Kundapra.com ಕುಂದಾಪ್ರ ಡಾಟ್ ಕಾಂ

ಮಕ್ಕಳಿಗೆ ಸಂಸ್ಕಾರ ಕಲಿಸುವ ಹೊಣೆ ಮಾತೆಯರದು: ಮಂಗೇಶ ಶೆಣೈ

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಮಕ್ಕಳನ್ನು ಸಂಸ್ಕಾರವಂತರಾಗಿ ಬೆಳೆಸಬೇಕಾದ ಹೊಣೆ ಮಾತೆಯರಿಗೆ ಸೇರಿದೆ. ಅವರು ಆ ಕೆಲಸಕ್ಕೆ ಮುಂದಾದರೆ ಮಾತ್ರ ದೇಶ ಸುಸಂಸ್ಕೃತ ಪ್ರಜೆಗಳನ್ನು ಹೊಂದಲು ಸಾಧ್ಯ ಎಂದು ಯಳಜಿತ ಸಿದ್ಧಿವಿನಾಯಕ ಸಾಂಸ್ಕೃತಿಕ ಕೇಂದ್ರದ ಸಂಚಾಲಕ ವೈ. ಮಂಗೇಶ ಶೆಣೈ ಹೇಳಿದರು.

ಖಂಬದಕೋಣೆ ಮಾಣಿಕ್ಯನಾಗ ಸನ್ನಿಧಿಯ ೧೪ನೆ ವಾರ್ಷಿಕೋತ್ಸವದ ನಿಮಿತ್ತ ನಡೆದ ’ಅರಿಸಿನ ಕುಂಕುಮ’ ಕಾರ್ಯಕ್ರಮದಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು. ಭಾರತೀಯ ಪರಂಪರೆಯಲ್ಲಿ ಎಲ್ಲ ಮಹಿಳೆಯರಿಗೆ ಎಲ್ಲ ಕಾಲದಲ್ಲಿ ಧಾರ್ಮಿಕ ವಿಧಿಗಳಲ್ಲಿ ಭಾಗವಹಿಸುವ ಅವಕಾಶವಿತ್ತು. ಅದಕ್ಕೆ ಹಲವು ನಿದರ್ಶನಗಳು ದೊರೆಯುತ್ತವೆ. ಆದರೆ ಯಾವುದೋ ಒಂದು ಹಂತದಲ್ಲಿ ನಿರ್ಧಿಷ್ಟ ಸಂದರ್ಭಗಳಲ್ಲಿ ಅವರನ್ನು ದೂರ ಇಡುವ ಪದ್ಧತಿ ಆರಂಭವಾಯಿತು. ಅದಕ್ಕೆ ಅಂತ್ಯ ಕಾಣಿಸಬೇಕಾದ ಕಾಲ ಬಂದಿದೆ ಎಂದು ಅವರು ನುಡಿದರು.

ಕುಂದಾಪುರದ ಮೂಕಾಂಬಿಕಾ ಮಹಿಳಾ ಮಂಡಳಿ ಒಕ್ಕೂಟದ ಕಾರ್ಯದರ್ಶಿ ಜಯಂತಿ ಎನ್. ಐತಾಳ್ ಅಧ್ಯಕ್ಷತೆ ವಹಿಸಿದ್ದರು. ಮರವಂತೆ ಸರಕಾರಿ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ ಐ. ವಸಂತಕುಮಾರಿ, ಕೊಲ್ಲೂರು ಡಾಟ್‌ಕಾಂನ ಸಂಯೋಜಕಿ ಪ್ರಿಯದರ್ಶಿನಿ ಕಮಲೇಶ್ ಬೆಸ್ಕೂರ್, ಖಂಬದಕೋಣೆ ಗ್ರಾಮ ಪಂಚಾಯತ್‌ನ ಮಾಜಿ ಸದಸ್ಯೆ ನಾಗಮ್ಮ ದೇವಾಡಿಗ ಗೊಬ್ರಾಣಿಮನೆ ಮುಖ್ಯ ಅತಿಥಿಗಳಾಗಿದ್ದರು.

ಪ್ರೀತಿ ಫೌಂಡೇಶನ್‌ನ ಉಪ ಖಜಾಂಚಿ ಜಾನಕಿ ಪೂಜಾರಿ ಸ್ವಾಗತಿಸಿದರು. ಟ್ರಸ್ಟಿ ಬೇಬಿ ರಂಗ ಪೂಜಾರಿ ಪ್ರಸ್ತಾವನೆಗೈದರು. ಆಡಳಿತ ವಿಶ್ವಸ್ಥ ರಂಗ ಎಸ್. ಪೂಜಾರಿ ಅತಿಥಿಗಳನ್ನು ಗೌರವಿಸಿದರು. ಟ್ರಸ್ಟಿ ನಾಗರಾಜ ಅಪ್ಪೇಡಿ ವಂದಿಸಿದರು. ಸುರೇಶ ಬಿ. ನಿರೂಪಿಸಿದರು. ಭಾಗವಹಿಸಿದ್ದ ಎಲ್ಲ ಮಹಿಳೆಯರಿಗೆ ಅರಿಸಿನ ಕುಂಕುಮ, ನೆನಪಿನ ಕಾಣಿಕೆ, ಧಾರ್ಮಿಕ ಕೈಪಿಡಿ, ಅನ್ನಪ್ರಸಾದ ನೀಡಲಾಯಿತು.

Exit mobile version