Kundapra.com ಕುಂದಾಪ್ರ ಡಾಟ್ ಕಾಂ

ನಮೋ ಸರಕಾರದಿಂದ ಆಡಳಿತ ವ್ಯವಸ್ಥೆಗೆ ಗೌರವ, ಆಡಳಿತ ಯಂತ್ರಕ್ಕೆ ನವಚೈತನ್ಯ: ಡಿ.ವಿ. ಸದಾನಂದ ಗೌಡ

ಸರಳೀಕೃತ ಮರಳು ನೀತಿ ಜಾರಿಯಾಗಲಿ. ಕೊಲ್ಲೂರು ದೇವಳದ ಕಾನೂನು ಸುವ್ಯವಸ್ಥೆ ರಾಜ್ಯ ಸರಕಾರಕ್ಕೆ ಸಂಬಂಧಿಸಿದ್ದು.

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಕೇಂದ್ರದಲ್ಲಿ ಬಿಜೆಪಿ ಪಕ್ಷವೊಂದೇ ಬಹುಮತದಿಂದ ಅಧಿಕಾರಕ್ಕೇರಿ ಉತ್ತಮ ಆಡಳಿತ ನಡೆಸುತ್ತಿರುವುದು ಕಳೆದು ಹೋದ ವ್ಯವಸ್ಥೆಗೊಂದು ಗೌರವ ತಂದಿರುವುದಲ್ಲದೇ, ಕುಸಿದುಹೋದ ಆಡಳಿತ ಯಂತ್ರಕ್ಕೊಂದು ನವಚೈತನ್ಯ ನೀಡಿದೆ ಎಂದು ಕೇಂದ್ರ ಕಾನೂನು ಸಚಿವ ಡಿ.ವಿ ಸದಾನಂದ ಗೌಡ ಹೇಳಿದರು.

ಅವರು ಕೊಲ್ಲೂರು, ಹಟ್ಟಿಯಂಗಡಿ ದೇವಳಕ್ಕೆ ಭೇಟಿ ನೀಡಿದ ಬಳಿ ಕುಂದಾಪುರ ಬಿಜೆಪಿ ಕಛೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ನರೇಂದ್ರ ಮೋದಿ ಅವರ ನೇತೃತ್ವ ಸರಕಾರ ಅಧಿಕಾರಕ್ಕೆ ಬಂದು 21 ತಿಂಗಳುಗಳಲ್ಲಿ ಒಂದೂ ಕಪ್ಪುಚುಕ್ಕೆಯಿಲ್ಲದೇ ಕೆಲಸ ಮಾಡಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತಿದ್ದು, ಜನರಿಗೆ ಕೊಟ್ಟ ಭರವಸೆಯನ್ನು ಈಡೇರಿಸಿದ್ದೇವೆ. ಯುವಕರ ಕೌಶಲ್ಯಾಭಿವೃದ್ಧಿ, ರೈತರ ಬೆಳೆಗೆ ಪ್ರೀಮಿಯಂ ಭರಿಸುವುದು, ಕೇಂದ್ರ ರಾಜ್ಯ ಸರಕಾರಗಳ ಸೌವಲತ್ತು ನೇರವಾಗಿ ವ್ಯಕ್ತಿಯ ಬ್ಯಾಂಕ್ ಅಕೌಂಟಿಗೆ ತಲುಪುವ ವ್ಯವಸ್ಥೆ, ಜೀವವಿಮೆ, ಶಿಕ್ಷಣ ಸೇರಿದಂತೆ ಹತ್ತಾರು ಜನಪರ ಯೋಜನೆಗಳಿಗೆ ಕೇಂದ್ರ ಸರಕಾರ ಅನುದಾನ ಮೀಸಲಿರಿಸಿದೆ. ದೇಶದ ರಕ್ಷಣಾ ಕ್ಷೇತ್ರ ಹಾಗೂ ಸಾರಿಗೆ ಕ್ಷೇತ್ರಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ಕೇಂದ್ರ ಅಭಿವೃದ್ಧಿ ಪರ ನಡೆಯಿಂದಾಗಿ ಭಾರತದ ಜಿಡಿಪಿ 7.5 ಪ್ರತಿಶತದಷ್ಟು ಏರಿಯಾಗಿ ದೇಶದ ಆರ್ಥವ್ಯವಸ್ಥೆಯ ಮೇಲೆ ಸಕರಾತ್ಮಕವಾದ ಪರಿಣಾಮ ಬೀರಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಕೊಲ್ಲೂರು ವಿವಾದದ ಬಗ್ಗೆ ಮಾತನಾಡುವುದಿಲ್ಲ: ಕೊಲ್ಲೂರು ದೇವಳಕ್ಕೆ ಸಂಬಂಧಿಸಿದ ಕಾನೂನು ಸುವ್ಯವಸ್ಥೆ ರಾಜ್ಯ ಸರಕಾರಕ್ಕೆ ಸಂಬಂಧಿಸಿದ್ದು. ಇದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ದೇಶದ ಇಂಟಲಿಜನ್ಸ್ ವಿಂಗ್‌ನಿಂದ ಮಾಹಿತಿ ದೊರೆತಲ್ಲಿ ಅಥವಾ ಆಂತರಿಕ ಭದ್ರತೆಯ ಬಗ್ಗೆ ತೊಡಕಾಗಿರುವ ಬಗ್ಗೆ ರಾಜ್ಯ ಸರಕಾರವೇ ಕೇಳಿಕೊಂಡಲ್ಲಿ ಕೇಂದ್ರ ಸರಕಾರ ಕ್ರಮ ಕೈಗೊಳ್ಳಬಹುದೇ ಹೊರತೂ ನೇರವಾಗಿ ಏನು ಮಾಡುವಂತಿಲ್ಲ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ

ಏಕರೂಪದ ಮರಳು ನೀತಿ ಜಾರಿಯಾಗಲಿ: ಸಿಆರ್‌ಝಡ್ ಸಮಸ್ಯೆಯಿಂದಾಗಿ ಕರಾವಳಿ ಭಾಗದಲ್ಲಿ ವಿಶೇಷವಾಗಿ ಮರಳು ಸಮಸ್ಯೆ ಎದುರಾಗಿದೆ. ಮರಳು ತೆಗೆಯಲು ಅನುಮತಿ ನೀಡಿದ ಅವಧಿಯನ್ನು ವಿಸ್ತರಿಸದ ಕಾರಣ ಈ ಸಮಸ್ಯೆ ಎದುರಾಗಿದೆ. ರಾಜಕಾರಣಿಗಳು ಇದರಲ್ಲಿ ನೇರವಾಗಿ ಹಸ್ತಕ್ಷೇಪ ಮಾಡುತ್ತಿರುವ ಕಾರಣ ಈ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದೆ. ಸರಳೀಕೃತವಾದ ಮರಳು ನೀತಿಯನ್ನು ಜಾರಿಗೆ ತರಲು ರಾಜ್ಯ ಸರಕಾರವು ಹಿಂದೇಟು ಹಾಕುತ್ತಿದೆ. ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಚಿವ ಉದಾಸಿ ಅವರ ಹೊಸ ಮರಳು ನೀತಿ ಜಾರಿಗೆ ತರಲು ಪ್ರಯತ್ನಿಸಿದ್ದರು. ಕೊನೆಗೆ ನಮ್ಮ ಅವಧಿ ಮುಗಿದ ಬಳಿಕ ಆ ಪ್ರಕ್ರಿಯೆಯೂ ನೆನೆಗುದಿಗೆ ಬಿದ್ದಿತು ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಕುಂದಾಪುರ ಕ್ಷೇತ್ರ ಸಮಿತಿ ಅಧ್ಯಕ್ಷ ರಾಜೇಶ್ ಕಾವೇರಿ, ರಾಜ್ಯ ಮೀನುಗಾರಿಕಾ ಪ್ರಕೋಷ್ಠದ ಅಧ್ಯಕ್ಷ ಕಿಶೋರ್‌ಕುಮಾರ್, ಕುಂದಾಪುರ ಬಿಜೆಪಿ ಕಾರ್ಯದರ್ಶಿ ರಾಜೀವ ಶೆಟ್ಟಿ, ಕುಂಭಾಶಿ ಗ್ರಾಪಂ ಅಧ್ಯಕ್ಷ ವಾಣಿ ಅಡಿಗ ಮೊದಲಾದವರು ಉಪಸ್ಥಿತರಿದ್ದರು.

Exit mobile version