Kundapra.com ಕುಂದಾಪ್ರ ಡಾಟ್ ಕಾಂ

ಬ್ಯಾಂಕುಗಳು ಹಣದ ವಹಿವಾಟಿನ ಜೊತೆಗೆ ಮಾರ್ಗದರ್ಶಿ ಸಂಸ್ಥೆಗಳಾಗಿ ರೂಪುಗೊಳ್ಳುತ್ತಿವೆ: ಅಪ್ಪಣ್ಣ ಹೆಗ್ಡೆ

ಕುಂದಾಪುರ ಕೋಣಿಯಲ್ಲಿ ಕರ್ಣಾಟಕ ಬ್ಯಾಂಕಿನ 728ನೇ ಶಾಖೆ ಹಾಗೂ ಎಟಿಎಂ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬ್ಯಾಂಕುಗಳು ಹಣದ ವಹಿವಾಟು ನಡೆಸಲಷ್ಟೇ ಸೀಮಿತವಾಗರದೇ ಸಮಾಜದ ಪ್ರತಿಯೊಬ್ಬ ನಾಗರಿಕನಿಗೂ ಅಗತ್ಯವಾದ ಸಲಹೆ, ಸಹಕಾರ, ಮಾರ್ಗದರ್ಶವನ್ನು ನೀಡುವ ಸಂಸ್ಥೆಗಳಾಗಿ ರೂಪುಗೊಳ್ಳುತ್ತಿದೆ. ಆರ್ಥಿಕ ಚಟುವಟಿಕೆಯನ್ನು ನಡೆಸುವ ಮೂಲಕ ಸಮಾಜದ ವಿವಿಧ ರಂಗಗಳಲ್ಲಿ ಅಗತ್ಯವಾದ ಸಹಕಾರ ಬ್ಯಾಂಕಿಂಗ್ ಕ್ಷೇತ್ರದಿಂದ ದೊರೆಯುತ್ತಿದೆ ಬಸ್ರೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮೊಕ್ತೇಸರರಾದ ಬಿ. ಅಪ್ಪಣ್ಣ ಹೆಗ್ಡೆ ಹೇಳಿದರು.

ಅವರು ಕುಂದಾಪುರ ತಾಲೂಕಿನ ಕೋಣಿಯಲ್ಲಿ ಕರ್ಣಾಟಕ ಬ್ಯಾಂಕಿನ ವಿತ್ತೀಯ ಶಾಖೆ ಹಾಗೂ ಎಟಿಎಂ ಉದ್ಘಾಟಿಸಿ ಮಾತನಾಡಿದರು. ಬ್ಯಾಂಕುಗಳಿಂದ ಸಾಲ ಪಡೆದ ಉದ್ದೇಶಕ್ಕಾಗಿ ಹಣವನ್ನು ವಿನಿಯೋಗಿಸದಿದರೇ ಅದರ ಮುರುಪಾವತಿಯ ಕಷ್ಟವೆನಿಸುತ್ತದೆ. ಮರುಪಾವತಿ ಮಾಡದಿದರೇ ಬಡ್ಡಿಯ ಮೇಲೆ ಬಡ್ಡಿ ಬೇಳೆಯುತ್ತದೆ. ಅದರ ಬದಲು ಬ್ಯಾಂಕಿನಿಂದ ಸಲಹೆ ಪಡೆದರೇ ಸಾಲ ಮಾಡಿದವನೂ ಹೊರೆಯಾಗದಂತೆ ಮರುಪಾವತಿ ಮಾಡಬಹುದಾಗಿದೆ. ತಂತ್ರಜ್ಞಾನ ಯುಗದಲ್ಲಿ ಹೊಸ ಸವಲತ್ತುಗಳನ್ನು ನೀಡುತ್ತಾ ಗ್ರಾಹಕರಿಗೆ ನೀಡುತ್ತಿರುವ ಬ್ಯಾಂಕುಗಳು ಕಾರ್ಯ ಸ್ವಾಗತಾರ್ಹ ಎಂದ ಅವರು ಖಾಸಗಿ ರಂಗದಲ್ಲಿ ವಿಶೇವಾದ ಪ್ರಗತಿ ಸಾಧಿಸಿರುವ ಕರ್ಣಾಟಕ ಬ್ಯಾಂಕ್ ಎಲ್ಲಾ ವಿಧದಲ್ಲಿಯೂ ಜನಸ್ನೇಹಿಯಾಗಿ ರೂಪುಗೊಂಡು ರಾಷ್ಟ್ರೀಕೃತ ಬಾಂಕುಗಳಿಗೆ ಸಮನಾಗಿ ನಿಂತಿರುವುದು ಶ್ಲಾಘನೀಯ ಎಂದರು.

ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಪಿ. ಜಯರಾಮ ಭಟ್ ಮಾತನಾಡಿ ಗ್ರಾಮೀಣ ಭಾಗದ ಜನರಿಗೆ ಬ್ಯಾಂಕಿಂಗ್ ಸೌಲಭ್ಯವನ್ನು ಒದಗಿಸಲು ಆದ್ಯತೆ ನೀಡಲಾಗುತ್ತಿದ್ದು 2020ರ ವೇಳೆಗೆ 1000 ಶಾಖೆಗಳನ್ನು ತೆರೆಯುವ ಯೋಜನೆಯಿದೆ. ಜನರೇ ನೇರವಾಗಿ ವ್ಯವಹರಿಸುವ ಈ-ಲೊಬಿ ಸೌಲಭ್ಯವನ್ನು ಹೆಚ್ಚಿಸಲು ಕಾರ್ಯಯೋಜನೆ ಹಾಕಿಕೊಳ್ಳಲಾಗಿದೆ. ಇಂಟರ್‌ನೆಟ್ ಬ್ಯಾಂಕಿಂಗ್, ಮೊಬೈಲ್ ಬಾಂಕಿಂಗ್‌ಗೆ ಒತ್ತು ನೀಡುತ್ತಿರುವುದರಿಂದ ಮುಂದಿನ ಐದು ವರ್ಷದಲ್ಲಿ ವಿದ್ಯುನ್ಮಾನದ ವ್ಯವಹಾರಗಳು 50%ದಿಂದ 90% ಕ್ಕೆ ಏರಿಕೆಯಾಗಲಿದೆ ಎಂದರು. ಒಂದು ಕಾಲದಲ್ಲಿ ಕೃಷಿ ಸಾಲವನ್ನು ಅತೀ ಹೆಚ್ಚು ನೀಡುತ್ತಿದ್ದ ಹೆಗ್ಗಳಿಕೆ ಕರ್ಣಾಟಕ ಬ್ಯಾಂಕಿನದ್ದಾಗಿತ್ತು. ಇಂದೂ ಕೂಡ ಕೃಷಿ ಕ್ಷೇತ್ರಕ್ಕೆ ಮನ್ನಣೆ ನೀಡಲಾಗುತ್ತಿದೆ. ಸಾಮಾಜಿಕ ಕಳಕಳಿಯ ವಿಚಾರಗಳ ಬಗ್ಗೆ ಬ್ಯಾಂಕ್ ಆಸಕ್ತಿ ವಹಿಸಿದೆ ಎಂದರು.

ಕಾರ್ಯಕ್ರಮದಲ್ಲಿ ಕರ್ಣಾಟಕ ಬ್ಯಾಂಕಿನ ಮಾಜಿ ನಿರ್ದೇಶಕ ಎ.ಜಿ. ಕೊಡ್ಗಿ, ನಿರ್ದೇಶಕ ಡಾ.ಎಚ್. ರಾಮಮೋಹನ್ ಉಪಸ್ಥಿತರಿದ್ದರು. ಕಟ್ಟಡದ ಮಾಲೀಕ ಆನಂದ ಭಂಡಾರಿ, ಜಿಲ್ಲಾ ಪಂಚಾಯತ್ ಸದಸ್ಯೆ ಲಕ್ಷ್ಮೀ ಮಂಜು ಬಿಲ್ಲವ, ಮೊದಲಾದವರನ್ನು ಗೌರವಿಸಲಾಯಿತು. ಸವಿತಾ ಪ್ರಾರ್ಥಿಸಿದರು. ಉಡುಪಿ ಪ್ರಾದೇಶಿಕ ಕಛೇರಿಯ ಸಹಾಯಕ ಮಹಾ ಪ್ರಬಂಧಕಿ ವಿದ್ಯಾಲಕ್ಷ್ಮೀ ಆರ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿದರು. ಎಮ್. ರಮೇಶ ನಿರೂಪಿಸಿದರು. ಶಾಖಾ ಪ್ರಬಂಧಕ ನಾಗಪ್ಪ ಪೂಜಾರಿ ವಂದಿಸಿದರು. / ಕುಂದಾಪ್ರ ಡಾಟ್ ಕಾಂ ಸುದ್ದಿ./

Exit mobile version