Kundapra.com ಕುಂದಾಪ್ರ ಡಾಟ್ ಕಾಂ

ಮರವಂತೆಗೆ ಫಿಲಿಪ್ಸ್ ಸಂಶೋಧನಾ ಮುಖ್ಯಸ್ಥ ಭೇಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಫಿಲಿಪ್ಸ್ ಲೈಟಿಂಗ್ಸ್‌ನ ಸಂಶೋಧನಾ ಮುಖ್ಯಸ್ಥ ನೆದರ್‌ಲ್ಯಾಂಡ್ಸ್‌ನ ಕ್ಯಾರೆಲ್ ಡ್ರಯೆಲ್ ಲೈಟಿಂಗ್ಸ್‌ನ ಭಾರತದ ಮುಖ್ಯಸ್ಥ ಡಾ. ಐರೋಡಿ ನರೇಂದ್ರನಾಥ ಉಡುಪರ
ಜತೆಯಲ್ಲಿ ಗುರುವಾರ ಮರವಂತೆಗೆ ಭೇಟಿ ನೀಡಿದರು. ಮರವಂತೆ ಗ್ರಾಮ ಪಂಚಾಯತ್ ಸುವರ್ಣ ಗ್ರಾಮೋದಯ ಯೋಜನೆಯ ಅನುದಾನದಿಂದ ಫಿಲಿಫ್ಸ್ ಇಂಡಿಯದ
ಸಹಯೋಗದಲ್ಲಿ ಅಲ್ಲಿನ ಹರಿಶ್ಚಂದ್ರ ಮಾರ್ಗಕ್ಕೆ 2014-15ರಲ್ಲಿ ಅಳವಡಿಸಿದ ಕೇಂದ್ರೀಕೃತ ಸೋಲಾರ್ ಬೀದಿದೀಪ ಯೋಜನೆಯ ಪ್ರಸಕ್ತ ಸ್ಥಿತಿಯನ್ನು ಉಭಯರು ಪರಿಶೀಲಿಸಿದರು.
ಅದರ ಉಪಯುಕ್ತತೆ ಮತ್ತು ಪರಿಣಾಮಕಾರಿತ್ವದ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದರು.

ಈ ಸಂದರ್ಭದಲ್ಲಿ ಅಧ್ಯಕ್ಷೆ ಕೆ. ಎ. ಅನಿತಾ. ಉಪಾಧ್ಯಕ್ಷ ಗಣೇಶ ಪೂಜಾರಿ, ನಿಕಟಪೂರ್ವ ಅಧ್ಯಕ್ಷೆ ಕೆ. ಎ. ಸುಗುಣಾ, ಮಾಜಿ ಅಧ್ಯಕ್ಷರಾದ ಎಂ. ವಿನಾಯಕ ರಾವ್, ಎಂ. ನರಸಿಂಹ ಶೆಟ್ಟಿ
ಮತ್ತು ಎಸ್. ಜನಾರ್ದನ ವ್ಯವಸ್ಥೆಯ ಕುರಿತು ತಮ್ಮ ಅನುಭವ, ಅನಿಸಿಕೆಗಳನ್ನು ಅವರೊಂದಿಗೆ ಹಂಚಿಕೊಂಡರು. ಕೇಂದ್ರೀಕೃತ ವ್ಯವಸ್ಥೆಯು ಎಲ್ಲೆಡೆ ಚಾಲ್ತಿಯಲ್ಲಿರುವ ಏಕ ಘಟಕ
ವ್ಯವಸ್ಥೆಗಿಂತ ಭಿನ್ನ. ಕೇಂದ್ರೀಕೃತ ವ್ಯವಸ್ಥೆಯಲ್ಲಿ ಸೋಲಾರ್ ಮೊಡ್ಯೂಲ್, ಬ್ಯಾಟರಿ ಮತ್ತು ನಿಯಂತ್ರಣ ಘಟಕ ಒಂದು ಸುರಕ್ಷಿತ ಕಟ್ಟಡದಲ್ಲಿ ಇರುತ್ತದೆ. ಭೂಗತ ವಾಹಕಗಳ
ಮೂಲಕ ಸಂಪರ್ಕ ನೀಡಿ ಬೀದಿಯುದ್ದಕ್ಕೆ ನೆಟ್ಟ ಕಂಬಗಳಲ್ಲಿ ಎಲ್‌ಇಡಿ ದೀಪಗಳು ಮಾತ್ರ ಇರುತ್ತವೆ. ಏಕ ಘಟಕ ವ್ಯವಸ್ಥೆಯಲ್ಲಿ ಇವೆಲ್ಲವೂ ಕಂಬದಲ್ಲೇ ಇರುವುದರಿಂದ ಕಳ್ಳರ
ಪಾಲಾಗುವ ಅಪಾಯವಿದೆ ಮತ್ತು ಪ್ರತಿ ಘಟಕವನ್ನೂ ಪ್ರತ್ಯೇಕವಾಗಿ ನಿರ್ವಹಿಸಬೇಕಾಗುತ್ತದೆ. ಇವುಗಳನ್ನು ಮರದ ನೆರಳಿರುವಲ್ಲಿ ಅಳವಡಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ
ಅವರು ಸಾಧನಗಳನ್ನು ಇಡಲು ಕಟ್ಟಡಗಳು ಲಭ್ಯವಿರುವಲ್ಲಿ ವೆಚ್ಚ ಸ್ವಲ್ಪ ಹೆಚ್ಚಾದರೂ ಕೇಂದ್ರೀಕೃತ ವ್ಯವಸ್ಥೆ ಅನುಕೂಲಕರ. ಮರವಂತೆಯಲ್ಲಿ ಈ ವ್ಯವಸ್ಥೆ ೨೦೧೪ರ
ಅಕ್ಟೋಬರ್‌ನಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

ಗ್ರಾಮೀಣ ಪ್ರದೇಶದ ಬೀದಿದೀಪಕ್ಕೆ ಫಿಲಿಪ್ಸ್ ತಂತ್ರಜ್ಞಾನ ಬಳಸಿ ಅಳವಡಿಸಿದ ಮೊದಲ ಪ್ರಯೋಗ ಮರವಂತೆಯದು ಎಂದ ಕ್ಯಾರೆಲ್ ಮತ್ತು ಉಡುಪ ಇದರಲ್ಲಿ ಅಳವಡಿಕೆ ವೆಚ್ಚ
ತಗ್ಗಿಸಲು ಕೆಲವು ಕ್ರಮಗಳನ್ನು ಸೂಚಿಸಿದರು. ಈ ವ್ಯವಸ್ಥೆಯನ್ನು ಉನ್ನತೀಕರಿಸಲು ತಾಂತ್ರಿಕ ನೆರವು ನೀಡುವ ಭರವಸೆಯಿತ್ತರು. ಇಲ್ಲಿನ ಅನುಭವ ಆಧರಿಸಿ ವ್ಯವಸ್ಥೆಯಲ್ಲಿ
ಸುಧಾರಣೆಗಳನ್ನು ಮಾಡಲಾಗುವುದೆಂದರು. ಪಂಚಾಯತ್‌ನ ಕರಸಂಗ್ರಾಹಕ ಶೇಖರ ಮರವಂತೆ, ನೀರುನಿರ್ವಾಹಕ ಪ್ರಭಾಕರ ಇದ್ದರು.

Exit mobile version