Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ಗಂಗೊಳ್ಳಿ ಸೇತುವೆ: ಒಗ್ಗಟ್ಟಿನಿಂದ ಹೋರಾಟ ನಡೆಸಲು ನಿರ್ಣಯ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಗಂಗೊಳ್ಳಿ ಕುಂದಾಪುರದ ನಡುವೆ ಪಂಚಗಂಗಾವಳಿ ನದಿಗೆ ಸೇತುವೆ ನಿರ್ಮಾಣಗೊಂಡರೆ ಕರಾವಳಿಯ ಈ ಭಾಗದ ಲಕ್ಷಾಂತರ ಮಂದಿಗೆ ಅನುಕೂಲವಾಗುವುದಲ್ಲದೇ ಕೋಟ್ಯಾಂತರ ರೂಪಾಯಿ ಉಳಿತಾಯವಾಗುತ್ತದೆ, ಉದ್ಯಮ, ವ್ಯವಹಾರದಲ್ಲೂ ಪ್ರಗತಿಯಾಗುತ್ತದೆ, ಹಲವು ಗ್ರಾಮಗಳ ಅಭಿವೃದ್ಧಿಗೂ ಕಾರಣವಾಗುತ್ತದೆ. ಹಾಗಾಗಿ ಈ ಸೇತುವೆ ನಿರ್ಮಾಣಕ್ಕಾಗಿ ಎಲ್ಲರ ಸಹಕಾರ ಪಡೆದು ಹೋರಾಟ ನಡೆಸೋಣ ಎಂದು ಗಂಗೊಳ್ಳಿಯಲ್ಲಿ ಈ ಬಗ್ಗೆ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.

ಗ್ರಾ.ಪಂ.ಸದಸ್ಯ ಯೂನಸ್ ಸಾಹೇಬ್ ಮಾತನಾಡಿ ಗಂಗೊಳ್ಳಿ ಹಾಗೂ ಪರಿಸರ ಗ್ರಾಮಗಳ ಅಭಿವೃದ್ಧಿ ದೃಷ್ಟಿಯಿಂದ ಈ ಸೇತುವೆ ಆಗಲೇಬೇಕಾಗಿದ್ದು ಎಲ್ಲರೂ ಒಗ್ಗಟ್ಟಿನಿಂದ ಈ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಅನಿಸಿಕೆ ವ್ಯಕ್ತಪಡಿಸಿದರು. ಕುಂದಾಪುರ ಪುರಸಭಾ ಅಧ್ಯಕ್ಷೆ ವಸಂತಿ ಸಾರಂಗ ಕುಂದಾಪುರ ಪುರಸಭೆಯಿಂದ ಈ ಯೋಜನೆ ಮಂಜೂರಾತಿಗಾಗಿ ಎಲ್ಲಾ ರೀತಿಯ ಪ್ರೋತ್ಸಾಹ ನೀಡುವುದಾಗಿ ತಿಳಿಸಿದರು. ಪುರಸಭಾ ಉಪಾಧ್ಯಕ್ಷ ರಾಜೇಶ್ ಕಾವೇರಿ ಮಾತನಾಡಿ, ಈ ಯೋಜನೆ ಕಾರ್ಯಗತ ಮಾಡುವುದು ಅಷ್ಟು ಸುಲಭವಲ್ಲ, ಇದಕ್ಕಾಗಿ ವಿಧಾನಸೌಧದಲ್ಲೂ, ಗಂಗೊಳ್ಳಿ ಕುಂದಾಪುರದಲ್ಲೂ ಬಹಳಷ್ಟು ಹೋರಾಟ ನಡೆಸಬೇಕಾಗುತ್ತದೆ. ಶಾಸಕರ, ಸಂಸದರ ಸಹಕಾರ ಪಡೆದು ನಿರಂತರ ಬೆನ್ನು ಹತ್ತಬೇಕಾಗುತ್ತದೆ. ಈ ಬಗ್ಗೆ ಕೆಲಸ ಮಾಡುವವರಿಗೆ ಎಲ್ಲಾ ನಾಗರಿಕರ ಸಂಪೂರ್ಣ ಬೆಂಬಲ ಅಗತ್ಯವಿದೆ ಎಂದರು.

ಮುಂದೆ ಈ ಬಗ್ಗೆ ನಿರ್ವಹಿಸಬೇಕಾದ ಜವಾಬ್ದಾರಿಗಾಗಿ ಸಮಿತಿಯೊಂದನ್ನು ರಚಿಸಲು ನಿರ್ಧರಿಸಲಾಯಿತು. ಸಭೆಯಲ್ಲಿ ಕುಂದಾಪುರ ಪುರಸಭಾ ಅಧ್ಯಕ್ಷೆ ವಸಂತಿ ಸಾರಂಗ, ಉಪಾಧ್ಯಕ್ಷ ರಾಜೇಶ್ ಕಾವೇರಿ, ಹಿರಿಯ ಪತ್ರಕರ್ತ ಎಸ್.ಜನಾರ್ಧನ್, ಜಿ.ಪಂ.ಸದಸ್ಯೆ ಶೋಭಾ ಜಿ.ಪುತ್ರನ್, ತಾ.ಪಂ. ಸದಸ್ಯ ಸುರೇಂದ್ರ ಖಾರ್ವಿ, ಗಂಗೊಳ್ಳಿ ಗ್ರಾ.ಪಂ. ಅಧ್ಯಕ್ಷೆ ರೇಶ್ಮಾ ಆರ್ ಖಾರ್ವಿ, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೆರಾಲ್ಡ್ ಕ್ರಾಸ್ಟಾ, ದುರ್ಗರಾಜ್ ಪೂಜಾರಿ, ಗಂಗೊಳ್ಳಿ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ನಾಗಖಾರ್ವಿ, ಹಿಂದು ಜಾಗರಣಾ ವೇದಿಕೆ ಅಧ್ಯಕ್ಷ ಗೋವಿಂದ್ರಾಯ ಶೇರುಗಾರ್, ಆನಂದ, ಸತೀಶ್ ಜಿ, ಗುತ್ತಿಗೆದಾರ ಜಿ.ಡಿ.ರಾಘವೇಂದ್ರ ಉಪಸ್ಥಿತರಿದ್ದರು.

ವಿಜಯಖಾರ್ವಿ ಪ್ರಾರ್ಥಿಸಿದರು. ಕುಂದಾಪುರ ಸೌಹಾರ್ದ ಕ್ರೆಡಿಟ್ ಕೊ-ಆಪರೇಟಿವ್ ಬ್ಯಾಂಕ್‌ನ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಶಿವಾನಂದ ಸ್ವಾಗತಿಸಿದರು. ಕುಂದಪ್ರಭ ಸಂಸ್ಥೆಯ ಅಧ್ಯಕ್ಷ ಯು.ಎಸ್.ಶೆಣೈ ಪ್ರಸ್ತಾವಿಕವಾಗಿ ಮಾತನಾಡಿದರು. ಶ್ರೀ ಗುರುಜ್ಯೋತಿ ಸ್ಪೋರ್ಟ್‌ಕ್ಲಬ್‌ನ ಅಧ್ಯಕ್ಷ ರಾಘವೇಂದ್ರ ಖಾರ್ವಿ , ಸಂಚಾಲಕ ಲೋಕೇಶ್ ಖಾರ್ವಿಅತಿಥಿಗಳನ್ನು ಗೌರವಿಸಿದರು. ಗುರುಜ್ಯೋತಿಯ ಸೂರ್ಯಕಾಂತ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಶಾಲೆಟ್ ಲೋಬೋ ವಂದಿಸಿದರು.

Exit mobile version