Kundapra.com ಕುಂದಾಪ್ರ ಡಾಟ್ ಕಾಂ

ಕಸಾಪ ನಿಕಟಪೂರ್ವಾಧ್ಯಕ್ಷ, ಅಪ್ರತಿಮ ಸಂಘಟಕ ಪುಂಡಲೀಕ ಹಾಲಂಬಿ ಇನ್ನಿಲ್ಲ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ. ಎ.24: ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವಾಧ್ಯಕ್ಷ ಪುಂಡಲೀಕ ಹಾಲಂಬಿ (65) ಇಂದು ಬೆಳಿಗ್ಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ  ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಚಿಕಿತ್ಸೆಗೆ ಸ್ಪಂದಿಸದೇ ಅವರು ನಿಧನರಾಗಿದ್ದಾರೆ. ಮೃತರು ಮಡದಿ ಹಾಗೂ ಈರ್ವ ಗಂಡು ಮಕ್ಕಳನ್ನು ಅಗಲಿದ್ದಾರೆ. ಹಾಲಂಬಿ ಅವರ ನಿಧನಕ್ಕೆ ನಾಡಿನ ಗಣ್ಯರು, ಸಾಹಿತಿಗಳು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳು ಕಂಬನಿ ಮಿಡಿಸಿದ್ದಾರೆ.

ಸರಳ ವ್ಯಕ್ತಿತ್ವ, ಸ್ಪುಟವಾದ ಮಾತುಗಾರಿಕೆ, ಸ್ನೇಹಪರತೆ, ಸೇವಾ ಮನೋಭಾವ, ಕ್ರೀಯಾಶೀಲತೆ, ಅಭಿವೃದ್ಧಿ ಪರ ಚಿಂತನೆ, ಸಂಘಟನಾ ಕೌಶಲ್ಯ, ಹೋರಾಟದ ಹಾದಿ ಇವೇ ಮುಂತಾದ ಗುಣಗಳ ಮೂಲಕ ಕನ್ನಡ ನಾಡಿನಲ್ಲಿ ಚಿರಸ್ಥಾಯಿಯಾಗಿ ಉಳಿದವರು ಪುಂಡಲೀಕ ಹಾಲಂಬಿಯವರು.

ಹಾಲಂಬಿ ನಡೆದ ಹಾದಿ
ಕನ್ನಡ ಸಾಹಿತ್ಯ ಪರಿಚಾರಿಕೆಯ ಮೂಲಕ ಗುರುತಿಸಿಕೊಂಡಿದ್ದ ಹಾಲಂಬಿಯವರು ಸಂಘಟನೆ, ಆಡಳಿತ ನಿರ್ವಹಣೆಯ ಮೂಲಕ ತನ್ನದೇ ಆದ ಛಾಪು ಮೂಡಿಸಿದವರು. ಕಸಾಪ ನಿಟಕಪೂರ್ವ ಅಧ್ಯಕ್ಷರಾಗಿ, ಹತ್ತಾರು ವರ್ಷಗಳ ಕಾಲ ಕಸಾಪದ ವಿವಿಧ ಹುದ್ದೆಗಳನ್ನಲಂಕರಿಸಿ ನಾಡಿನಾದ್ಯಂತ ಕನ್ನಡ ಕಟ್ಟುವ ಕಾಯಕದಲ್ಲಿ ತೊಡಗಿಸಿಕೊಂಡವರು ಹಾಲಂಬಿಯವರು. ಸ್ವತಃ ಸಾಹಿತಿಯಲ್ಲದಿದ್ದರೂ ನಾಡು-ನುಡಿಯ ಬಗೆಗೆ ಅಪಾರ ಅನುಭವವನ್ನು ಹೊಂದಿದವರು. ಕನ್ನಡ ನಾಡು ನುಡಿ ಮತ್ತು ಕನ್ನಡಿಗರ ಧಕ್ಕೆಯಾದರೆ ಹೋರಾಟಕ್ಕೆ ಸಿದ್ಧ ಎನ್ನುವ ಹಾಲಂಬಿಯವರ ದಿಟ್ಟ ನಿಲುವು ಮತ್ತು ಸಂಘಟನಾ ಚತುರತೆ ಅವರನ್ನು ಪರಿಷತ್ತನ ಅತ್ಯುನ್ನತ ಹುದ್ದೆಗೇರಿಸಿತ್ತು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಕುಂದಾಪುರ ತಾಲೂಕಿನ ಹಾಲಾಡಿ ಹಾಲಂಬಿಯವರ ಹುಟ್ಟೂರು. ತಂದೆ ಚಂದ್ರಶೇಖರ ಹಾಲಂಬಿ. ತಾಯಿ ವಾಸಂತಿ. ತನ್ನ ಪ್ರಾಥಮಿಕ ಶಿಕ್ಷಣವನ್ನು ಕೋಡೇರಿ, ಅರಕಲುಗೋಡು ಹಾಗೂ ಖಂಬದಕೋಣೆಯಲ್ಲಿ, 9ನೇ ತರಗತಿಯನ್ನು ಕುಂದಾಪುರದ ಬೋರ್ಡ ಹೈಸ್ಕೂಲ್ನಲ್ಲಿ ಹಾಗೂ ಎಸ್.ಎಸ್.ಎಲ್.ಸಿ ಯನ್ನು ಖಂಬದಕೋಣೆ ಪ್ರೌಡಶಾಲೆಯಲ್ಲಿ ಪೂರೈಸಿದರು. ಮುಂದೆ ಬೆಂಗಳೂರಿನಲ್ಲಿ ಶಿಕ್ಷಣ ಮುಂದುವರಿಸಿ ಸೆಂಟ್ರಲ್ ಕಾಲೇಜಿನಲ್ಲಿ ಎಂ.ಎ ಪದವಿ ಪಡೆದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರಸಾರಂಗ ವಿಭಾಗದಲ್ಲಿ ಸಮನ್ವಯಕಾರರಾಗಿ ಅವರು ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ಎರಡು ಅವಧಿಲ್ಲಿ ಕಸಾಪದ ಕಾರ್ಯದರ್ಶಿ ಮತ್ತು ಕೋಶಾಧ್ಯಕ್ಷರಾಗಿ, 24ನೇ ಅಧ್ಯಕ್ಷರಾಗಿ ಪರಿಷತ್ತಿನ ಅಭಿವೃದ್ಧಿಗಾಗಿ ದುಡಿದಿದವರು. ಹೋಟೆಲ್ ಉದ್ದಿಮೆದಾರರ ಸಹಕಾರಿ ಬ್ಯಾಂಕನ ಬೆನ್ನೆಲುಬಾಗಿರುವ ಹಾಲಂಬಿ ಬ್ಯಾಂಕಿನ ಬೆಳವಣಿಗೆಯಲ್ಲಿ ಕ್ರೀಯಾಶೀಲ ಪಾತ್ರವಹಿಸಿದ್ದರು. ಮಾತ್ರವಲ್ಲದೆ ಇನ್ನೂ ಅನೇಕ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

Exit mobile version