Kundapra.com ಕುಂದಾಪ್ರ ಡಾಟ್ ಕಾಂ

ಕಾಂಗ್ರೆಸ್ ಸರಕಾರದ ವೈಫಲ್ಯದ ಬಗ್ಗೆ ಅವರ ನಾಯಕರೇ ಆಡಿಕೊಳ್ಳುತ್ತಿದ್ದಾರೆ: ಮಾಜಿ ಸಚಿವ ಉದಾಸಿ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಈ ಈಗಿನ ಸರಕಾರದ ಬಗೆಗೆ ಮಾತನಾಡಿದರೆ ಅದು ಸರಕಾರದ ವಿರುದ್ದ ಟೀಕೆ ಮಾಡಿದಂತಾಗುವುದು. ಹೇಳಿ ಕೇಳಿ ನಾವು ಬಿಜೆಪಿಗರು. ಆದರೆ ನಮ್ಮ ಬದಲಿಗೆ ಕಾಂಗ್ರೆಸ್ ಪಕ್ಷದವರೇ ಸರಕಾರದ ವಿರುದ್ದ ಹೇಳಿಕೊಂಡು ತಿರುಗುತ್ತಿದ್ದಾರೆ. ಮುಖ್ಯಮಂತ್ರಿಯಿಂದ ಹಿಡಿದು ಸಚಿವ ಸಂಪುಟದ ಬಗ್ಗೆ ಅವರ ಪಕ್ಷದ ಹಿರಿಯ ಸದಸ್ಯರು, ಸಭಾಧ್ಯಕ್ಷರು ಸರ್ಕಾರಕ್ಕೆ ಪದೇ ಪದೇ ಚಾಟೀ ಬೀಸುತ್ತಿದ್ದಾರೆ. ಈ ನೆಲೆಯಲ್ಲಿ ಯಾವ ಹಂತಕ್ಕೆ ಆಡಳಿತ ಯಂತ್ರ ಕುಸಿದಿರಬಹುದೆಂದು ಅಂದಾಜಿಸಬಹುದು. ಇಷ್ಟು ಕೆಟ್ಟ ಸರ್ಕಾರ ಇದೇ ಮೊದಲು ರಾಜ್ಯವಾಳುತ್ತಿದೆ ಎಂದು ಕರ್ನಾಟಕ ರಾಜ್ಯ ಲೋಕೋಪಯೋಗಿ ಮಾಜಿ ಸಚಿವ ಸಿಎಂ ಉದಾಸಿ ಹೇಳಿದರು.

ಉದಾಸಿ ತಮ್ಮ ದಾಂಪತ್ಯ ಜೀವನದ ೫೦ ವರ್ಷಾಚರಣೆಯ ಪ್ರಯುಕ್ತ ಪತ್ನಿ ನಿಲಾಂಬಿಕಾ ಹಾಗೂ ಸಹೋದರಿ ಶಿವಗಂಗಾ ಜೊತೆಗೂಡಿ ಕೊಲ್ಲೂರಿಗೆ ಭೇಟಿನೀಡಿ ಶ್ರೀಮೂಕಾಂಬಿಕೆಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಹೇರೂರು ಗ್ರಾಪಂ ವ್ಯಾಪ್ತಿಯ ಮೇಕೋಡು ಶ್ರೀ ದುರ್ಗಾಪರಮೇಶ್ವರಿ (ಮೇಕೋಡಮ್ಮ) ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಕರ್ನಾಟಕದಲ್ಲಿ ಕಾಂಗ್ರೆಸ್ ಮುಕ್ತ ಮಾಡಲು ಕಾಂಗ್ರೆಸ್ಸಿನವರೇ ಸಾಕು ಬಿಜೆಪಿಯವರು ಬೇಕಾಗಿಲ್ಲ. ರಾಜ್ಯದ ಜನರು ಇದನ್ನೆಲ್ಲ ಗಮನಿಸುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಸಾರಾಸಗಟಾಗಿ ತಿರಸ್ಕರಿಸುವ ಮೂಲಕ ಸ್ವಯಂ ಸ್ಪೂರ್ತಿಯಿಂದ ಬಿಜೆಪಿಯನ್ನು ಅಧಿಕ ಸ್ಥಾನಗಳಿಂದ ಆಯ್ಕೆ ಮಾಡಲಿದ್ದಾರೆ ಎಂದ ಅವರು ಕಾಂಗ್ರೆಸ್ ಸರಕಾರದ ಆಡಳಿತದ ಈ ಮೂರು ವರ್ಷದಲ್ಲಿ ಅನುಷ್ಠಾನಕ್ಕೆ ಬಂದ ಶೇ60ರಷ್ಟು ಅಭಿವೃದ್ಧಿ ಕಾಮಗಾರಿಗಳು ಹಿಂದೆ ಯಡಿಯೂರಪ್ಪ, ಸದಾನಂದ ಗೌಡ ಹಾಗೂ ಜಗದೀಶ್ ಶೆಟ್ಟರ್ ಸರಕಾರಗಳು ಮಂಜೂರು ಮಾಡಿದ ಕಾಮಗಾರಿಗಳು ಎಂದರು. /ಕುಂದಾಪ್ರ ಡಾಟ್ ಕಾಂ ಸುದ್ದಿ/

Exit mobile version