Kundapra.com ಕುಂದಾಪ್ರ ಡಾಟ್ ಕಾಂ

ಬಸ್ರೂರು: ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದ ಅತಿಥಿ ಗೃಹ ಸಮುಚ್ಛಯ ಉದ್ಘಾಟನೆ

????????????????????????????????????

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶ್ರೀದೇವಿಯ ಅನುಗ್ರಹ ಕೃಪೆಯಿಂದ ಜಿಎಸ್‌ಬಿ ಸಮಾಜ ಬಹಳಷ್ಟು ಅಭಿವೃದ್ಧಿಯನ್ನು ಕಂಡಿದೆ. ಸಮಾಜದಿಂದ ನಾವು ಗಳಿಸಿದ ದ್ರವ್ಯವನ್ನು ಭಯ ಭಕ್ತಿಯಿಂದ ಯಾವುದೇ ಅಹಂಕಾರವಿಲ್ಲದೆ ಉತ್ತಮ ಕೆಲಸಕ್ಕೆ ನೀಡುತ್ತಿರಬೇಕು. ನಾವು ನೀಡಿದ ದಾನದ ಉಪಯೋಗ ಸರಿಯಾದ ರೀತಿಯಲ್ಲಿ ಆಗುವಂತಿರಬೇಕು. ಅತಿಥಿ ಸತ್ಕಾರ ನಮ್ಮ ಸಂಸ್ಕೃತಿಯಾಗಿದ್ದು ಅತಿಥಿಗಳನ್ನು ಸತ್ಕಾರ ಮಾಡುವುದರಿಂದ ನಮಗೆ ಪುಣ್ಯ ಲಭಿಸುತ್ತದೆ ಅಲ್ಲದೆ ನಮ್ಮಲ್ಲಿ ಪ್ರೀತಿ ಬೆಳೆಯುತ್ತದೆ ಹಾಗೂ ಸಂಬಂಧಗಳು ವೃದ್ಧಿಯಾಗುತ್ತದೆ ಎಂದು ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಹೇಳಿದರು.

ಅವರು ಕುಂದಾಪುರ ತಾಲೂಕು ಬಸ್ರೂರಿನ ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದ ವಠಾರದಲ್ಲಿ ಸುಸಜ್ಜಿತವಾಗಿ ನಿರ್ಮಿಸಲಾಗಿರುವ ’ಶ್ರೀ ನಾರಾಯಣೀ ಅತಿಥಿ ಗೃಹ’ ಸಮುಚ್ಛಯವನ್ನು ಉದ್ಘಾಟಿಸಿ ಆಶೀರ್ವಚನ ನೀಡಿ ಮಾತನಾಡಿದರು.

ಇತ್ತೀಚಿನ ಕೆಲವು ವರ್ಷಗಳಲ್ಲಿ ಬಸ್ರೂರಿನ ಶ್ರೀ ಮಹಾಲಸಾ ನಾರಾಯಣೀ ದೇವಾಲಯದಲ್ಲಿ ಅನೇಕ ರೀತಿಯ ವಿವಿಧ ಧಾರ್ಮಿಕ ಚಟುವಟಿಕೆಗಳು, ದೇವಾಲಯದ ಅಭಿವೃದ್ಧಿ ಕಾರ್ಯಗಳು, ಭಕ್ತಾದಿಗಳ ಅನುಕೂಲಕ್ಕಾಗಿ ವಿವಿಧ ಯೋಜನೆಗಳು ಯಶಸ್ವಿಯಾಗಿ ನಡೆದಿದ್ದು, ದೇವಾಲಯಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ನಿರ್ಮಿಸಿರುವ ಶ್ರೀ ನಾರಾಯಣೀ ಅತಿಥಿ ಗೃಹ ಶ್ರೀದೇವರ ಅನುಗ್ರಹ ಮತ್ತು ಗುರುಗಳ ಆಶೀರ್ವಾದದಿಂದ ಉತ್ತಮವಾಗಿ ನಡೆಯಲಿ ಎಂದು ಆಶೀರ್ವದಿಸಿದರು.

ದೇವಳಕ್ಕೆ ಆಗಮಿಸಿದ ಶ್ರೀಗಳನ್ನು ಟಿ.ನಾರಾಯಣ ಎಂ.ಪೈ ಮಣಿಪಾಲ ಹಾಗೂ ಡಾ.ಕಾಶೀನಾಥ ಪೈ ಗಂಗೊಳ್ಳಿ ಅವರು ದೇವಳದ ಧರ್ಮದರ್ಶಿ ಮಂಡಳಿ ಪರವಾಗಿ ಸ್ವಾಗತಿಸಿ ಶ್ರೀಗಳ ಪಾದಪೂಜೆ ನೆರವೇರಿಸಿದರು. ಇದೇ ಸಂದರ್ಭ ಅತಿಥಿ ಗೃಹದ ದಾನಿಗಳಿಗೆ ಶ್ರೀಗಳು ಗೌರವ ಪ್ರಸಾದ ನೀಡಿ ಆಶೀರ್ವದಿಸಿದರು.

ದೇವಳಕ್ಕೆ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ದೇವಳದ ಸಭಾಭವನದ ಸಮೀಪದ ಸುಂದರ ಪರಿಸರದಲ್ಲಿ ನಿರ್ಮಾಣಗೊಂಡಿರುವ ಶ್ರೀ ನಾರಾಯಣೀ ಅತಿಥಿ ಗೃಹ ಸಮುಚ್ಛಯವು ೧೮ ಸುಸಜ್ಜಿತ ವಿಶಾಲ ಕೊಠಡಿಗಳನ್ನು ಒಳಗೊಂಡಿದೆ. ಕಾರ್ಯಕ್ರಮದಲ್ಲಿ ದೇವಳದ ಧರ್ಮದರ್ಶಿ ಮಂಡಳಿ ಸದಸ್ಯರು, ಪುರೋಹಿತರು, ದಾನಿಗಳು, ಊರಿನ ಹತ್ತು ಸಮಸ್ತರು, ಸ್ವಸಮಾಜ ಕುಳಾವಿ, ಭಜಕಬಾಂಧವರು ಪಾಲ್ಗೊಂಡಿದ್ದರು.

????????????????????????????????????
Exit mobile version