Kundapra.com ಕುಂದಾಪ್ರ ಡಾಟ್ ಕಾಂ

ಉಪ್ಪುಂದ: ಜಿಎಸ್‌ಬಿ ಸಮಾಜದ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಸಂಪನ್ನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಉಪ್ಪುಂದ ಜಿಎಸ್‌ಬಿ ಸಮಾಜದ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಪ್ರಪ್ರಥಮ ಬಾರಿಗೆ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಸಡಗರ ಸಂಭ್ರಮದಿಂದ ಜರುಗಿತು. ದೇವಳದ ಪರ್ಯಾಯ ಅರ್ಚಕ ಹರೀಶ್ ಭಟ್ ಪೌರೋಹಿತ್ಯದಲ್ಲಿ ಕಲ್ಯಾಣೋತ್ಸವ ಸಂಪನ್ನಗೊಂಡಿತು.

ಶ್ರೀನಿವಾಸ ಕಲ್ಯಾಣೋತ್ಸವದ ಧಾರ್ಮಿಕ ಕ್ರಿಯಾಚರಣೆ ಅಂಗವಾಗಿ ಬೆಳಿಗ್ಗೆ ೭ಕ್ಕೆ ವಧುವಿನ ಕಡೆಯವರಾಗಿ ಡಾ. ಎಸ್. ಎನ್. ಪಡಿಯಾರ ಕುಟುಂಬಿಕರು ಶ್ರೀ ಪದ್ಮಾವತಿ (ವಧು) ಹಾಗೂ ವರನ ಕಡೆಯವರಾಗಿ ಯು. ಸದಾನಂದ ಪ್ರಭು ಕುಟುಂಬಿಕರು ಶ್ರೀ ಶ್ರೀನಿವಾಸ (ವರ) ದೇವರರನ್ನು ಸರ್ವಾಲಂಕೃತ ಬೆಳ್ಳಿ ಪಲ್ಲಕ್ಕಿಯಲ್ಲಿ ಆಕರ್ಷಕ ಹಾಗೂ ವೈಭವದ ನಗರೋತ್ಸವದ ಮೂಲಕ ದೇವಳ ಸ್ವಯಂವರ ಮಂಟಪಕ್ಕೆ ಕರೆತಂದರು. ನಂತರ ಸೀಮಂತ ಪೂಜೆ, ವಧೂ ನಿರೀಕ್ಷಣೆ, ಸ್ವಯಂವರ ಕಾರ್ಯದ ಬಳಿಕ ಮುತ್ತೈದೆಯರು ಅರಶಿನ-ಕುಂಕುಮ ಸಮರ್ಪಿಸಿದರು.

ಸಾಯಂಕಾಲ ೬.೪೬ರ ಗೋಧೋಳಿ ಮುಹೂರ್ತದಲ್ಲಿ ಶ್ರೀನಿವಾಸ ದೇವರಿಗೆ ಮಧುಪರ್ಕ ಸಮರ್ಪಣೆ, ಮಹೂರ್ತ ನಿರೀಕ್ಷೆ, ಮಾಲಾಧಾರಣೆ, ಧಾರೆಮಣಿ ಕಟ್ಟುವಿಕೆ, ಕನ್ಯಾದಾನ, ಕಂಕಣ, ಮಂಗಲಸೂತ್ರ ಧಾರಣೆ, ಚಿನ್ನಾಭರಣಾಧಿ ಕಪ್ಪ-ಕಾಣಿಕೆಗಳ ಸಮರ್ಪಣೆ, ಅಗ್ನಿ ಪ್ರತಿಷ್ಟಾಪೂರ್ವಕ ಪ್ರಧಾನ ಹೋಮ, ಪ್ರಸನ್ನ ಪೂಜೆ, ಅಷ್ಟಾವಧಾನ ಸೇವೆಗಳ ಬಳಿಕ ಕಲ್ಯಾಣೋತ್ಸವದ ಕೃಷ್ಣಾರ್ಪಣವಾಗಿ ಮಹಾ ಮಂತ್ರಾಕ್ಷತೆ ಹಾಗೂ ಪ್ರಸಾದ ವಿತರಣೆ ನಡೆಯಿತು ಊರ-ಪರವೂರ ಸಹಸ್ರ ಸಂಖ್ಯೆಯಲ್ಲಿ ಜಿಎಸ್‌ಬಿ ಸಮಾಜ ಬಾಂಧವರು ಒಟ್ಟಾಗಿ ಸೇರಿ ಮಂಗಲಪ್ರದವಾದ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ಪುಣ್ಯಕಾರ್ಯದಲ್ಲಿ ಪಾಲ್ಗೊಳ್ಳುವ ಮೂಲಕ ಭಾವಪರವಶರಾಗಿ ದೇವರಿಗೆ ಸೇವೆ ಸಲ್ಲಿಸಿ ಕೃತಾರ್ಥರಾದರು. ಉಪ್ಪುಂದ ಪೇಟೆಯ ಪ್ರತಿ ಮನೆಗಳಲ್ಲಿ ಮದುವೆಯ ಸಂಭ್ರಮ ತುಂಬಿದ್ದು, ಊರಲ್ಲಿ ಹಬ್ಬದ ವಾತಾವರಣ ನಿರ್ಮಾಣಗೊಂಡಿತ್ತು.

ಕಲ್ಯಾಣೋತ್ಸವದ ಪ್ರಯುಕ್ತ ಭಟ್ಕಳದ ಉದಯ ಪ್ರಭು ಮತ್ತು ಬಳಗದವರಿಂದ ಭಕ್ತಿಸಂಗೀತ ಹಾಗೂ ಮೂಡಬಿದಿರೆ ಶ್ರೀವೆಂಕಟರಮಣ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಯು. ವಿಷ್ಣು ಪಡಿಯಾರ್, ಕಾರ್ಯದರ್ಶಿ ಯು. ಸತೀಶ್ ಪಡಿಯಾರ್ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ಕೆ ಆಡಳಿತ ಮಂಡಳಿ ಸದಸ್ಯರು, ಊರಿನ ಹತ್ತುಸಮಸ್ಥರು, ಸಮಾಜದ ಮಹಿಳೆಯರು ಕೈಜೋಡಿಸಿ ಕಲ್ಯಾಣೋತ್ಸವದ ಯಶಸ್ಸಿಗೆ ಸಾಕ್ಷಿಯಾದರು.

Exit mobile version