Kundapra.com ಕುಂದಾಪ್ರ ಡಾಟ್ ಕಾಂ

ಬುಡಕಟ್ಟು ಮಕ್ಕಳಿಗೆ ಭೋಧಿಸುವ ಶಿಕ್ಷಕರಿಗೆ ವಿಶೇಷ ಸಾಮರ್ಥ್ಯ ಬೇಕು

????????????????????????????????????

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಾಂಪ್ರದಾಯಿಕ ಶಿಕ್ಷಣದಲ್ಲಿ ಶಿಕ್ಷಕರ ಬೋಧನಾ ನಿರ್ವಹಣೆ ಸರಳ ಸ್ವರೂಪದ್ದಾಗಿರುತ್ತದೆ. ಅವರಿಗೆ ಸಿದ್ಧ ಪಠ್ಯ ಮತ್ತು ಸ್ವೀಕೃತ ಕಲಿಕಾ-ಬೋಧನಾ ವಿಧಾನದ ನೆರವು ಇರುತ್ತದೆ. ಆದರೆ ಬುಡಕಟ್ಟು ಮಕ್ಕಳಿಗೆ ಅವರ ಬದುಕಿನ ವಿಧಾನಗಳನ್ನೇ ಆಕರವಾಗಿ ಬಳಸಬೇಕಾಗಿರುವುದರಿಂದ ಅವರ ಶಿಕ್ಷಕರಿಗೆ ಅದು ದೊಡ್ಡ ಸವಾಲಾಗಿ ಪರಿಣಮಿಸುತ್ತದೆ. ಅದಕ್ಕೆ ವಿಶೇಷ ಸಾಮರ್ಥ್ಯ ಅಗತ್ಯ. ಆ ಸಾಮರ್ಥ್ಯ ಪ್ರಸಕ್ತ ತರಬೇತಿಯಲ್ಲಿ ಅವರು ಸಂಪಾದಿಸಲಿ ಎಂದು ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ ಆಶಿಸಿದರು.

ಇಂಡಿಯ ಫೌಂಡೇಶನ್ ಫಾರ್ ಆರ್ಟ್ಸ್ ಟೈಟನ್ ಕಂಪನಿಯ ಪ್ರಾಯೋಜಕತ್ವದಲ್ಲಿ ಕನ್ಯಾನದ ನಮ್ಮಭೂಮಿಯಲ್ಲಿ ನಡೆಸುತ್ತಿರುವ ನಾಲ್ಕು ದಿನಗಳ ’ಪಠ್ಯಕ್ರಮದಲ್ಲಿ ಸ್ಥಳೀಯ ಸಂವೇದನೆಗಳ ಸಮನ್ವಯ’ ಕುರಿತಾದ ’ಕಲಿ-ಕಲಿಸು’ ತರಬೇತಿ ಶಿಬಿರವನ್ನು ಅವರು ಉದ್ಘಾಟಿಸಿದ ಬಳಿಕ ಮಾತನಾಡಿದರು.

ಆರಂಭಿಕ ನುಡಿಗಳನ್ನಾಡಿದ ಶಿಬಿರದ ನಿರ್ದೇಶಕ, ಫೌಂಡೇಶನ್‌ನ ಕಲಾ ಶಿಕ್ಷಣ ವಿಭಾಗದ ಕಾರ್ಯಕ್ರಮ ನಿರ್ವಾಹಕ ಟಿ. ಎನ್. ಕೃಷ್ಣಮೂರ್ತಿ ’ಕಲಿ-ಕಲಿಸು’ ತರಬೇತಿಯ ವಿನ್ಯಾಸವನ್ನು ವಿವರಿಸಿದರು. ಮೈಸೂರು ಜಿಲ್ಲೆಯ ಬುಡಕಟ್ಟು ವಿದ್ಯಾರ್ಥಿಗಳು ಕಲಿಯುತ್ತಿರುವ ಶಾಲೆಗಳಲ್ಲಿ ದುಡಿಯುತ್ತಿರುವ ೫೦ ಶಿಕ್ಷಕರು ಶಿಬಿರದಲ್ಲಿ ಭಾಗವಹಿಸಿದ್ದಾರೆ. ಬುಡಕಟ್ಟುಗಳ ಸಂಪ್ರದಾಯ, ಆಚರಣೆ, ತಾಂತ್ರಿಕತೆ ಪಠ್ಯಕ್ರಮದ ಭಾಗವಾದಾಗ ಶ್ರೀಮಂತ ಕಲಿಕಾ ವಾತಾವರಣ ಸೃಷ್ಟಿಯಾಗುತ್ತದೆ ಎಂಬ ಕಾರಣದಿಂದ ಮೊದಲ ಹಂತದ ತರಬೇತಿಯಲ್ಲಿ ಸ್ಥಳೀಯ ಕಲೆಗಳನ್ನು ಪಠ್ಯಕ್ರಮದಲ್ಲಿ ಅಳವಡಿಸಿಕೊಳ್ಳುವ ಕೌಶಲವನ್ನು ಶಿಕ್ಷಕರಿಗೆ ಕಲಿಸಲಾಗುತ್ತದೆ. ಶಿಕ್ಷಕರ ಆಸಕ್ತಿಗೆ ಅನುಗುಣವಾಗಿ ಅವರಿಗೆ ರಂಗಭೂಮಿ, ಮಕ್ಕಳ ಸಾಹಿತ್ಯ, ಕರಕುಶಲ ಕಲೆ, ಬುಡಕಟ್ಟು ಸಾಹಿತ್ಯವನ್ನು ಪರಿಚಯಿಸಿ, ಅವುಗಳನ್ನು ಕಲಿಕಾ ಪ್ರಕ್ರಿಯೆಯಲ್ಲಿ ಬಳಸುವ ವಿಧಾನವನ್ನು ತಿಳಿಸಲಾಗುತ್ತದೆ ಎಂದರು.

ಗಣಪತಿ ಹೋಬಳಿದಾರ್ ಸ್ವಾಗತಿಸಿ, ಸದಾನಂದ ಬೈಂದೂರು ವಂದಿಸಿದರು. ವಿವಿಧ ಕ್ಷೇತ್ರಗಳಲ್ಲಿ ಪರಿಣತರಾಗಿದ್ದುಕೊಂಡು ಶಿಕ್ಷಕರಾಗಿ ದುಡಿಯುತ್ತಿರುವ ಗುಂಡಪ್ಪ ಗೌಡಗೋಳ್, ಗಣಪತಿ ಹೋಬಳಿದಾರ್, ಸತ್ಯನಾರಾಯಣ ಕೊಡೇರಿ, ಸದಾನಂದ ಬೈಂದೂರು, ಪ್ರಜ್ಞಾ ಹೆಗಡೆ, ಬ್ಲೇಜ್ ಜೋಸೆಫ್, ಆತ್ರೇಯಿ ಡೇ, ಎಸ್. ಕಲಾಧರ, ಮನು ಶಂಕರ್ ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿದ್ದಾರೆ.

Exit mobile version