವಿಸಲಾಯಿತು. ಲಾವಣ್ಯದ ಸದಸ್ಯ ದಯಾನಂದ, ಸ್ವಾಗತಿಸಿದರು. ಪ್ರಸನ್ನ ಸನ್ಮಾನಿತರ ಪರಿಚಯ ಪತ್ರ ವಾಚಿಸಿದರು. ಲಾವಣ್ಯದ ಕಾರ್ಯದರ್ಶಿ ನರಸಿಂಹ ಬಿ. ನಾಯಕ್ ಧನ್ಯವಾದಗೈದರು. ಉದಯ ಆಚಾರ್ ಕಾರ್ಯಕ್ರಮ ನಿರೂಪಿಸಿದರು. ಸುಮಾನಸ ಕೊಡವೂರು-ಉಡುಪಿ ಪ್ರಸ್ತುತಿಯ ಚೇತನ ತುಮಕೂರು ನಿರ್ದೇಶನದ ದಾರಾಶಿಕೊ ನಾಟಕ ಪ್ರದರ್ಶನಗೊಂಡಿತು.

 

Exit mobile version