Kundapra.com ಕುಂದಾಪ್ರ ಡಾಟ್ ಕಾಂ

ಕೊಲ್ಲೂರು: ಕಾಡುಕೋಣ ಢಿಕ್ಕಿ. ಬೈಕ್ ಸವಾರ ಭಾಸ್ಕರ ಗಾಣಿಗ ನಿಧನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸ್ಮಶಾನ ಮೌನ ಆವರಿಸಿದೆ. ಮಗಳ ಮದುವೆಗೆ ಲವಲವಿಕೆಯಿಂದ ತಿರುಗಾಡುತ್ತಿದ್ದ ತಂದೆಯ ಜೀವ ಸಂಜೆಯ ವೇಳೆಗೆ ದುರಂತ ಅಂತ್ಯ ಕಂಡಿದೆ. ಕೊಲ್ಲೂರಿಗೆ ಸಮೀಪದ ಮಹಾಸತಿ ಕಟ್ಟೆಗೆ ದೀಪ ಹಚ್ಚಿ ಹಿಂತಿರುತ್ತಿದ್ದ ಕೆ. ಭಾಸ್ಕರ ಗಾಣಿಗ (54) ಅವರ ಬೈಕಿಗೆ ಕಾಡುಕೋಣ ಢಿಕ್ಕಿ ಹೊಡೆದು ತೀವ್ರ ಗಾಯಗೊಂಡ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಕೊಲ್ಲೂರು ಹೊರವಲಯದಲ್ಲಿರುವ ಶ್ರೀ ಮಹಾಸತಿ ಕಟ್ಟೆಗೆ ಸಾಯಂಕಾಲ ಎಂದಿನಂತೆ ದೀಪಹಚ್ಚಿ ತಮ್ಮ ಬೈಕಿನಲ್ಲಿ ಹಿಂತಿರುಗುತ್ತಿದ್ದಾಗ ರಸ್ತೆಯಲ್ಲಿ ಎದುರಾದ ಕಾಡುಕೋಣ ಇವರ ಬೈಕಿಗೆ ಢಿಕ್ಕಿಹೊಡೆದು ಕಾಡಿನಲ್ಲಿ ಮರೆಯಾಗಿತ್ತು. ಬೈಕಿನೊಂದಿಗೆ ನೆಲಕ್ಕುರುಳಿ ತೀವ್ರ ಗಾಯಗೊಂಡ ಇವರನ್ನು ರಾತ್ರಿ ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಮರುದಿನ ಬೆಳಿಗ್ಗೆ ನಿಧನ ಹೊಂದಿದ್ದಾರೆ. ಎ.27ರ ಮಗಳ ಮದುವೆಗೆ ತಯಾರಿಯಲ್ಲಿದ್ದ ಕುಟುಂಬವನ್ನು ಇವರ ಅನಿರೀಕ್ಷಿತ ಸಾವು ಕಂಗೆಡಿಸಿದೆ.

ಮೃತರು ಸಹೋದರ, ತಾಪಂ ಮಾಜಿ ಸದಸ್ಯ ಕೆ. ರಮೇಶ್ ಗಾಣಿಗ ಸೇರಿದಂತೆ ಪತ್ನಿ, ಪುತ್ರ, ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Exit mobile version