Kundapra.com ಕುಂದಾಪ್ರ ಡಾಟ್ ಕಾಂ

ಎ.3 ಕುಂದಾಪುರ ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ನೂತನ ಕಟ್ಟಡ ಲೋಕಾರ್ಪಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ಎಜುಕೇಶನ್ ಸೊಸೈಟಿಯ ಆಡಳಿತಕ್ಕೊಳಪಟ್ಟ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಎ.೩ರ ಭಾನುವಾರ ಮಧ್ಯಾಹ್ನ ನಡೆಯಲಿದ್ದು, ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದ ಬಿ.ಎಸ್. ಯಡಿಯೂರಪ್ಪ ಕಾಲೇಜು ಕಟ್ಟಡವನ್ನು ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ಬಗ್ಗೆ ಕುಂದಾಪುರ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಬಿ.ಎಂ. ಸುಕುಮಾರ ಶೆಟ್ಟಿ ತಿಳಿಸಿದ್ದಾರೆ.

ಡಾ. ಬಿ.ಬಿ ಕಾಲೇಜಿನಲ್ಲಿ ಕರೆಯಲಾಗಿದ್ದ ಪತ್ರಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. ಬಳಿಕ ನಡೆಯುವ ಕಾರ್ಯಕ್ರಮದಲ್ಲಿ ಉಡುಪಿ ಪಾಲಿಮಾರು ಮಠದ ಶ್ರೀ ವಿದ್ಯಾಧೀಶ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಸಭೆಯಲ್ಲಿ ಉಡುಪಿ ಚಿಕ್ಕಮಂಗಳೂರು ಲೋಕಸಭಾ ಸಂಸದೆ ಶೋಭಾ ಕರಂದ್ಲಾಜೆ, ವಿಧಾನಪರಿಷತ್ ಸದಸ್ಯರಾದ ಶ್ರೀನಿವಾಸ ಪೂಜಾರಿ, ಗಣೇಶ್ ಕಾರ್ಣಿಕ್, ಪ್ರತಾಪಚಂದ್ರ ಶೆಟ್ಟಿ ಹಾಗೂ ಇತರ ಉಪಸ್ಥಿತರಿರಲಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ದಿ. ಬಸ್ರೂರು ಭುಜಂಗ ಶೆಟ್ಟಿ ಅವರ ನೆನಪಿನಲ್ಲಿ ಆರಂಭಗೊಂಡ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಆರು ವರ್ಷಗಳ ಹಿಂದೆ ಕುಂದಾಪುರ ಎಜುಕೇಶನ್ ಸೊಸೈಟಿಯ ಆಡಳಿತಕ್ಕೊಳಪಟ್ಟು ಪುನರಾರಂಭಗೊಂಡಿತು. ಬಿಕಾಂ ಹಾಗೂ ಬಿಬಿಎಂ 120 ಮಕ್ಕಳಿಂದ ಕಾಲೇಜು ಮತ್ತೆ ಪ್ರಾರಂಭವಾಗಿ ಪ್ರಸ್ತುತ 1೦೦೦ಕ್ಕೂ ಅಧಿಕ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಶೈಕ್ಷಣಿಕವಾಗಿ ಕ್ಷಿಪ್ರಗತಿಯಲ್ಲಿ ಪ್ರಗತಿ ಸಾಧಿಸಿರುವ ಕಾಲೇಜಿನ ಶೈಕ್ಷಣಿಕ ಅಗತ್ಯತೆಗೆ ತಕ್ಕಂತೆ ಸುಮಾರು ೨.೮೦ ಎಕರೆ ಜಾಗದಲ್ಲಿ ನೂತನ ಕಟ್ಟಡವನ್ನು ಕಟ್ಟಲಾಗಿದ್ದು ಲೋಕಾರ್ಪಣೆಗೊಳ್ಳಲು ಸಿದ್ಧಗೊಂಡಿದೆ.

3 ಅಂತಸ್ತಿನ ವಿಶಾಲ ಕಟ್ಟಡದಲ್ಲಿ ವಿಶಾಲವಾಗದ ತರಗತಿ ಕೊಠಡಿ, ಪ್ರತಿ ವಿದ್ಯಾರ್ಥಿಗಳಿಗೂ ಪಾಠವನ್ನು ಸ್ಪಷ್ಟವಾಗಿ ಕೇಳುವ ಪರಿಕಲ್ಪನೆ, ಪ್ರತಿ ಬ್ಲಾಕಿನಲ್ಲಿಯೂ ರೆಸ್ಟ್ ರೂಂ, ಗ್ರಂಥಾಲಯ, ಸೆಂಟ್ರಲೈಸಡ್ ಟ್ರಿಬ್ಯುನಲ್ ಸಿಸ್ಟಮ್, ವಿಶಾಲ ಸಭಾಂಗಣ ಸೇರಿದಂತೆ ಹಲವು ಕಟ್ಟಡವು ಹಲವು ವಿಶೇಷತೆಗಳಿಂದ ಕೂಡಿದೆ.

ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಗ್ರಾಮೀಣ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಕಾಲೇಜಿನಲ್ಲಿಯೇ ಸ್ಟೋಟ್ಸ್ ಅಕಾಡೆಮಿ, ಹೊಸತಾಗಿ ಬಿಸಿಎ ಕೋರ್ಸ್, ಸಂಜೆ ಕಾಲೇಜು ಮುಂತಾದವುಗಳನ್ನು ಸ್ಥಾಪಿಸಲಾಗುವುದು ಎಂದವರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಕುಂದಾಪುರ ಎಜುಕೇಶನ್ ಸೊಸೈಟಿಯ ಉಪಾಧ್ಯಕ್ಷ ಪ್ರೊ. ಎ.ಪಿ. ಮಿತ್ತಂತಾಯ, ಕಾರ್ಯದರ್ಶಿ ಸೀತಾರಾಮ ನಕ್ಕತ್ತಾಯ, ವಿಶ್ವಸ್ಥ ಮಂಡಳಿ ಸದಸ್ಯ ಕೆ.ಸಿ. ರಾಜೇಶ್, ಡಾ.ಬಿಬಿ ಹೆಗ್ಡೆ ಕಾಲೇಜಿನ ಪ್ರಾಂಶುಪಾಲ ಪ್ರೊ. ದೋಮ ಚಂದ್ರಶೇಖರ ಉಪಸ್ಥಿತರಿದ್ದರು.

_MG_9093

Exit mobile version