Kundapra.com ಕುಂದಾಪ್ರ ಡಾಟ್ ಕಾಂ

ವಿಶ್ವಗುರು ಭಾರತದಲ್ಲಿ ಶಾಂತಿಯಿಂದರೇ ಮಾತ್ರ ವಿಶ್ವಶಾಂತಿ ಸಾಧ್ಯ: ಬಾಲ ವಾಗ್ಮಿ ಅಕ್ಷಯ್ ಕುಮಾರ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ವಿಶ್ವದಲ್ಲಿ ಶಾಂತಿ ನೆಲೆಸಬೇಕಾದರೆ ಭಾರತದಲ್ಲಿ ಶಾಂತಿ ನೆಲೆಸಬೇಕು. ಭಾರತದಲ್ಲಿ ಶಾಂತಿ ನೆಲೆಸಬೇಕಾದರೆ ನಮ್ಮ ದೇಶದಲ್ಲಿ ಹಿಂದು ಧರ್ಮ ಗಟ್ಟಿಯಾಗಿ ನೆಲೆ ನಿಲ್ಲಬೇಕಿದೆ. ಹೀಗಾಗಿ ವಿಶ್ವಗುರು ಎನಿಸಿಕೊಂಡಿರುವ ಭಾರತದಲ್ಲಿ ಹಿಂದು ಧರ್ಮವನ್ನು ಅತ್ಯಂತ ಗಟ್ಟಿಯಾಗಿ ನೆಲೆಗೊಳಿಸಬೇಕಾಗಿದೆ. ಯುವ ಜನರಲ್ಲಿ ದೇಶಭಕ್ತಿ, ದೇಶಪ್ರೇಮ ಬೆಳೆಸುವ ಮೂಲಕ ಭಾರತವು ಹಿಂದು ರಾಷ್ಟ್ರ ಎಂಬುದನ್ನು ಜಗತ್ತಿಗೆ ಸಾರುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಬಾಲ ವಾಗ್ಮಿ ಅಕ್ಷಯ್ ಕುಮಾರ್ ಶಿರಸಿ ಹೇಳಿದರು.

ಅವರು ಗಂಗೊಳ್ಳಿ ಮ್ಯಾಂಗನೀಸ್ ರೋಡ್‌ನ ಭಗತ್ ಸಿಂಗ್ ಅಭಿಮಾನಿ ಬಳಗದ ಆಶ್ರಯದಲ್ಲಿ ಗಂಗೊಳ್ಳಿಯ ಸಂಪಿಗೆ ಜಟ್ಟಿಗೇಶ್ವರ ದೇವಸ್ಥಾನದ ವಠಾರದಲ್ಲಿ ಸ್ವಾತಂತ್ರ್ಯವೀರ ಸುಖದೇವ ಅವರ 109ನೇ ಜನ್ಮ ದಿನೋತ್ಸವದ ಪ್ರಯುಕ್ತ ಆಯೋಜಿಸಲಾಗಿದ್ದ ಭಾರತ್ ಮಾತಾ ಪೂಜನಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

ಇತ್ತೀಚಿನ ದಿನಗಳಲ್ಲಿ ಐಶರಾಮಿ ಜೀವನವನ್ನು ಕೇಂದ್ರೀಕರಿಸಿ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಶಿಕ್ಷಣದಲ್ಲಿ ನೈತಿಕತೆಯನ್ನು ಹಾಗೂ ಸಾಮಾಜಿಕತೆಯನ್ನು ಬೆಳೆಸುವ ಶಿಕ್ಷಣದ ಅವಶ್ಯಕತೆ ಇದೆ. ಕೃಷಿಯಲ್ಲಿ ಆಧುನಿಕತೆ ತರಬೇಕು. ದೇಶಭಕ್ತಿ, ದೇಶಪ್ರೇಮ ಮೂಡಿಸುವ ಶಿಕ್ಷಣವನ್ನು ಪಠ್ಯಗಳಲ್ಲಿ ಅಳವಡಿಸಬೇಕಾಗಿದೆ. ಅಲಿಘಡ್ ಮತ್ತು ಜೆಎನ್‌ಯು ವಿಶ್ವವಿದ್ಯಾನಿಲಯಗಳು ದೇಶವನ್ನು ವಿಭಜಿಸುವ ಮತ್ತು ದೇಶಕ್ಕೆ ಎರಡು ಬಗೆಯುವ ಕೆಲಸ ನಡೆಸುತ್ತಿರುವುದು ಖಂಡನೀಯ ಎಂದು ಅವರು ಹೇಳಿದರು.

ದೇಶದಲ್ಲಿನ ಸುಮಾರು ೪೦ ಸಾವಿರಕ್ಕೂ ಹೆಚ್ಚು ಹೆಣ್ಣು ಮಕ್ಕಳನ್ನು ಮತಾಂತರಗೊಳಿಸಲಾಗಿದೆ. ಲವ್ ಜೆಹಾದ್ ಭಾರಿ ದೊಡ್ಡ ಪ್ರಮಾಣದಲ್ಲಿ ತಲೆ ಎತ್ತಿನಿಂತಿದೆ. ಮತಾಂತರದ ಮೂಲಕ ದೇಶವನ್ನು ಒಡೆಯುವ ಕೆಲಸವನ್ನು ದೇಶದ್ರೋಹಿ ಶಕ್ತಿಗಳು ನಡೆಸುತ್ತಿವೆ. ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರು ಹಿಂದುಗಳನ್ನು ಮತಾಂತರಗೊಳಿಸುತ್ತಿದ್ದರೆ ಹಿಂದುಗಳು ಏಕೆ ಹಿಂದು ಧರ್ಮದಲ್ಲಿ ಉಳಿಯುತ್ತಿಲ್ಲ ಹಾಗೂ ಮತಾಂತರಗೊಂಡ ಹಿಂದುಗಳನ್ನು ಪುನ: ಮಾತೃ ಧರ್ಮಕ್ಕೆ ಪರಿವರ್ತಿಸುವಲ್ಲಿ ಶ್ರಮಿಸುತ್ತಿಲ್ಲ ಎಂಬುದು ನಮ್ಮೆದುರಿರುವ ದೊಡ್ಡ ಪ್ರಶ್ನೆಯಾಗಿದೆ. ಆದುದರಿಂದ ಹಿಂದೂಸ್ತಾನದಲ್ಲಿ ಹಿಂದುಗಳು ಯಾವುದೇ ಅಂಜಿಕೆ ಭಯ ಇಲ್ಲದೆ ನೆಮ್ಮದಿಯ ಜೀವನ ನಡೆಸುವ ವಾತಾವರಣ ನಿರ್ಮಾಣವಾಗಬೇಕಿದೆ ಎಂದರು.

ಪತ್ರಕರ್ತ ಗಣೇಶ ಪಿ. ಗಂಗೊಳ್ಳಿ ಕಾರ್ಯಕ್ರಮ ಉದ್ಘಾಟಿಸಿದರು. ಗಂಗೊಳ್ಳಿ ಹಸಿಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಜಿ.ಟಿ.ಮಂಜುನಾಥ, ಗಂಗೊಳ್ಳಿಯ ಮತ್ಸ್ಯೋದ್ಯಮಿ ಚಂದ್ರ ಖಾರ್ವಿ, ಉಡುಪಿ ಜಿಲ್ಲಾ ಹಿಂದು ಜಾಗರಣ ವೇದಿಕೆ ಸಹಸಂಚಾಲಕ ವಾಸು ದೇವಾಡಿಗ ಶುಭ ಹಾರೈಸಿದರು. ಭಗತ್ ಸಿಂಗ್ ಅಭಿಮಾನಿ ಬಳಗದ ಅಧ್ಯಕ್ಷ ಸುಬ್ರಹ್ಮಣ್ಯ ಉಪಸ್ಥಿತರಿದ್ದರು.

ಅನಿಲ್ ಸ್ವಾಗತಿಸಿದರು. ಉಪನ್ಯಾಸಕ ನರೇಂದ್ರ ಎಸ್. ಗಂಗೊಳ್ಳಿ ಮತ್ತು ಸುಂದರ ಜಿ. ಕಾರ್ಯಕ್ರಮ ನಿರೂಪಿಸಿದರು. ಕಿರಣ್ ವಂದಿಸಿದರು. ಕಾರ್ಯಕ್ರಮದ ಬಳಿಕ ರಾಜ್ಯ ಪ್ರಶಸ್ತಿ ವಿಜೇತ ಅಂತರಾಷ್ಟ್ರೀಯ ಖ್ಯಾತಿಯ ಜಾದೂಗಾರ ಪ್ರಶಾಂತ ಹೆಗ್ಡೆ ಇವರಿಂದ ದೇಶ ಪ್ರೇಮ ಮೂಡಿಸುವ ಅಪರೂಪದ ಮ್ಯಾಜಿಕ್ ಶೋ, ದೇಶ ಭಕ್ತಿಯ ಸಂಚಲನದ ನೃತ್ಯ-ಗಾನ-ವೈಭವ ಕಾರ್ಯಕ್ರಮ ನಡೆಯಿತು.

Exit mobile version