Kundapra.com ಕುಂದಾಪ್ರ ಡಾಟ್ ಕಾಂ

ಭಾವಿ ಸಮೀರ ಶ್ರೀವಾದಿರಾಜರ ಜನ್ಮ ಕ್ಷೇತ್ರ ಹೂವಿನಕೆರೆ

ಉಡುಪಿ ಸೊದೆ ಮಠದ ಶ್ರೀಗಳು ಪರ್ಯಾಯ ಪೀಠವನ್ನೇರಿ ಶ್ರೀ ಕೃಷ್ಣನ ಕೈಂಕರ್ಯದಲ್ಲಿ ತೊಡಗಿದ್ದರಿಂದ ಅವರ ಹುಟ್ಟೂರಾದ ಕುಂದಾಪುರ ತಾಲೂಕಿನ ಹೂವಿನಕೆರೆ ವಿಶೇಷ ಮಹತ್ವ ಪಡೆದುಕೊಂಡು ರಾಜ್ಯಾದ್ಯಂತ ಭಕ್ತಾಭಿಮಾನಿಗಳು ಇಲ್ಲಿಗೆ ಆಗಮಿಸುತ್ತಾರೆ.

ವಾದಿರಾಜರ ಜನನ:
ಆನೆಗುಡ್ಡೆಯ ಹಿಂಬಾಗದಿಂದ ವಕ್ವಾಡಿ ಮಾರ್ಗವಾಗಿ 4 ಕಿ.ಮೀ ದೂರದ ಅಸೋಡು ಗ್ರಾಮದ ಹೂವಿನಕೆರೆ ಎಂಬ ಹಳ್ಳಿಯಲ್ಲಿ ಶಾರ್ವರಿ ಸಂವತ್ಸರದ ಮಾಘ ಮಾಸ ಶುದ್ದ ದ್ವಾದಶಿಯಂದು ಬೆಳಗಿನ ಜಾವ ಕ್ರಿ.ಶ. 1481 ರಲ್ಲಿ ಶ್ರೀ ರಾಮಾಚಾರ್ಯ, ಗೌರಿ ದೇವಿಯ ಪುತ್ರರಾಗಿ ವಾದಿರಾಜರು ಜನಿಸಿದ್ದಾರೆ.

ವಾದಿರಾಜರು ಜನ್ಮತಾಳಿದ ಸ್ಥಳ `ಗೌರಿ ಗದ್ದೆ’:
ಹಲವಾರು ವರ್ಷಗಳಿಂದ ಪುತ್ರ ಸಂತಾನವಿಲ್ಲದ ರಾಮಾಚಾರ್ಯ ದಂಪತಿಗಳು ಅಂದಿನ ಅಷ್ಟ ಮಠದ ಮಹಾಜ್ಞಾನಿಗಳು ಪವಾಡ ಪುರುಷರೆಂದೇ ಖ್ಯಾತರಾಗಿರುವ ವಾಗೀಶ ತೀರ್ಥರಲ್ಲಿ ಪುತ್ರ ಸಂತಾನಕ್ಕಾಗಿ ಬಯಕೆ ಮಂದಿಟ್ಟು ಯತಿಗಳ ಸಂಸ್ಥಾನದ ಆರಾದ್ಯಮೂರ್ತಿ ಶ್ರೀ ಭೂವರಹ ಸ್ವಾಮಿಯ ಫಲ ಮಂತ್ರಾಕ್ಷತೆ ನೀಡಿ. `ನಿಮಗೆ ಹುಟ್ಟುವ ಮಗನು ನಮ್ಮ ಪೀಠದ ಸಂನ್ಯಾಸಿಯೇ ಆಗುವನು ಆದರೆ, ಮನೆಯೊಳಗೆ ಮಗು ಹುಟ್ಟದರೆ ನಿಮಗಿರಲಿ ಹೊರಗೆ ಜನಿಸಿದರೆ ನಮ್ಮ ದೇವರಿಗಿರಲಿ’ ಎಂದು ವಾಗ್ದಾನ ನೀಡಿದರು.

ಗುರುವಿನ ಅನುಗ್ರಹದಂತೆ ಗೌರಿ ಗರ್ಬಿಣಿಯಾದಳು ಪ್ರಸವಕ್ಕೆ ಹತ್ತಿರವಾಗುತ್ತಿದ್ದಂತೆ ಮನೆಯಿಂದ ಹೊರಗೆ ಹೋಗದೆ ಒಳಗೆ ಇರಲು ಪ್ರಯತ್ನಿಸಿದರು. ಅಂದು ಏಕಾದಶಿ ದಿನ ರಾತ್ರಿಯಿಂದಲೇ ರಾಮಾಚಾರ್ಯರು ವೃತದಲ್ಲಿದ್ದರು. ಬೆಳಗಿನ ಜಾವ ಹೊಲದಲ್ಲಿ ದನ ಪೈರು ಮೆಯುತ್ತಿರುದನ್ನು ಕಂಡು ಓಡಿಸಲು ಯಾರು ಇಲ್ಲದೆ ಇದ್ದಾಗ ಗೌರಿ ದೇವಿಯೇ ಅಲ್ಲಿಗೆ ಹೋಗಬೇಕಾಯಿತು. ಇದ್ದಕ್ಕಿದ್ದಂತೆ ಹೊಲದಲ್ಲಿಯೇ ಪ್ರಸವ ವೇದನೆ ಪ್ರಾರಂಭವಾಗಿ ಗೌರಿ ಅಲ್ಲಿಯೇ ಕುಸಿದಳು. ಮೊದಲೇ ತಿಳಿದಿದ್ದ ವಾಗೀಶ ತೀರ್ಥರು ಪ್ರಸವಕ್ಕೆ ಸೂಲಗಿತ್ತಿಯರನ್ನು ಅಲ್ಲಿಗೆ ಕಳುಹಿಸಿ ಸುಖಪ್ರಸವ ಮಾಡಿಸಿದರು. ಭೂವರಹನ ಅನುಗ್ರಹದಿಂದ ಹುಟ್ಟಿದ ಮಗುವಿಗೆ `ಭೂವರಹನ’ ಎಂದು ನಾಮಕರಣ ಮಾಡಿ ಮಗುವನ್ನು ಕರೆದೊಯ್ಯಲು ವಾಗೀಶ ತೀರ್ಥರು ಅಲ್ಲಿಗೆ ಬಂದರು. 1488 ರಲ್ಲಿ ವಾಗೀಶ ತೀರ್ಥರಿಂದ ಸಂನ್ಯಾಸ ದೀಕ್ಷೆ ನೀಡಿ ವಾದಿರಾಜ ತೀರ್ಥ ಎಂಬ ಹೆಸರು ನೀಡಿದರು. ಹೀಗೆ ವಾದಿರಾಜರು ಜನ್ಮತಾಳಿದ ಸ್ಥಳಕ್ಕೆ `ಗೌರಿ ಗದ್ದೆ’ ಎಂದಾಯಿತು ಸೊದೆ ಮಠಕ್ಕೆ ಈಗಲೂ ಗೌರಿಗದ್ದೆಯಲ್ಲಿ ಬೆಳೆದ ಭತ್ತವನ್ನು ಅಕ್ಕಿ ಮಾಡಿ ವಾದಿರಾಜರ ಆರಾಧನೆಗೆ ತಂದು ನೈವೆದ್ಯ ಮಾಡುತ್ತಾರೆ. ( ಸುಮಾರು 120 ವರ್ಷಗಳ ಕಾಲ ಬದುಕಿದ್ದ ವಾದಿರಾಜರು ಕೊನೆಯಲ್ಲಿ ಶಿರಸಿಯಿಂದ 20 ಕಿ.ಮೀಟರ್ ದೂರದಲ್ಲಿರುವ ಸೋಂದ ಎಂಬಲ್ಲಿ ಸಶರೀರ ವೃಂದಾವನಸ್ಥರಾದರು.)

ವಾದಿರಾಜರ ವಿಶ್ವಪರಿಯಟನೆ:
ಗುರುಗಳಿಂದ ದೀಕ್ಷೆ ಪಡೆದ ವಾದಿರಾಜರು ವೈಷ್ಣವ ತೀರ್ಥ ಕ್ಷೇತ್ರಗಳಿಗೆ ಪಾದಯಾತ್ರೆಯ ಮುಖಾಂತರ ವಿಶ್ವಪರಿಯಟನೆಗೆ ತಾಯಿಯ ಅನುಗ್ರಹ ಪಡೆಯಲು ಹುಟ್ಟೂರಾದ ಹೂವಿನಕೆರೆಗೆ ಬರುತ್ತಾರೆ. ಚಿಕ್ಕ ವಯಸ್ಸಿನಲ್ಲಿ ಕಾಲ್ನನಡಿಗೆಯಲ್ಲಿ ಕ್ರಮಿಸುವ ವಿಷಯ ಕೇಳಿ ತಾಯಿ ಒಪ್ಪಿಗೆ ನೀಡಲಿಲ್ಲ ಆದರೆ ತಾಯಿಯನ್ನು ಸಂತೈಸುತ್ತಾ ಗುರು ಆಜ್ಞೆಯನ್ನು ಪಡೆದ ನಂತರ ನನ್ನ ನಿರ್ಧಾರ ರ ಬದಲಿಸುವಂತಿಲ್ಲ ನೀನು ದುಖಿಸಬಾರದು ನನ್ನ ಬದಲಿಗೆ ನನ್ನದೆ ಪಡಿಯಚ್ಚಿನಂಥ ಮೂರ್ತಿಯನ್ನು ನಿನಗೆ ಮಾಡಿ ಕೊಡುತ್ತೇನೆ. ನನ್ನ ನೆನಪಾದಗಲೆಲ್ಲ ಅದನ್ನು ನೋಡುತ್ತಾ ನನ್ನ ಸಾಮೀಪ್ಯ ನೆನಸಿಕೊ ಎಂದು ಕಂಚಿನ ಮೂರ್ತಿನ್ನು ರಚಿಸಿ ತಾಯಿಗೆ ಸಮರ್ಪಿಸುತ್ತಾರೆ ಆ ವಿಗ್ರಹ ಈಗಲೂ ಸೊದೆ ಶ್ರೀಗಳ ಆಶ್ರಯದಲ್ಲಿದ್ದು ಪರಂಪರೆಯಿಂದ ಪೂಜೆಗೊಳ್ಳುತ್ತಾ ಬಂದಿದೆ.

ವಾದಿರಾಜರು ನಡೆದಾಡಿದ ಸ್ಥಳದಲ್ಲಿ ಹೆಜ್ಜೆಯ ಗುರುತು:

ಇಲ್ಲಿಯೇ ಹೂವಿನಕೆರೆಯಿಂದ ಹರಿದುಹೋಗುವದಿಯ ಪಕ್ಕದಲ್ಲಿ ಬಂಡೆಯ ಮೇಲೆ ವಾದಿರಾಜರು ಬಾಲ್ಯದಲ್ಲಿ ನಡೆದಾಡಿದ ಸ್ಥಳದಲ್ಲಿ ಮೂರ್ನಾಲ್ಕು ಹೆಜ್ಜೆಯ ಗುರುತು ಕಾಣಿಸಿಕೊಂಡಿದೆ. ಹಿಂದೆ ಬೀಮನ ಹೆಜ್ಜೆಯ ಗುರುತು ಎಂದು ಹೇಳಲಾಗಿತ್ತು. ಕ್ರಮೇಣ ಪಾಜಕ ಕ್ಷೇತ್ರದಲ್ಲಿ ಮದ್ವಾಚಾರ್ಯರ ಪಾದಕ್ಕೆ ಈ ಹೆಜ್ಜೆಗಳು ಹೋಲಿಕೆಯಾಗಿದ್ದರಿಂದ ವಾದಿರಾಜರ ಹೆಜ್ಜೆ ಎಂದು ಭಕ್ತರು ನಂಬಿದ್ದರು. ಈ ಹೆಜ್ಜೆಯ ಗುರುತುಗಳನ್ನು ರಕ್ಷಣೆಗಾಗಿ 1980 ರಲ್ಲಿ ಮಂಟಪ ಕಟ್ಟಲಾಗಿದೆ. ವಾದಿರಾಜರು ಭಾವಿ ಸಮೀರರಾದ ಕಾರಣ ವಾಯು ಶಕ್ತಿಯಿಂದ ಕ್ಷಣಮಾತ್ರದಲ್ಲಿ ಹೆಜ್ಜೆಯ ಗುರುತು ಕಾಣಿಸಿಕೊಂಡಿದೆ ಎಂಬುವುದು ಭಕ್ತರ ನಂಬಿಕೆಗೆ ಅರ್ಹವಾಗಿದೆ.

ಜನ್ಮ ಕ್ಷೇತ್ರದ ಆಕರ್ಷಣೆ:

ವಕ್ವಾಡಿ ಮಾರ್ಗವಾಗಿ ಸಮುದ್ರಕ್ಕೆ ಸೇರುವ ನದಿ ಮೂಲದ ಬಂಡೆಯ ತಪ್ಪಲಲ್ಲಿ ವಾದಿರಾಜರು ಬಾಲ್ಯದಲ್ಲಿ ನಡೆದಾಡಿದ ಹೆಜ್ಜೆಯ ಗುರುತು ಇದೆ, ವಾದಿರಾಜರ ಕುಟುಂಬಿಕರ ಆರಾದ್ಯ ದೇವರಾದ ಚೆನ್ನಕೇಶವ, ಅವರ ಪರಮ ಶಿಷ್ಯ ಭೂತದೇವರ ಮೂರ್ತಿ ಇಲ್ಲಿದ್ದು ನಿತ್ಯ ಪೂಜೆ ನಡೆಯುತ್ತಿದೆ. ದೇವಸ್ಥಾನದ ಎದುರುಗಡೆ ವಿಶಾಲವಾದ ಕೆರೆ, ಗೌರಿ ಗದ್ದೆಯಲ್ಲಿ ವಾದಿರಾಜರ ಮೂರ್ತಿ ಸ್ಥಾಪನೆಯಿಂದಾಗಿ ಭಕ್ತಾಭಿಮಾನಿಗಳನ್ನು ಆಕರ್ಷಿಸಿದೆ.

ಮಠದಲ್ಲಿ ಪೂಜಾ ಕೈಂಕರ್ಯ:
ಹೂವಿನಕೆರೆ ಮತ್ತು ಸುತ್ತ ಮುತ್ತ ಗ್ರಾಮಗಳು ವಾದಿರಾಜ ಮಹಾ ಸಂಸ್ಥಾನಕ್ಕೆ ಸೇರಿದ್ದು ಕಳೆದ ಮೂರು ತಲೆಮಾರುಗಳಿಂದ ವೇದ ಮೂರ್ತಿ ಗುಂಡಾ ಭಟ್ಟರು ಚೆನ್ನಕೇಶವ ದೇವರ ಪೂಜಾ ಕಾರ್ಯಗಳನ್ನು ನೆರವೇರಿಸಿಕೊಂಡು ಬಂದಿದ್ದು, ನಂತರ ಅವರ ಮಗ ವಿದ್ವಾನ್ ವಾದಿರಾಜ ಭಟ್ಟ್ ಪ್ರಸ್ತುತ ವಾಗೀಶ ಭಟ್ಟರು ನಿತ್ಯ ಪೂಜೆ ಪುರಸ್ಕಾರಗಳನ್ನು ನಡೆಸಿಕೊಂಡು ಬಂದಿದ್ದಾರೆ. ಇಲ್ಲಿಯೇ ಪಕ್ಕದಲ್ಲಿರುವ ಭೂತರಾಜರ ಪೂಜೆಯನ್ನು ಇತ್ತೀಚೆಗೆ ಮಂಜುನಾಥ ಉಡುಪ ಮತ್ತು ಮಕ್ಕಳಿಂದ ನಡೆಯುತ್ತಿದೆ. ಸೋದೆ ಮಠದ ಶ್ರೀಗಳಾದ ವಿಶ್ವ ವಲ್ಲಭ ತೀರ್ಥರು ಪರ್ಯಾಯ ಪೀಠವನ್ನು ಏರುವ ಸಂದರ್ಭದಲ್ಲಿ ಹೂವಿನಕೆರೆ ವಾದಿರಾಜರ ಜನ್ಮ ಕ್ಷೇತ್ರವು ವಿಶೇಷ ಆಕರ್ಷಣೀಯ ಸ್ಥಳವಾಗಿ ರಾಜ್ಯಾದ್ಯಾಂತ ಭಕ್ತಾಭಿಮಾನಿಗಳು ಇಂದಿಗೂ ಇಲ್ಲಿಗೆ ಆಗಮಿಸುತ್ತಿದ್ದಾರೆ.

Vadiraja Mata Hoovinakere (1)

Exit mobile version