Kundapra.com ಕುಂದಾಪ್ರ ಡಾಟ್ ಕಾಂ

ಹೆಮ್ಮಾಡಿ ಲಕ್ಷ್ಮೀನಾರಾಯಣ ದೇವಳ ರಥೋತ್ಸವ ಅಂಗವಾಗಿ ಅದ್ಧೂರಿ ಸಾಂಸ್ಕೃತಿಕ ರಸಸಂಜೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಹೆಮ್ಮಾಡಿಯ ಪುರಾಣೇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮೀನಾರಾಯಣ ದೇವಳದ ವಾರ್ಷಿಕ ಬ್ರಹ್ಮರಥೋತ್ಸವದ ಅಂಗವಾಗಿ ಸ್ಥಳೀಯ ಎಸ್. ಆರ್. ಡೆಕೋರೇಟರ‍್ಸ್ ಸಂಸ್ಥೆ ಆಶ್ರಯದಲ್ಲಿ ಇಲ್ಲಿನ ಶಾಲಾ ಮೈದಾನದಲ್ಲಿ ಜರಗಿದ ಸಂಗೀತ ರಸಸಂಜೆ ಮತ್ತು ನೃತ್ಯ ಕಾರ್ಯಕ್ರಮ ಜನಮನ ರಂಜಿಸಿತು. ನವೀನ್‌ಚಂದ್ರ ಕೊಪ್ಪ ನೇತೃತ್ವದ ಮಂಗಳೂರಿನ ಶಿವಾನಿ ಮ್ಯೂಸಿಕಲ್‌ನ ಕಲಾವಿದರು ನಡೆಸಿಕೊಟ್ಟ ಕಾರ್ಯಕ್ರಮವು ನೆರೆದ ಸಾವಿರಾರು ಜನರಿಗೆ ಸಾಂಸ್ಕೃತಿಕ ರಸದೌತಣ ನೀಡಿತು.

ಉದ್ಯಮ ಮತ್ತು ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಪ್ರಸಿದ್ಧವಾದ ಎಸ್. ಆರ್. ಡೆಕೋರೇಟರ‍್ಸ್ ಸಂಸ್ಥೆ ಆಶ್ರಯದಲ್ಲಿ ನಡೆದ ೩ನೇ ವರ್ಷದ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮದ ಅಂಗವಾಗಿ ಜರಗಿದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೆಮ್ಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಹರೀಶ್ ಭಂಡಾರಿ ಅವರು ಮಾತನಾಡಿ, ಶ್ರೀ ಲಕ್ಷ್ಮೀನಾರಾಯಣ ದೇವರ ಬ್ರಹ್ಮರಥೋತ್ಸವದ ಅಂಗವಾಗಿ ಸಾರ್ವಜನಿಕರಿಗೆ ಸಾಂಸ್ಕೃತಿಕ ಮನರಂಜನೆ ಒದಗಿಸುವ ನಿಟ್ಟಿನಲ್ಲಿ ಹಮ್ಮಿಕೊಂಡ ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ಇದು ಕೇವಲ ಮನರಂಜನೆ ನೀಡುವ ಕಾರ್ಯಕ್ರಮವಷ್ಟೇ ಅಲ್ಲದೇ ಊರ ಹಬ್ಬದ ನೆನಪಿನಲ್ಲಿ ಸಾರ್ವಜನಿಕರಲ್ಲಿ ಸಾಮರಸ್ಯವನ್ನು ಬೆಸೆಯುವ ಪ್ರಯತ್ನವಾಗಿರುವುದು ಅತ್ಯಂತ ಶ್ಲ್ಯಾಘನೀಯ ಎಂದರು.

ಮುಖ್ಯ ಅತಿಥಿ ಕುಂದಾಪ್ರ ಭಾಷಾ ಚಲನಚಿತ್ರ ಬಿಲಿಂಡರ್ ಸಂಗೀತ ನಿರ್ದೇಶಕ, ನಟ ಕುಂದಗನ್ನಡ ಖ್ಯಾತಿಯ ರವಿ ಬಸ್ರೂರು ಅವರು ಮಾತನಾಡಿ, ಕುಂದಗನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ಕುಂದಗನ್ನಡಿಗರದ್ದಾಗಿದೆ. ಕುಂದಗನ್ನಡ ಭಾಷೆಯನ್ನು ಜನಪ್ರಿಯಗೊಳಿಸುವ ಹಾಗೂ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಕುಂದಗನ್ನಡವನ್ನು ಸಿನೆಮಾ ಮಾಧ್ಯಮದ ಮೂಲಕ ಎತ್ತಿಹಿಡಿಯುವ ಪ್ರಯತ್ನ ನಡೆಸಿದ್ದೇನೆ. ಅದಕ್ಕಾಗಿ ಹೊಡಿ ಜಾಪ್ ಬಿಸಾಕಿ ಕುಂದಾಪ್ರ್ ಭಾಷೆ ಮಾತಾಡಿ ಎಂದರು.

ಜಿಲ್ಲಾ ಪಂಚಾಯತ್ ಸದಸ್ಯೆ ಶೋಭಾ ಜಿ. ಪುತ್ರನ್, ಹೆಮ್ಮಾಡಿ ಗ್ರಾಮ ಪಂಚಾಯತ್ ಸದಸ್ಯ ಆನಂದ ಪಿ. ಎಚ್., ಕಟ್‌ಬೇಲ್ತೂರು ಗ್ರಾಮ ಪಂಚಾಯತ್ ಸದಸ್ಯ ಚಂದ್ರಶೇಖರ ಭಟ್, ಕುಂದಾಪುರ ಠಾಣಾ ಉಪನಿರೀಕ್ಷಕ ನಾಸಿರ್ ಹುಸೇನ್, ಪತ್ರಕರ್ತ ಶಶಿಧರ ಪೈ, ತಾಲೂಕು ಕಾರ್ಮಿಕ ಸಂಘಟನೆ ಉಪಾಧ್ಯಕ್ಷ ಸಂತೋಷ್ ದೇವಾಡಿಗ ಮೂಡಾಡಿ, ಎಸ್. ಆರ್. ಡೆಕೋರೇಟರ‍್ಸ್ ಸಂಸ್ಥೆ ವ್ಯವಸ್ಥಾಪಕ ರವಿ ಕೆ. ಹೆಮ್ಮಾಡಿ ಮೊದಲಾದವರು ಉಪಸ್ಥಿತರಿದ್ದರು.

ಹೆಮ್ಮಾಡಿ ಶ್ರೀ ಲಕ್ಷ್ಮೀನಾರಾಯಣ ದೇವಳ ಪುನರ್ರಚನಾ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು, ಅನಿರೀಕ್ಷಿತವಾಗಿ ನಿಧನರಾದ ಜಿಲ್ಲಾ ಅಬಕಾರಿ ನಿರೀಕ್ಷಕ ಶಂಕರ ಎ. ಪಿ. ಅವರಿಗೆ ಸಭೆಯಲ್ಲಿ ಸಾರ್ವತ್ರಿಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ಹೆಮ್ಮಾಡಿಯ ಯಕ್ಷಗಾನ ಬಾಲಕಲಾವಿದ ಧನರಾಜ್ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿ ಪ್ರಾರ್ಥಿಸಿ, ಸ್ವಾಗತಿಸಿದರು. ವಸಂತ ಹೆಮ್ಮಾಡಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Exit mobile version