Kundapra.com ಕುಂದಾಪ್ರ ಡಾಟ್ ಕಾಂ

ಜನ ಕೈಜೋಡಿಸಿದರೆ ಸರಕಾರದ ಯೋಜನೆಗೆ ಬಲ: ಶಾಸಕ ಗೋಪಾಲ ಪೂಜಾರಿ

ಕುಂದಾಪುರ : ಸರಕಾರಗಳು ಜನರ ಪ್ರಗತಿಯನ್ನು ಗುರಿಯಾಗಿರಿಸಿಕೊಂಡು ಯೋಜನೆಗಳನ್ನು ರೂಪಿಸುತ್ತವೆ ಮತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ. ಅವುಗಳ ಅನುಷ್ಠಾನ ಹಂತದಲ್ಲಿ ಜನರು ಕೈಜೋಡಿಸಿದರೆ ಈ ಯೋಜನೆಗಳಿಗೆ ಬಲ ಬರುತ್ತದೆ. ಈ ಮಾತಿಗೆ ಮರವಂತೆಯ ಜನರ ಉಪಕ್ರಮ ಒಂದು ಅತ್ಯುತ್ತಮ ನಿದರ್ಶನ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.

ಅವರು ನಡೆದ ಮರವಂತೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವದ ಅಧ್ಯಕ್ಷತೆ ವಹಿಸಿ, ನೂತನ ಅಮೃತ ಭವನವನ್ನು ಉದ್ಘಾಟಿಸಿ ಮಾತನಾಡಿದರು. ಮರವಂತೆ ಗ್ರಾಮ ಪಂಚಾಯತ್ ತನ್ನ ವಿಶಿಷ್ಟ ಸಾಧನೆಗಳ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. ಇದೀಗ ಇಲ್ಲಿನ ಜನರು ಸರಕಾರಿ ಶಾಲೆಗೆ ಶಾಶ್ವತ ಕೊಡುಗೆಗಳನ್ನು ನೀಡುವ ಮೂಲಕ ಶಾಲೆಯ ಅಮೃತ ಮಹೋತ್ಸವವನ್ನು ಅನ್ವರ್ಥಗೊಳಿಸಿದ್ದಾರೆ. ಜನರ ಕೊಡುಗೆಗೆ ಪ್ರತಿಯಾಗಿ ಸರಕಾರವೂ ಸ್ಪಂದಿಸಲಿದೆ ಎಂದು ಅವರು ಹೇಳಿದರು.

ಮುಖ್ಯ ಅತಿಥಿ, ಕೆನಡಾದಲ್ಲಿ ಜೈವಿಕ ತಂತ್ರಜ್ಞಾನ ವಿಜ್ಞಾನಿಯಾಗಿರುವ ಶಾಲೆಯ ಹಿಂದಿನ ವಿದ್ಯಾರ್ಥಿ ಡಾ. ಎಂ. ಶ್ರೀನಿವಾಸ ಮಧ್ಯಸ್ಥ ಅಮೃತ ಮಹೋತ್ಸವವನ್ನು ಉದ್ಘಾಟಿಸಿದರು. ತಮ್ಮ ಬಾಲ್ಯದ ಬದುಕು, ಶಾಲೆಯಲ್ಲಿನ ಆರಂಭಿಕ ಕಲಿಕೆ, ಮುಂದಿನ ಶಿಕ್ಷಣ, ಆ ಬಳಿಕದ ಸಾಧನೆಗಳನ್ನು ಸ್ಮರಿಸಿದರು. ಸಾಧನೆಗೆ ಸ್ಪಷ್ಟ ಗುರಿ, ಕೆಲಸದಲ್ಲಿ ಶ್ರದ್ಧೆ, ಶ್ರಮ ಮತ್ತು ದೃಢತೆ ಅಗತ್ಯ ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ್ ಸದಸ್ಯ ಕೆ. ಬಾಬು ಶೆಟ್ಟಿ ಕಂಪ್ಯೂಟರ್ ಕೊಠಡಿ ಉದ್ಘಾಟಿಸಿದರು. ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ್, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಶಿಧರ ಶೆಟ್ಟಿ, ಬೈಂದೂರು ವಲಯ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ ಸರಕಾರಿ ನೌಕರರ ತಾಲೂಕು ಸಂಘದ ಅಧ್ಯಕ್ಷ ದಿನಕರ ಶೆಟ್ಟಿ ಶುಭ ಹಾರೈಸಿದರು.

ಅಮೃತೋತ್ಸವ ಸಮಿತಿ ಕಾರ್ಯಾಧ್ಯಕ್ಷ ಎಸ್. ಜನಾರ್ದನ ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ಸತ್ಯನಾ ಕೊಡೇರಿ ವರದಿ ಓದಿದರು. ಶಿಕ್ಷಕಿ ಸೀತಾ ಜೋಗಿ ಸಂದೇಶ ವಾಚಿಸಿದರು. ಸೀತಾರಾಮ ಕೊಠಾರಿ ನಿರೂಪಿಸಿದರು. ಸುಂದರ ಶೆಟ್ಟಿ ವಂದಿಸಿದರು. ದಾನಿಗಳ ಸನ್ಮಾನ, ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ನಡೆದುವು. ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ಆರ್. ಕೆ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗಣೇಶ ಪೂಜಾರಿ, ವಿದ್ಯಾರ್ಥಿ ನಾಯಕಿ ತೃಪ್ತಿ ವೇದಿಕೆಯಲ್ಲಿದ್ದರು. ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ನೃತ್ಯ, ನಾಟಕ, ಯಕ್ಷಗಾನ ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರನ್ನು ರಂಜಿಸಿದುವು.

Exit mobile version