Kundapra.com ಕುಂದಾಪ್ರ ಡಾಟ್ ಕಾಂ

ಬಗ್ವಾಡಿಯಲ್ಲಿ ಸಾರ್ವಜನಿಕ ಸಾಮೂಹಿಕ ಶನೇಶ್ವರ ಯಾಗ ಸಂಪನ್ನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮೊಗವೀರ ಯುವ ಸಂಘಟನೆ ರಿ., ಉಡುಪಿ ಜಿಲ್ಲೆ, ಹೆಮ್ಮಾಡಿ ಘಟಕ ಮತ್ತು ಸಾರ್ವಜನಿಕ ಸಾಮೂಹಿಕ ಶನೇಶ್ವರ ಯಾಗ ಸಮಿತಿ ವತಿಯಿಂದ ಬಗ್ವಾಡಿ ಶ್ರೀ ಮಹಿಷಾಸುರಮರ್ದಿನಿ ಸನ್ನಿಧಿಯಲ್ಲಿ ಸಾರ್ವಜನಿಕ ಸಾಮೂಹಿಕ ಶನೇಶ್ವರ ಯಾಗ ನಡೆಯಿತು.

ಸಾರ್ವಜನಿಕ ಸಾಮೂಹಿಕ ಶನೇಶ್ವರ ಯಾಗದ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕರಾದ ಡಾ|ಜಿ.ಶಂಕರ್ ಮಾತನಾಡಿ, ಜನರಲ್ಲಿ ಧಾರ್ಮಿಕ ಪ್ರಜ್ಞೆ ಬೆಳೆಸುವಲ್ಲಿ ಮೊಗವೀರ ಯುವ ಸಂಘಟನೆಯ ಹೆಮ್ಮಾಡಿ ಘಟಕ ಹಾಗೂ ಯಾಗ ಸಮಿತಿಯ ನೇತೃತ್ವದಲ್ಲಿ ನಡೆದ ಸಾಮೂಹಿಕ ಶನೇಶ್ವರ ಯಾಗ ಶ್ಲಾಘನೀಯ ಕಾರ್ಯ ಎಂದು ಅಭಿಪ್ರಾಯ ಪಟ್ಟರು. ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕದ ಅಧ್ಯಕ್ಷ ವಾಸು ಜಿ.ನಾಯ್ಕ್ ವಂಡ್ಸೆ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕ ಕೆ.ಗೋಪಾಲ ಪೂಜಾರಿ, ಮುಂಬಯಿ ಉದ್ಯಮಿ, ಮೊಗವೀರ ಬ್ಯಾಂಕ್‌ನ ನಿರ್ದೇಶಕರಾದ ಗೋಪಾಲ ಎಸ್ ಪುತ್ರನ್, ಮೊಗವೀರ ಯುವ ಸಂಘಟನೆಯ ಜಿಲ್ಲಾ ಅಧ್ಯಕ್ಷ ಗಣೇಶ ಕಾಂಚನ್, ಮೊಗವೀರ ಮಹಾಜನ ಸಂಘ ಬಗ್ವಾಡಿ ಹೋಬಳಿ ಅಧ್ಯಕ್ಷ ಎಂ.ಎಂ.ಸುವರ್ಣ, ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಿರಿಯಣ್ಣ ಚಾತ್ರಬೆಟ್ಟು ಶುಭ ಶಂಸನೆಗೈದರು.

ಶ್ರೀ ಶನೇಶ್ವರ ಯಾಗ ಸಮಿತಿಯ ಕಾರ್ಯಾಧ್ಯಕ್ಷರಾದ ಆನಂದ, ಮಹಿಷಾಮರ್ದಿನಿ ಭಕ್ತವೃಂದ ಬೆಂಗಳೂರು ಇದರ ಅಧ್ಯಕ್ಷ ಶ್ರೀಧರ ಕೆಂಚನೂರು, ಉದ್ಯಮಿ ನಾರಾಯಣ ಚಂದನ್, ನಾಗರಾಜ ಪುತ್ರನ್, ನಾಗೇಶ ಪುತ್ರನ್, ಹೆಮ್ಮಾಡಿ ಜನತಾ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಹರಿಶ್ಚಂದ್ರ ಹೆಬ್ಬಾರ್, ಮೊಗವೀರ ಯುವ ಸಂಘಟನೆ ನಿಕಟಪೂರ್ವಾಧ್ಯಕ್ಷರಾದ ಜಯ ಸಿ.ಕೋಟ್ಯಾನ್, ಸದಾನಂದ ಬಳ್ಕೂರು, ಹೆಮ್ಮಾಡಿ ಘಟಕದ ಕಾರ್ಯದರ್ಶಿ ಪ್ರಭಾಕರ ಸೇನಾಪುರ, ಯಾಗ ಸಮಿತಿ ಕಾರ್ಯದರ್ಶಿ ರಾಜು ಶ್ರೀಯಾನ್ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಅನ್ನಸಂತರ್ಪಣೆಯ ಸೇವಾಕರ್ತರಾದ ಪ್ರದೀಪ ಚಂದನ್ ಅವರನ್ನು ಸನ್ಮಾನಿಸಲಾಯಿತು. ಕೃಷ್ಣ ಅಡಿಗ ನೀಲಾವರ ಧಾರ್ಮಿಕ ಪ್ರವಚನ ನೀಡಿದರು. ಇದೇ ಸಂದರ್ಭದಲ್ಲಿ ಸಾರ್ವಜನಿಕ ಶನೇಶ್ವರ ಯಾಗಕ್ಕೆ ಸಹಕರಿಸಿದ ದಾನಿಗಳನ್ನು, ಸೇವಾಕರ್ತರನ್ನು ಸನ್ಮಾನಿಸಲಾಯಿತು. ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕದ ಸ್ಥಾಪಕಾಧ್ಯಕ್ಷ ಉದಯಕುಮಾರ್ ಹಟ್ಟಿಯಂಗಡಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕ ಮಂಜುನಾಥ್ ಚಂದನ್ ನೆಂಪು ಕಾರ್ಯಕ್ರಮ ನಿರ್ವಹಿಸಿದರು. ನಿಕಟಪೂವಾಧ್ಯಕ್ಷ ಮಂಜುನಾಥ ಆರ್.ಆರಾಟೆ ವಂದಿಸಿದರು.

ಸಂಕಲ್ಪ ಸಹಿತ ಪೂಜೆ, ಭಕ್ತಾದಿಗಳಿಂದ ಶನಿದೇವರಿಗೆ ಕಪ್ಪು ಎಳ್ಳು ಮತ್ತು ಎಳ್ಳೆಣ್ಣೆ ಅರ್ಪಣೆಗೆ ಅವಕಾಶ, ಮಧ್ಯಾಹ್ನ ಕುಂದಬಾರಂದಡಿ ಕಾಲಾವದಿ ಮನೆ ದಿ|ಮಂಜು ನಾಯ್ಕ ಸ್ಮರಣಾರ್ಥವಾಗಿ ಇವರ ಪುತ್ರ ಪ್ರದೀಪ್ ಎಮ್.ಚಂದನ್ ಮತ್ತು ಮನೆಯವರು ಸೇವೆಯಾಗಿ ಅನ್ನ ಸಂತರ್ಪಣೆ ನಡೆಯಿತು. ಐದು ಸಾವಿರಕ್ಕೂ ಹೆಚ್ಚು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Exit mobile version