ಎಎಸ್ಎನ್ ಹೆಬ್ಬಾರ್ | ಕುಂದಾಪ್ರ ಡಾಟ್ ಕಾಂ ಅಂಕಣ – ಮಾಧ್ಯಮದ ಮಧ್ಯದಿಂದ |
ಕುಟುಕು ಕಾರ್ಯಾಚರಣೆ (STING OPERATION) ಯಿಂದ ಭ್ರಷ್ಠರಿಗೆ ಗುಟುಕು ನೀರು ಕುಡಿಸುವ ಹೊಸ ಉಪಕ್ರಮ ಮಾಧ್ಯಮದ ಕ್ರಾಂತಿಕಾರಕ ಸೃಷ್ಟಿ. ಭಾರತೀಯ ಜನತಾಪಕ್ಷದ ಅಧ್ಯಕ್ಷ ಬಂಗಾರು ಲಕ್ಷ್ಮಣರನ್ನೇ ಈ ‘ಕುಟುಕು ಕಾರ್ಯಾಚರಣೆ’ ಗಾದಿಯಿಂದ ಕೆಳಕ್ಕೆ ಉರುಳಿಸಿತ್ತು. ನೋಟಿನ ಬಂಡಲುಗಳನ್ನೇ ಈ ಬಂಗಾರು ಲಕ್ಷ್ಮಣ ಲಗುಬಗೆಯಿಂದ ಸ್ವೀಕರಿಸಿ ಒಳಗಿಟ್ಟುಕೊಳ್ಳುವ ದೃಶ್ಯವನ್ನು ಮಾಧ್ಯಮಗಳು ಮತ್ತೆ ಮತ್ತೆ ಪ್ರದರ್ಶಿಸಿದಾಗ, ಪದತ್ಯಾಗ ಬಂಗಾರುಗೆ ಅನಿವಾರ್ಯ ಕ್ರಿಯೆಯಾಗಿ ಬಿಟ್ಟಿತ್ತು.
ಅದೇ ರೀತಿ ಸಂಸತ್ತಿನಲ್ಲಿ ಪ್ರಶ್ನೆ ಕೇಳುವ ಕುರಿತೇ ಲಂಚ ಪಡೆಯುತ್ತಿದ್ದ ಸಂಸತ್ ಸದಸ್ಯರನ್ನೂ ಈ ಕುಟುಕು ಕಾರ್ಯಾಚರಣೆ ಬಯಲಿಗೆಳೆದು ದೇಶವಿಡೀ ರಂಪರಾಮಾಯಣವಾಗಿ ಬಿಟ್ಟಿತ್ತು. ಮಾಧ್ಯಮದ ಈ ಹೊಸ ಅಸ್ತ್ರ ಅಧಿಕಾರಸ್ಥರೆಲ್ಲ ಬೆದರಿ ಬೆಚ್ಚುವ ಬ್ರಹ್ಮಾಸ್ತ್ರವೇ ಆಗಿ ಬಿಟ್ಟಿತ್ತು. ಅಪರೂಪಕ್ಕೆ ಒಮ್ಮೊಮ್ಮೆ ಹೀಗೆ ‘ಕುಟುಕು ಕಾರ್ಯಾಚರಣೆ’ ಸುದ್ದಿ ಬಂದಾಗ ಟಿ.ವಿ.ಗಳವರ ಬ್ರೇಕಿಂಗ್ ನ್ಯೂಸ್ಗೇ ಹಬ್ಬವೋ ಹಬ್ಬ!

ಇಷ್ಟಕ್ಕೆಲ್ಲ ಕಾರಣ? ಒಂದು ಕುಟುಕು ಕಾರ್ಯಾಚರಣೆಯ ಪರಿಣಾಮ. ಅಂದೇ ದಿಲ್ಲಿಯ ಲಿವ್ ಇಂಡಿಯಾ (ಜನಮತ) ಎಂಬ ಹಿಂದಿ ಚಾನೆಲ್ನಲ್ಲಿ ಪ್ರಸಾರಗೊಂಡ ಈ ‘ಕುಟುಕು’ ಕಾರ್ಯಕ್ರಮದಲ್ಲಿ ಬಹಿರಂಗಗೊಂಡ ಭೀಕರ ಸಂಗತಿ ! ಈ ಉಮಾ ಖುರಾನಾ ಇರುವುದು ದಿಲ್ಲಿಯ ಯೋಜನಾ ವಿಹಾರದಲ್ಲಿನ ಒಂದು ಮನೆಯಲ್ಲಿ. ಇಲ್ಲಿ ಆಕೆ ಶಾಲಾ ವಿಧ್ಯಾರ್ಥಿನಿಯರಿಗೆ ಖಾಸಗಿ ಟ್ಯೂಶನ್ ಕೊಡುತ್ತಿದ್ದಳಂತೆ. ಹಾಗೆ ಟ್ಯೂಶನ್ಗೆ ಬಂದ ಹೆಣ್ಣು ಮಕ್ಕಳ ಪೈಕಿ 15ರಿಂದ 18ರ ವರೆಗಿನ ಪ್ರಾಯಕ್ಕೆ ಬಂದ ಹೆಣ್ಣು ಮಕ್ಕಳಿಗೆ ಆಕೆ ಪಾನೀಯ ನೀಡುತ್ತಿದ್ದಳಂತೆ. ಅದರಲ್ಲಿ ಅಮಲು ಬರುವಂತಾದ್ದನ್ನು ಏನೋ ಬೆರಸುತ್ತಿದ್ದಳಂತೆ. ಇದನ್ನು ಕುಡಿದ ಹುಡುಗಿಯರೆಲ್ಲ ಪ್ರಜ್ಞೆ ತಪ್ಪಿ ಬಿಡುತ್ತಿದ್ದರಂತೆ, ಅದನ್ನೇ ಕಾದ ಈ ಟೀಚರ್ ಈ ಹೆಣ್ಣು ಮಕ್ಕಳನ್ನು ಬೆತ್ತಲಾಗಿಸಿ ಚಿತ್ರೀಕರಣ ನಡೆಸುತ್ತಾಳಂತೆ. ನಂತರ ಅವರನ್ನು ವೇಶ್ಯಾ ವೃತ್ತಿಗೆ ಬಲಾತ್ಕರಿಸುತ್ತಿದ್ದಳಂತೆ. ಯಾರಿಗಾದರೂ ಈ ಸಂಗತಿ ಹೇಳಿದರೆ ನಿಮ್ಮ ಸ್ಥಿತಿ ನೆಟ್ಟಗಾಗಲಿಕ್ಕಿಲ್ಲ ಎಂದು ಬೆದರಿಕೆ ! (ಬ್ಲಾಕ್ಮೈಲ್) ಹಾಕುತ್ತಿದ್ದಳಂತೆ. ಇದೊಂದು ವ್ಯವಸ್ಥಿತವಾದ ವೇಶ್ಯಾ ವೃತ್ತಿಯ ಜಾಲ. ಇದರಲ್ಲಿ ದಿಲ್ಲಿಯ ಪ್ರಮುಖರೆಲ್ಲ ಇದ್ದಾರೆ ಎಂಬ ಗುಮಾನಿ ಇದೆ ಎಂದು ಲಿವ್ ಇಂಡಿಯಾ ಟಿ.ವಿ. ತನ್ನ ಕುಟುಕು ಕಾರ್ಯಾಚರಣೆಯ ದೃಶ್ಯವನ್ನು ಪ್ರಸಾರ ಮಾಡುತ್ತ ಹೇಳಿತ್ತು. /ಕುಂದಾಪ್ರ ಡಾಟ್ ಕಾಂ/
ಇದೆಲ್ಲ ಟಿ.ವಿ.ಯವರಿಗೆ ಹೇಗೆ ಗೊತ್ತಾಯಿತು? ಒಬ್ಬ ವಿದ್ಯಾರ್ಥಿನಿಯಿಂದ ! ‘ಕುಟುಕು’ ಕಾರ್ಯಾಚರಣೆಯಲ್ಲಿ ಈ ವಿದ್ಯಾರ್ಥಿನಿ ಈ ಎಲ್ಲ ಕಥೆ ಬಿಚ್ಚಿ ಹೇಳುತ್ತಿರುವ ದೃಶ್ಯ ಇದೆ. ಇದನ್ನು ಕಂಡವರು, ಕೇಳಿದವರು ಕೆರಳಿ ಕೆಂಡವಾಗದಿದ್ದಾರೇ? ಅಂದು ಈ ಸುದ್ದಿ ಕಂಡು, ಕೇಳಿ ಇಡೀ ದಿಲ್ಲಿ ನಡುಗಿತ್ತು. ಶಿಕ್ಷಣ ಇಲಾಖೆಗೆ ದಿಗ್ಭ್ರಮೆಯಾಗಿತ್ತು. ದಿಲ್ಲಿಯ ಆಡಳಿತಕ್ಕೆ ಆಘಾತವಾಗಿತ್ತು. ಶಿಕ್ಷಣ ಸಚಿವಾಲಯ ತುರ್ತು ಸಭೆ ಸೇರಿ ಈ ಸಂಗತಿಯನ್ನು ಚರ್ಚಿಸಿತು. ದಿಲ್ಲಿಯ ಶಿಕ್ಷಣ ಸಚಿವ ಎಸ್. ಲವ್ಲಿ ಸ್ವತಾಗಿ ಹೇಳಿಕೆ ನೀಡಿ ’ನಾನೇ ಸ್ವತಹಾ ಪ್ರಕರಣವನ್ನು ಕುಲಂಕುಶವಾಗಿ ಪರೀಕ್ಷಿಸಿ, ಉಗ್ರಕ್ರಮ ಕೈಗೊಳ್ಳುತ್ತೇನೆ’ ಎಂದು ಹೇಳಿಕೆ ನೀಡಿಬಿಟ್ಟರು. ಉನ್ನತಮಟ್ಟದ ಸಮಿತಿ ನೇಮಕವಾಗಿ ತನಿಖೆಗೂ ಆದೇಶವಾಯಿತು. ಇದೇ ದೃಶ್ಯಗಳು ಸಿಎನ್ಎನ್ – ಐಟಿಎನ್ನಲ್ಲೂ ಇತರ ಚಾನೆಲ್ಗಳಲ್ಲೂ ಬಂದಾಗ ಜನರ ಆಕ್ರೋಶ ಮುಗಿಲು ಮುಟ್ಟಿತು. ದಿಲ್ಲಿಯ ಮುಖ್ಯಮಂತ್ರಿ ಶೀಲಾದೀಕ್ಷಿತ್ (ಶಿಕ್ಷಣ) ಶಿಕ್ಷಕಿಯನ್ನು ಅಮಾನತು ಮಾಡಿರುವುದಾಗಿ ಘೋಷಿಸಿ ಬಿಟ್ಟಳು. /ಕುಂದಾಪ್ರ ಡಾಟ್ ಕಾಂ/
ಈ ಮಧ್ಯೆ ಅನೈತಿಕ ದಂಧೆಗೆ ಹೆಣ್ಣುಮಕ್ಕಳನ್ನು ಅಟ್ಟುವ ಕ್ರಮಗಳ ನಿವಾರಣಾ ಕಾಯಿದೆ ಪ್ರಕಾರ ಉಮಾ ಖುರಾನಾಳನ್ನು ದಿಲ್ಲಿ ಪೋಲೀಸರು ಬಂಧಿಸಿ ಬಿಟ್ಟರು. ಆಕೆಯನ್ನು ನ್ಯಾಯಾಧೀಶರ ಎದುರು ಹಾಜರು ಪಡಿಸಿದಾಗ ಆಕೆಗೆ ನ್ಯಾಯಾಂಗ ಕಸ್ಟಡಿಯನ್ನು ವಿಧಿಸಲಾಯಿತು. ಜಾಮೀನು ನಿರಾಕರಿಸಲಾಯಿತು. ದಿಲ್ಲಿಯ ಪೋಲೀಸ್ ಉಪವಿಭಾಗಾಧಿಕಾರಿ (ಡಿಸಿಪಿ) ಅಲೋಕ್ ಕುಮಾರ್ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ ತನಿಖೆ ಬಿರುಸಿನಿಂದ ಸಾಗಿದೆ ಎಂದರು. ಉಮಾ ಖುರಾನಾ ಮನೆಯನ್ನು ಪೋಲೀಸರು ಜಾಲಾಡಿದರು. ಒಂದು ಸೇಲ್ಫೋನ್ ಬಿಟ್ಟರೆ ಅವರಿಗೆ ಬೇರೇನೂ ಸಿಗಲಿಲ್ಲ. ಆದರೂ ತಲಸ್ಪರ್ಶಿ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸುವುದಾಗಿ ಪೋಲೀಸರು ಹೇಳಿಕೆ ನೀಡಿದರು. ಇತ್ತ ಜೈಲು ಸೇರಿದ ವಿಮಾ ಬುರಾನಾ ಅತ್ತ ಕೆಲಸವನ್ನೂ ಕಳೆದುಕೊಂಡು ಬಿಟ್ಟಳು. ನಿನ್ನೆಯ ವರೆಗೆ ವಿದ್ಯಾರ್ಥಿನಿಯರಿಂದ ಗೌರವ ಮನ್ನಣೆ ಪಡೆಯುತ್ತಿದ್ದ ಈ ಶಿಕ್ಷಕಿ ಒಂದು ‘ಕುಟುಕು’ ಕಾರ್ಯಾಚರಣೆ’ಯೇ ಕಾರಣವಾಗಿ ಖಳನಾಯಕಿಯಾಗಿ ಬಿಟ್ಟಳು. ಅವಳ ಗೌರವ, ಮರ್ಯಾದೆ ಪ್ರತಿಷ್ಠೆಗಳೆಲ್ಲ ಕ್ಷಣ ಮಾತ್ರದಲ್ಲಿ ಮಣ್ಣುಮುಕ್ಕಿತ್ತು. ಟಿ.ವಿ.ಗಳಲ್ಲೂ ಸಹಿತ ಆಕೆಯ ಚಿತ್ರ ಬಿತ್ತರಗೊಂಡು ಆಕೆಯನ್ನು ಕೈಗೆ ಸಿಕ್ಕರೆ ಕೊಂಡು ಬಿಡುತ್ತೇವೆ ಎಂಬಷ್ಟು ಸಿಟ್ಟು ಜನರಿಗೆ ಆಗಿತ್ತು. /ಕುಂದಾಪ್ರ ಡಾಟ್ ಕಾಂ/
ಇದೊಂದು ಕಾರಣದಿಂದಾಗಿ ಶಾಲೆಗೂ ಕೆಟ್ಟ ಹೆಸರು ಬಂದು ಬಿಟ್ಟಿತು. ಕುಟುಕು ಕಾರ್ಯಾಚರಣೆ ನಡೆಸಿ ಹುಡುಗಿಯೊಬ್ಬಳ ಬಾಯಿಯಿಂದ ಇಡೀ ಕಥೆ ಬಯಲಾಗಿಸಿದ ಲಿವ್ ಇಂಡಿಯಾ (ಜನಮಿತ್ರ) ಹಿಂದಿ ಖಾಸಗಿ ಚಾನೆಲ್ ಮತ್ತು ಅದರ ವದರಿಗಾರರನ್ನು ಜನ ಮನಸಾರೆ ಕೊಂಡಾಡಿದರು. ಪ್ರಕರಣ ನ್ಯಾಯಾಲಯದಲ್ಲಿ !
ಆದರೆ ಮುಂದೇನಾಯಿತು ? ನಿಜಕ್ಕೂ ಉಮಾ ಖುರಾನಾ ಅಪರಾಧಿಯೇ ? ಕುಟುಕು ಕಾರ್ಯಾಚರಣೆಯಲ್ಲಿ ‘ಸತ್ಯಕಥೆ’ ಹೊರಹಾಕಿದ ಈ ಹುಡುಗಿ ಯಾರು? ಈ ಕುಟುಕು ಕಾರ್ಯಾಚರಣೆಯ ಹಿಂದಿನ ರಹಸ್ಯವೇನು? ಅಮಾಯಕಳಾಗಿದ್ದ ಉಮಾಬುರಾನಾ ಅನವಶ್ಯಕವಾಗಿ ಬಲಿಪಶುವಾಗಿದ್ದಳೇ? ಮುಂದಿನ ಬಾರಿಯ ಕುಂದಾಪ್ರ ಡಾಟ್ ಕಾಂ ಅಂಕಣದಲ್ಲಿ ಓದಿ.
ಕಾರ್ಟೂನ್ – ಅಂತರ್ಜಾಲ ಕೃಪೆ