Kundapra.com ಕುಂದಾಪ್ರ ಡಾಟ್ ಕಾಂ

ಮರವಂತೆಯಲ್ಲಿ ಶಿಷ್ಯ ಸಂಗೀತ ಸಮಾಗಮ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಸಮೀಪದ ಗೋಪಾಡಿಯಲ್ಲಿ ನೆಲೆಸಿ ಹಿಂದುಸ್ಥಾನಿ ಸಂಗೀತ ಕಲಿಸುತ್ತಿರುವ ಗುರುದಂಪತಿ ಸತೀಶ ಭಟ್ ಮಾಳಕೊಪ್ಪ, ಪ್ರತಿಮಾ ಭಟ್ ತಮ್ಮ ಶಿಷ್ಯರಿಗೆ ಪರಸ್ಪರರ ಪ್ರತಿಭೆಯ ಪರಿಚಯ ಮಾಡಿಸಲು, ಸೀಮಿತ ವೇದಿಕೆ ಒದಗಿಸಿ ಅವರಲ್ಲಿ ಆತ್ಮವಿಶ್ವಾಸ ಬೆಳೆಸಲು ಮತ್ತು ಪೋಷಕರಿಗೆ ತಮ್ಮ ಮಕ್ಕಳ ಕಲಿಕೆಯ ಬಗೆಗೆ ಭರವಸೆ ಮೂಡಿಸಲು ಕಂಡುಕೊಂಡ ದಾರಿ ಆಗಾಗ ನಡೆಸುವ ‘ಶಿಷ್ಯ ಸಂಗೀತ ಸಮಾಗಮ’. ಒಬ್ಬೊಬ್ಬ ಪೋಷಕರ ಪ್ರಾಯೋಜಕತ್ವದಲ್ಲಿ ಸರದಿಯಂತೆ ನಡೆಯುವ ಕಾರ್ಯಕ್ರಮದ ಈ ಬಾರಿಯ ಆವೃತ್ತಿ ಜತೀಂದ್ರ ಮರವಂತೆ, ಡಾ. ರೂಪಶ್ರೀ ದಂಪತಿಯ ನೇತೃತ್ವದಲ್ಲಿ ಮರವಂತೆಯ ಸಾಧನಾ ಸಮುದಾಯ ಭವನದ ವಿ. ಕೆ. ಕಾಮತ್ ಸಭಾಗೃಹದಲ್ಲಿ ಸಂಪನ್ನವಾಯಿತು. ಸಂಗೀತ ವಿದ್ಯಾರ್ಥಿಗಳ ಪಾಲಕರು, ಸಂಗೀತಾಸಕ್ತ ಹಿರಿಯರು ಉಪಸ್ಥಿತರಿದ್ದರು.

ಬೆಳಗ್ಗಿನ ಅವಧಿ ಕಿರಿಯ ಶಿಷ್ಯರಿಗೆ ಮೀಸಲಾಗಿತ್ತು. ಸಿದ್ದಾಪುರದ ಶ್ರವಣ ಪೈ ಬೈರವ್ ರಾಗದ ಮೂಲಕ ಸಮಾಗಮದ ನಾಂದಿ ಹಾಡಿದರು. ಕಿರಿಯ ವಿದ್ಯಾರ್ಥಿಗಳಾದ ಕೋಟದ ಪ್ರೀತಮ್ ಹೆಗಡೆ ಮತ್ತು ಕೇದಾರ ಮರವಂತೆ ಯಮನ್ ರಾಗ ಪ್ರಸ್ತುತಪಡಿಸಿದರು. ಕೋಟೇಶ್ವರದ ಅಭಿಷೇಕ ಭಟ್ ಭೂಪಾಲಿಯಲ್ಲಿ, ಮಣೂರಿನ ನೇಹಾ ಹೊಳ್ಳ ರಾಗೇಶ್ರೀಯಲ್ಲಿ ತಮ್ಮ ಕಲಿಕೆಯನ್ನು ಹೊರಗೆಡಹಿದರು.

ಊಟದ ವಿರಾಮದ ಬಳಿಕ ಈಗಾಗಲೇ ಸಾಕಷ್ಟು ಸಾಧನೆಗೈದಿರುವ ಕೋಟದ ವೀಣಾ ನಾಯಕ್ ಮುಲ್ತಾನಿ ರಾಗವನ್ನು ಸುಶ್ರಾವ್ಯವಾಗಿ ಉಣಬಡಿಸಿದರು. ಶ್ರವಣ್ ಪೈ ಇನ್ನೊಮ್ಮೆ ಹಾಡಿ ಪೂರಿಯಾ ಕಲ್ಯಾಣ್ ರಾಗವನ್ನು ಪರಿಚಯಿಸಿದರು. ಗುರುಗಳಾದ ಪ್ರತಿಮಾ ಭಟ್ ಗಾವತಿ ರಾಗದಲ್ಲಿ, ಸತೀಶ ಭಟ್ ಪಟದೀಪ್ ಮತ್ತು ಕೌನ್ಸಿ ಕಾನಡದಲ್ಲಿ ತಮ್ಮ ಗುರುತ್ವ ಸಾದರ ಪಡಿಸಿದರು. ಅವರ ಭಾವಗೀತೆಯೊಂದಿಗೆ ಸಮಾಗಮ ಕೊನೆಗೊಂಡಿತು. ವಿದ್ಯಾರ್ಥಿಗಳ ಕಲಿಕೆಯ ಮಟ್ಟಕ್ಕನುಗುಣವಾಗಿ ಆರೋಹಣ ಕ್ರಮದಲ್ಲಿ ಸಾಗಿದ ಸಂಗೀತಾರಾಧನೆ ಗುರುಗಳ ಮಧ್ಯಪ್ರವೇಶದೊಂದಿಗೆ ಪೂರ್ಣ ಪ್ರಮಾಣದ ಕಚೇರಿಯ ಹಂತ ತಲಪಿ, ಶ್ರೋತೃಗಳಿಗೆ ಮುದನೀಡಿತು. ವಿಘ್ನೇಶ್ ಕಾಮತ್ ತಬ್ಲಾ, ಪ್ರಸಾದ ಭಟ್ ಹಾರ‍್ಮೋನಿಯಂ, ಶ್ರೀಧರ ಭಟ್ ಎರಡನ್ನೂ ನುಡಿಸಿ ಸಮಾಗಮದ ಯಶಸ್ಸಿಗೆ ಕೊಡುಗೆಯಿತ್ತರು.

ಸಮಾಗಮದ ನಡುವೆ, ಅಕಾಲಿಕವಾಗಿ ಅಗಲಿದ ಸಂಗೀತ ಕಾರ್ಯಕ್ರಮ ಸಂಘಟಕ, ಸಿತಾರ್ ಕಲಾವಿದ ಐರೋಡಿ ಅವಿನಾಶ್ ಹೆಬ್ಬಾರ್ ಅವರ ನೆನಪು ಕಾಡಿತು. ಅವರಿಗೆ ನುಡಿನಮನದೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Exit mobile version