
ಸಂದೀಪ್ ಶೆಟ್ಟಿ ಹೆಗ್ಗದ್ದೆ | ಕುಂದಾಪ್ರ ಡಾಟ್ ಕಾಂ ಅಂಕಣ
ಅವಳು ಮಾತೆ. ಪ್ರಾಯ 80 ಆಗಿರಬಹುದು. ಬೆನ್ನು ಬಾಗಿದೆ. ನೇರವಾಗಿ ನಿಲ್ಲುವುದು ಬಿಡಿ, ನೆಟ್ಟಗೆ ಕಾಲು ಚಾಚಿ ಮಲಗಲು ಕಷ್ಟಪಡುವ ಸ್ಥಿತಿಯಲ್ಲಿದ್ದಾಳೆ. ಜೀವ ಇದ್ದು ಸಾಯಿಸುತ್ತಿರುವ ಉಬ್ಬಸ, ವಿಪರೀತ ಕೆಮ್ಮು ಖಾಯಂ ಆಗಿ ಸತಾಯಿಸಿ ಪ್ರತಿ ದಿನವೂ ನಿದ್ದೆಗೆಡಿಸುತ್ತಿದೆ. ಆಗಾಗ ಹಳೆ ನೆನಪುಗಳಿಗೆ ಹೋಗಿ ಹೋಗಿ ಬರುತ್ತಿದ್ದ ಅವಳ ಕಣ್ಣಂಚಿನಲ್ಲಿ ಕಣ್ಣೀರು ಸುಮಾರು ವರ್ಷಗಳಿಂದ ಮಾಮೂಲಾಗಿ ಜಿನುಗುತ್ತಿದೆ. ಒಂದು ಕಾಲದಲ್ಲಿ ತನ್ನದೇ ಸ್ವಂತ ಮನೆ, ಮಗ, ಗಂಡ ಆಸ್ತಿ ಎಲ್ಲವನ್ನು ಹೊಂದಿದ್ದ ಅವಳ ಜೀವನ ಇಂದು ಸಾಗುತ್ತಿರುವುದು ವೃದ್ಧಾಶ್ರಮದಲ್ಲಿ. ಅಂದು ಅದೆಷ್ಟೋ ಜನರಿಗೆ ಊಟ ನೀಡಿದ್ದ ಕೈಗಳು ಇಂದು ಅನ್ನ ಪಡೆಯಲು ಹವಣಿಸುತ್ತಿದೆ. ಜೀವಕ್ಕೆ ಜೀವವಾಗಿದ್ದ ಗಂಡ ಆ ದಿನ ಹೃದಯಾಘಾತದಿಂದ ತೀರಿಕೊಂಡ ಬಳಿಕ ಎಲ್ಲಾ ನೋವನ್ನು ಬಿಗಿಹಿಡಿದುಕೊಂಡು ಇದ್ದ ಒಬ್ಬ ಮಗನಿಗೆ ಅಲ್ಲೋ ಇಲ್ಲೋ ಸಾಲ ಮಾಡಿ ಮದುವೆ ಮಾಡಿಸಿ, ಬಡ ಕುಟುಂಬದ ಹುಡುಗಿಯನ್ನೇ ಆರಿಸಿಕೊಂಡು ಮನೆ ಬೆಳಗಿಸಿಕೊಂಡಿದ್ದಳು. ಒಂದಷ್ಟು ದಿನ ಹೊಸತನದಲ್ಲೇ ಮನೆಯೇನೋ ಬೆಳಗಿತು. ಮಗನಿಗೆ ಬರೆದ ಸರ್ಕಾರಿ ಪರೀಕ್ಷೆಯೊಂದು ಪಾಸಾಗಿ ಕೆಲಸವೂ ದೊರೆಯಿತು. ಕೈ ತುಂಬ ಸಂಬಳ, ಮನೆ ತುಂಬ ನಗು ಕಾಣುತ್ತಿದೆ ಎನ್ನುವಾಗಲೇ ಸೊಸೆಯ ನಾಟಕೀಯ ಬದುಕು ನರ್ತಿಸಲು ಪ್ರಾರಂಭಿಸತೊಡಗಿತು. ಕುಂತರೂ ತಪ್ಪು, ನಿಂತರೂ ತಪ್ಪು… ಐಶ್ವರ್ಯ ಹೇಗೆ ಜಾಸ್ತಿಯಾಗತೊಡಗಿತೋ ಅಂತೆಯೇ ಮನೆಯ ಸುಖ, ಶಾಂತಿ, ನೆಮ್ಮದಿಗಳೂ ಮೂಲೆ ಸೇರಿ ದಿನಾಲೂ ಗಲಾಟೆ ಗೌಜುಗಳಲ್ಲೇ ನೆಮ್ಮದಿಯ ದೀಪ ಆರತೊಡಗಿತು. ಮಗ ಇತ್ತ ವಯಸ್ಸಿನ ಅಮ್ಮನನ್ನೂ, ಅತ್ತ ಪ್ರಾಯದ ಹೆಂಡತಿ ಇಬ್ಬರನ್ನೂ ಬಿಟ್ಟುಕೊಡಲಾಗದೇ ಒದ್ದಾಟ ದಿನದೂಡತೊಡಗಿದ. ಕೊನೆಗೂ ಮಾತೆಯೇ ಸೋತಳು. ‘ಎಲ್ಲವೂ ನಿನ್ನದೇ ಮಗನೆ ವೃದ್ಧರಿಗಾಗಿಯೇ ಒಂದು ಆಶ್ರಮವಿದೆಯಂತೆ ನನ್ನನ್ನೂ ಅಲ್ಲಿಗೆ ಸೇರಿಸಿಬಿಡು’ ಎಂದು ಶ್ರಮದ ಬೆವರಲ್ಲಿ ಕಟ್ಟಿದ್ದ ಮನೆಗೆ ಬೀಳ್ಕೊಡುವ ಮಾತನ್ನು ಆಡಿದ್ದಳು. ಮಗನೂ ದೊಡ್ಡ ಮನಸ್ಸು ಮಾಡಿ ಆಶ್ರಮಕ್ಕೆ ಸೇರಿಸಿಯೇ ಬಿಟ್ಟಿದ್ದ. ಕುಂದಾಪ್ರ ಡಾಟ್ ಕಾಂ ಅಂಕಣ.
****
ಪಂಕ್ತಿ ಬಡಿಸುವ ಅಡುಗೆ ಭಟ್ಟರಿಂದ ಉತ್ತರ ಬಂತು…
ಅವರಿಗೆ ಒಬ್ಬನೇ ಮಗನಂತೆ. ತುಂಬಾ ಪ್ರೀತಿಯಿಂದ ಓದಿಸಿದ್ರಂತೆ. ತಕ್ಕಂತೆ ಟ್ಯಾಲೆಂಟ್ಗನುಸಾರ ಅಮೇರಿಕಾದಲ್ಲಿ ವೈಧ್ಯಕೀಯ ಸಂಸ್ಥೆಯೊಂದರಲ್ಲಿ ವೃತ್ತಿಯನ್ನು ನಿರ್ವಹಿಸಲು ಅವಕಾಶ ದೊರೆತು ಅಲ್ಲಿಗೂ ಅವನನ್ನು ಕಳುಹಿಸಿಕೊಟ್ಟಿದ್ದರಂತೆ. ಆದರೆ ವಿದೇಶಕ್ಕೆ ಹೋದ ಮಗ ಒಂದೆರಡು ಬಾರಿ ಬಂದು ಹೋದವ ಮತ್ತೆ ವಾಪಸ್ಸು ಬರಲೇ ಇಲ್ಲ. ಅಲ್ಲಿಯೇ ಮದುವೆಯಾಗಿ ಸೆಟ್ಲ್ ಆದ ಆತ ಇವರನ್ನು ಹೇಗೆ ಮರೆತನೋ, ಅದ್ಯಾವ ಮನಸ್ಸು ಮರೆಯುವಂತೆ ಮಾಡಿತೋ ಇದುವರೆಗೂ ತಿಳಿದಿಲ್ಲ. ಸದ್ಯ ಸರ್ಕಾರದಿಂದ ಬರುವ 500 ರೂಪಾಯಿ ಮಾಸಾಶನದಿಂದ ಜೀವನ ದೂಡುತ್ತಿದ್ದಾರೆ. ಇರು ಮಾತ್ರಾ ಇಂದಿಗೂ ಅವನ ಬರುವಿಕೆಗೆ ಕಾಯುತ್ತಲೇ ಇದ್ದಾರೆ. ಅಮೇರಿಕಾದಂತ ದೊಡ್ಡ ಕಂಟ್ರಿಯ ಜನರಿಗೆ ಮೆಡಿಸಿನ್ ಕೊಡುವ, ಖಾಯಿಲೆ ಗುಣಪಡಿಸುವ ಆತನಿಗೆ ತನ್ನ ತಂದೆ ತಾಯಿ ಇಲ್ಲಿ ಅನಾರೋಗ್ಯದಿಂದ, ನಿರಾಶಾಭಾವದಿಂದ, ಹೊಟ್ಟೆಗೂ ಹಿಟ್ಟಿಲ್ಲದೇ ಬದುಕುತ್ತಿರುವುದು ಕಾಣದೇ ಹೋಗಿದೆ!?.
ಇದು ಸ್ಯಾಂಪಲ್ ಅನಿಸುವ ಕಥೆಗಳಷ್ಟೇ ಅಷ್ಟೇ. ಇದೇ ರೀತಿಯ ಇನ್ನೆಷ್ಟೋ ಸಮಸ್ಯೆಗಳು, ಕತೆಗಳು ನಮ್ಮೊಳಗೆ ಇವೆಯೋ ಪಟ್ಟಿ ಮಾಡುತ್ತಾ ಹೋದರೆ ಅಂತ್ಯವೇ ಕಾಣಲ್ಲ ಬಿಡಿ. ಸಮಾಜ ಯಾಕೆ ಹೀಗೆ ಆಗ್ತಿದೆ!?, ಸಾಮಾಜಿಕ ಸಂಬಂಧಗಳು ಯಾಂತ್ರೀಕೃತವಾಗುತ್ತಿವೆಯಾ? ಹಣದ ಮೋಹ ಸಂಬಂಧಗಳ ಮೌಲ್ಯವನ್ನು ಮರೆಯುತ್ತಿದೆಯಾ? ಜೀವವನ್ನೇ ಇತ್ತು ಜೀವ ನೀಡಿರುವ ಹೆತ್ತವರ್ಯಾಕೆ ನಮಗೆ ಭಾರವಾಗುತ್ತಿದ್ದಾರೆ!?. ಚಿಕ್ಕಂದಿನಲ್ಲಿ ಮಲಗಲು ಹಾಸಿಗೆಯಿಲ್ಲದಿದ್ದರೂ ಹೊದೆಯಲು ಬೆಡ್ ಶೀಟ್ ಇಲ್ಲದಿದ್ದರೂ, ಅಪ್ಪನ ಪಂಚೆಯನ್ನೋ, ಅಮ್ಮನ ಸೆರಗನ್ನೋ ಎಳೆದು ಹೊದ್ದು ಮಲಗಿದ್ದ ಮಕ್ಕಳಿಗೆ ಬೆಳೆದು ದೊಡ್ಡವರಾದ ಮೇಲೆ ಅರಮನೆಯಂತ ಬಂಗಲೆಯಲ್ಲಿ ವಾಸಿಸುತ್ತಿರುವಾಗ ತಂದೆ ತಾಯಿಯನ್ಯಾಕೆ ವೃದ್ದಾಶ್ರಮದ ಗೋಣಿಚೀಲದಲ್ಲಿ ಮಲಗಿಸಬೇಕನಿಸುತ್ತೆ!?, ಮಾನವೀಯತೆಯ ಮೌಲ್ಯ ನಮಗಿಲ್ವಾ? ಅಥವಾ ಭಾವನೆ ಬಿಕಾರಿಯಾಗಿದೆಯಾ? ತಿಳಿಯುತ್ತಿಲ್ಲ. ನೀವು ಸ್ವಲ್ಫ ಯೋಚಿಸಿ… ಕುಂದಾಪ್ರ ಡಾಟ್ ಕಾಂ ಅಂಕಣ
ಹೆತ್ತವರಿಗೆ ಇಳಿವಯಸ್ಸಲ್ಲಿ ಬೇಕಾಗಿರುವುದು ತಮ್ಮ ಕರುಳಬಳ್ಳಿಯ ಪ್ರೀತಿ, ವಾತ್ಸಲ್ಯ, ಮತ್ತು ಮಮತೆ ಅಷ್ಟೆ. ಮಕ್ಕಳ ಅರಮನೆ, ಆಡಂಬರ ಐಶ್ವರ್ಯ, ಫಿಜಾ-ಬರ್ಗರ್, ಬಿರಿಯಾನಿಗಳಲ್ಲ. ನಮ್ಮ ಪೂರ್ವಜರ ಮನೆಗಳು ಅವಿಭಕ್ತ ಕುಟುಂಬದಲ್ಲೇ ಕೂಡಿದ್ದರಿಂದ ನಮ್ಮ ತಂದೆ ತಾಯಿಗಳು ಹೆಚ್ಚಾಗಿ ಅಂತಹ ವಾತಾವರಣದಲ್ಲೇ ಬೆಳೆದಿರುತ್ತಾರೆ ಅವರಿಗೆ ಒಂಟಿತನದಲ್ಲಿ ಬದುಕಲು ಬಿಟ್ಟರೆ ಅದು ಅಸಾಧ್ಯ. ಮನೆಯಲ್ಲಿ ಮಕ್ಕಳು-ಮೊಮ್ಮಕ್ಕಳು ಇದ್ದರೆ ಅವರ ಜೊತೆಗೂಡಿ ತಮ್ಮ ವೃದ್ದಾಪ್ಯವನ್ನು ಮರೆತು ಯವೌನದ ದಿನಗಳಿಗೆ ತಿರುಗಿ ನೋವನ್ನು ಮರೆತು ಸುಖಿಯಾಗಿರುತ್ತಾರೆ. ಮೊಮ್ಮಕ್ಕಳ ಆಟ ಪಾಠ ಮತ್ತು ಒಡನಾಟಗಳಲ್ಲಿ ಮಗದೊಮ್ಮೆ ಬದುಕಿನ ವಸಂತವನ್ನು ಪಡೆಯುತ್ತಾರೆ. ಒಂದು ನೆನಪಿಡಿ ಮಿತ್ರರೇ, ಬಾಳಿನ ಮುಸ್ಸಂಜೆಯ ಹೊತ್ತಲ್ಲಿ ಬೇಕಿರುವುದು ಬೋಗಾಭೋಗಗಳಲ್ಲ ಬದಲಾಗಿ ಕುಟುಂಬ ಭದ್ರತೆ ಮತ್ತು ನೆಮ್ಮದಿ. ಅದನ್ನು ನೀಡಿಲ್ಲವಾದರೆ ಅಂತಹ ಮಕ್ಕಳಿಂದ ಸಮಾಜಕ್ಕೆ ಪ್ರಯೋಜನವಿಲ್ಲ, ಹೀಗೆ ಸಾಗಿದರೆ ಸಮಾಜದ ಅಧಃಪತನ ತಪ್ಪಿದಲ್ಲ. ಕುಂದಾಪ್ರ ಡಾಟ್ ಕಾಂ.
ನಿಮಗೆ ಗೊತ್ತಾ!?… ಪುಟ್ಟದಾಗಿ ಬಂದ ಈ ಜೀವಕೆ, ಪುಟಗಟ್ಟಲೇ ವಿದ್ಯೆಯ ಕೊಟ್ಟು, ಪ್ರಪಂಚಕ್ಕೆ ಪರಿಚಯಿಸುವ ಪ್ರಸ್ತಾವನೆ ತಂದೆಯಾದರೆ, ನೀರಿಲ್ಲದ ಈ ಬೇರಿಗೆ ನೀರುಣಿಸಿ, ನಯವಿನಯವ ತಿಳಿಪಡಿಸಿ ನಲ್ಮೆಯ ನಲಿವನ್ನು ಉಣಬಡಿಸಿ ಸಾರ್ಥಕತೆಯ ಜೀವನ ಕೊಡುವವಳೆ ತಾಯಿ. ಅಂತಹವರನ್ನು ದೇವರಂತೆ ಪೂಜಿಸಿ ಆರಾಧಿಸದರೆ ಪುಣ್ಯ ಬರುತ್ತದೆಯೇ ಹೊರತು ಮನೆಯಿಂದ ಹೊರಗಟ್ಟಿದರೆ ಸುಖಿಯಾಗುವೆ ಎನ್ನುವ ಗೊಡ್ಡು ನಂಬಿಕೆಯಿದ್ದರೆ ಬಿಟ್ಟು ಬಿಡಿ. ತಂದೆ ತಾಯಿಯರ ಸೇವೆ ಮಾಡುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಅದು ಸಿಕ್ಕವನು ನಿಜವಾಗಿಯೂ ಪುಣ್ಯವಂತ. ಈ ಮೇಲೆ ಹೇಳಿರುವ ಎರಡು ಉದಾಹರಣೆಯನ್ನು ದೀರ್ಘವಾಗಿ, ಆಳವಾಗಿ ಅರಿಯಬೇಕಾದರೆ ಒಮ್ಮೆ ನಿಮಗೆ ಹತ್ತಿರವಿರುವ ಅನಾಥಾಶ್ರಮಗಳಿಗೆ ಭೇಟಿ ಕೊಡಿ. ಅಲ್ಲಿ ಸಿಗುವ ಯಾರಾದರೂ ಒಬ್ಬರನ್ನು ಕುಳ್ಳಿರಿಸಿಕೊಂಡು ನಿಮ್ಮ ನೋವೇನು? ಎಂದು ಕೇಳಿ, ತಮ್ಮ ಇಳಿವಯಸ್ಸಿನಲ್ಲೂ ಅದುಮಿಟ್ಟುಕೊಂಡು ಬದುಕುತ್ತಿರುವ ಅವರ ನೋವು ಸಂಕಟವನ್ನೆಲ್ಲಾ ಒಮ್ಮೆ ಕೇಳಿದರೆ ನಿಜವಾಗಿಯೂ ಪ್ರಪಂಚ ಇಷ್ಟೊಂದು ಕೆಟ್ಟದಾಗಿದೆಯಾ ಎಂದು ಅನ್ನಿಸದಿರದು.