Kundapra.com ಕುಂದಾಪ್ರ ಡಾಟ್ ಕಾಂ

ಹರ್ಕೂರು-ನಾರ್ಕಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನ: ಪ್ರತಿಷ್ಠಾ ಮಹೋತ್ಸವ ಬ್ರಹ್ಮಕುಂಭಾಭಿಷೇಕ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಕಾರ್ಯತತ್ಪರತೆ, ಕರ್ಮನಿಷ್ಠೆಯು ಭಗವಂತನಿಗೆ ಪ್ರಿಯವಾಗುತ್ತದೆ. ಕೇವಲ ಜೀವಿಸಿದ ಮಾತ್ರಕ್ಕೆ ಶ್ರೇಷ್ಠತ್ವ ಪ್ರಾಪ್ತಿಯಾಗುವುದಿಲ್ಲ. ಸಾಧನೆಯಿಂದ ಮಾತ್ರ ಬ್ರಹ್ಮತ್ವ ಸಿದ್ಧಿ ಸಾಧ್ಯ ಎಂದು ವಿದ್ಯಾವಾಚಸ್ಪತಿ ಡಾ. ವಿಶ್ವಸಂತೋಷ ಭಾರತಿ ಶ್ರೀಪಾದರು ನುಡಿದರು.

ಹರ್ಕೂರು ಗ್ರಾಮದ ನಾರ್ಕಳಿ ಬ್ರಾಹ್ಮಣರಬೆಟ್ಟುವಿನ ನವನಿರ್ಮಿತ ಕಾರಣಿಕ ಕ್ಷೇತ್ರ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಶ್ರೀ ಮಹಿಷಮರ್ದಿನಿ ಅಮ್ಮನವರ ಪ್ರತಿಷ್ಠಾ ಮಹೋತ್ಸವ ಬ್ರಹ್ಮಕುಂಭಾಭಿಷೇಕ ಅಂಗವಾಗಿ ಶನಿವಾರ ಜರಗಿದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಕುಂಕುಮ ಧಾರಣೆಯು ದೇವಿ ಸಾನ್ನಿಧ್ಯದ ಪ್ರತೀಕವಾಗಿದೆ. ಸ್ತ್ರೀ ಜಾಗೃತಿಯಿಂದ ಭಾರತೀಯ ಸಂಸ್ಕೃತಿ ಉಳಿದಿದೆ. ದೇವರ ಹೆಸರಿನಲ್ಲಿ ಕಟ್ಟಿದ ಸಂಘಟನೆ ಬಲಿಷ್ಠವಾಗಿ ಉಳಿಯುತ್ತದೆ. ದೇಶ, ಧರ್ಮಕ್ಕಾಗಿ ಯುವಕರು ಒಂದಾಗಿ ಕೆಲಸ ಮಾಡಿದಾಗ ದೇಶ ಸುಭದ್ರವಾಗಬಲ್ಲುದು ಎಂದರು.

ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೃಷ್ಣಪ್ರಸಾದ್ ಅಡ್ಯಂತಾಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಧಾರ್ಮಿಕ ಜಾಗೃತಿಯಿಂದ ಹಿಂದುತ್ವದ ರಕ್ಷಣೆ ಸಾಧ್ಯ ಎಂದರು. ಮುಖ್ಯ ಅತಿಥಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಉದ್ಯಮಿ ಬಿ. ಎಂ. ಸುಕುಮಾರ ಶೆಟ್ಟಿ, ಜಿ. ಪಂ. ಸದಸ್ಯ ಕೆ. ಬಾಬು ಶೆಟ್ಟಿ, ತಾ. ಪಂ. ಸದಸ್ಯೆ ಇಂದಿರಾ ಶೆಟ್ಟಿ, ಗ್ರಾ. ಪಂ. ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ, ಉದ್ಯಮಿಗಳಾದ ಜಗದೀಶ್ ಶೆಟ್ಟಿ ಹೆಮ್ಮುಂಜೆ, ಅಶೋಕ್ ಶೆಟ್ಟಿ ಜಡ್ಡಾಡಿ, ನಿವೃತ್ತ ಮುಖ್ಯಶಿಕ್ಷಕ ಗೋಪಾಲಕೃಷ್ಣ ಶೆಟ್ಟಿ ನಾರ್ಕಳಿ-ಹಳ್ಳಿಜಡ್ಡು, ಶೀನಪ್ಪ ಶೆಟ್ಟಿ ನಾರ್ಕಳಿ ಮುಗಿನವರಮನೆ, ವಿಜಯಾ ಬ್ಯಾಂಕ್ ನಿವೃತ್ತ ಮೆನೇಜರರಾದ ತೇಜಪ್ಪ ಶೆಟ್ಟಿ ಹಳ್ಳಿ ಹೊಸಿಮನೆ ಮತ್ತು ಆನಂದ ಶೆಟ್ಟಿ ನಾರ್ಕಳಿ ಹಳಗೇರಿಮನೆ, ನಿವೃತ್ತ ಅಧ್ಯಾಪಕ ಸದಾಶಿವ ಶೆಟ್ಟಿ ನಾರ್ಕಳಿ ಮಕ್ಕಿಮನೆ, ನಿವೃತ್ತ ಮುಖ್ಯಶಿಕ್ಷಕ ಡಿ. ವಿ. ಅಡಿಗ ದಕ್ಕೆರಕೊಡಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಂದ್ರಯ್ಯ ಆಚಾರ್ಯ ಕಳಿ ಮೊದಲಾದವರು ಉಪಸ್ಥಿತರಿದ್ದರು. ದಾನಿಗಳನ್ನು ಈ ಸಂದರ್ಭದಲ್ಲಿ ಸಮ್ಮಾನಿಸಲಾಯಿತು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುಧಾಕರ ಶೆಟ್ಟಿ ಹಳಗೇರಿಮನೆ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕ ಉದಯಕುಮಾರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ನಿವೃತ್ತ ಅಧ್ಯಾಪಕ ಸದಾಶಿವ ಶೆಟ್ಟಿ ನಾರ್ಕಳಿ ವಂದಿಸಿದರು. ಪ್ರಧಾನ ಅರ್ಚಕ ವೇ.ಮೂ. ಶೇಷ ಅಡಿಗ ಮತ್ತು ಸಹೋದರರು ಹರ್ಕೂರು ನೂಜಿ ಹಾಗೂ ಪ್ರಧಾನ ಪುರೋಹಿತ ವೇ.ಮೂ. ಚೆನ್ನಕೇಶವ ಉಪಾಧ್ಯಾಯ ಮತ್ತು ಸಹೋದರರು ಕುಂದಬಾರಂದಾಡಿ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿಗಳು ಜರಗಿದವು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಆಕಾಶವಾಣಿ ಕಲಾವಿದ ಚಂದ್ರ ಕೆ. ಹೆಮ್ಮಾಡಿ ಮತ್ತು ಬಳಗದವರಿಂದ ಸುಗಮ ಸಂಗೀತ ಹಾಗೂ ದೂರದರ್ಶನ ಕಲಾವಿದೆ ಕಲಾವತಿ ದಯಾನಂದ್ ಮತ್ತು ತಂಡ ಉಡುಪಿ ಅವರಿಂದ ಜಾನಪದ ಸಂಗೀತ ಕಾರ್ಯಕ್ರಮ ನಡೆಯಿತು.

Exit mobile version