Kundapra.com ಕುಂದಾಪ್ರ ಡಾಟ್ ಕಾಂ

ಸುರಭಿ ಬೈಂದೂರು ಸಂಸ್ಥೆಯ ರಂಗ ಸುರಭಿ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನಾಲ್ಕು ವೇದಗಳ ಸಾರವನ್ನು ಪಡೆದು ಅನಂದ ಮತ್ತು ಅರಿವನ್ನು ಮೂಡಿಸುವ ಸಲುವಾಗಿ ನಾಟ್ಯ, ನಾಟಕಗಳನ್ನು ಭರತನ ಮೂಲಕ ಸೃಷ್ಠಿಮಾಡಿಕೊಂಡ ಐದನೇ ವೇದವಾಗಿದೆ. ಇದರಲ್ಲಿ ಸಂತೋಷ ಹಾಗೂ ಜ್ಞಾನ ಎರಡೂ ಅಡಕವಾಗಿರುವುದರಿಂದ ರಂಗಕಲೆಗಳನ್ನು ಪಂಚಮವೇದ ಎಂದೂ ಕರೆಯುತ್ತಾರೆ ಎಂದು ರಂಗಕರ್ಮಿ, ರಂಗನಿರ್ದೇಶಕ ಶಿರಸಿ ಡಾ. ಶ್ರೀಪಾದ ಭಟ್ ಹೇಳಿದರು.

ಬೈಂದೂರು ಶಾರದಾ ವೇದಿಕೆಯಲ್ಲಿ ಸ್ಥಳೀಯ ಸುರಭಿ ಸಂಸ್ಥೆ ನೇತೃತ್ವದಲ್ಲಿ ನಡೆಯುವ ಮೂರು ದಿನಗಳ ಸಾಂಸ್ಕೃತಿಕ ರಂಗವೈಭವ ’ರಂಗ ಸುರಭಿ’ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ವ್ಯಾವಹಾರಿಕೆ ಕಣ್ಣು ಆದಾಯಗಳನ್ನಷ್ಟೇ ನೋಡಿದರೆ, ಕಲಾತ್ಮಕ ಕಣ್ಣು ರಸಸ್ವಾದದ ಜತೆಗೆ ರಮಣೀಯತೆಯನ್ನು ಅನುಭವಿಸುತ್ತದೆ. ಹಾಗೂ ಹೃದಯದಲ್ಲಿ ಭಾವನೆ ಸ್ಪುರಿಸುತ್ತದೆ. ತಾಯಿ ಮಗುವಿಗೆ ಜೋಗುಳ ಹಾಡುತ್ತಾ ಆ ಮೂಲಕ ತಾಯಿ, ಮಗುವಿನ ಆತ್ಮದ ರೂಪವನ್ನು ಅಂದವಾಗಿಸುತ್ತಾಳೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಇಂತಹ ಅನುಭವ ಕಡಿಮೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ಯುವಜನತೆ ಯೋಚಿಸಬೇಕಾಗಿದೆ ಎಂದರು.

ಶ್ರೀಸೇನೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಚನ್ನಕೇಶವ ಉಪಾಧ್ಯಾಯ ರಂಗವೈಭವ ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷ ಶಿವರಾಮ ಕೊಠಾರಿ ಅಧ್ಯಕ್ಷತೆವಹಿಸಿದ್ದರು. ಕಾರ್ಯದರ್ಶಿ ಲಕ್ಷ್ಮಣ ಕೊರಗ ಸ್ವಾಗತಿಸಿ, ನಿರ್ದೇಶಕ ಸುಧಾಕರ ಪಿ. ನಿರೂಪಿಸಿದರು. ಗಣಪತಿ ಹೋಬಳಿದಾರ್ ವಂದಿಸಿದರು. ನಂತರ ಯುಸ್ಕೋರ್ಡ್ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ರಂಗಶಿಬಿರದಲ್ಲಿ ತರಬೇತಿ ಪಡೆದ ಯುವ ಹಾಗೂ ಬಾಲಪ್ರತಿಭೆಗಳಿಂದ ಮೂರು ನಾಟPಗಳನ್ನೊಳಗೊಂಡ ’ಕಥಾ ಸಂಗಮ’ (ವೇಟಿಂಗ್ ಫಾರ್ ವೀಸಾ, ಒಂದು ಚೂರಿಯ ಕಥೆ, ಮೂರು ಮೆಟ್ಟಿಲುಗಳು) ಪ್ರದರ್ಶನಗೊಂಡಿತು.

Exit mobile version