Kundapra.com ಕುಂದಾಪ್ರ ಡಾಟ್ ಕಾಂ

ಮೊಗವೀರ ಸಂಘಟನೆಯಿಂದ ಸದಸ್ಯತ್ವ ಅಭಿಯಾನ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ : ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆ ಹಾಗೂ ಕುಂದಾಪುರ ಘಟಕದ ವತಿಯಿಂದ ಸಂಘಟನೆಯ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಕುಂದಾಪುರದ ಕೋಯಾಕುಟ್ಟಿ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಮೊಗವೀರ ಯುವ ಸಂಘಟನೆಯ ಅಧ್ಯಕ್ಷ ಗಣೇಶ್ ಕಾಂಚನ್ ಸಂಘಟನೆಯ ಗೀತಾನಂದ ಫೌಂಡೇಶನ್ ಕೋಟ ಇದರ ವತಿಯಿಂದ ಕೊಡಮಾಡಿದ ವಿವಿಧ ಸಸಿಗಳ ವಿತರಿಸಿ ನಂತರ ಮಾತನಾಡಿ, ಪ್ರತೀ ವರ್ಷವೂ ಮೊಗವೀರ ಯುವ ಸಂಘಟನೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಸದಸ್ಯತ್ವ ನೋಂದಣಿ ಪ್ರಕ್ರಿಯೆ ಪ್ರಮುಖವಾಗಿದೆ. ಈ ಬಾರಿಯ ಸದಸ್ಯತ್ವ ನೋಂದಣಿಯನ್ನು ಜಿಲ್ಲೆಯಲ್ಲಿ ಮೊದಲ ಬಾರಿಗೆ ಕುಂದಾಪುರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು. ಅಲ್ಲದೇ ಡಾ. ಜಿ.ಶಂಕರ್ ಮಾರ್ಗದರ್ಶನದಲ್ಲಿ ಮೊಗವೀರ ಯುವ ಸಂಘಟನೆಯು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಹಮ್ಮಿಕೊಂಡಿದ್ದು, ಸಮುದಾಯದ ಬಹಳಷ್ಟು ಗಣ್ಯ ವ್ಯಕ್ತಿಗಳು ಸಂಘಟೆನೆಗೆ ಬೆಂಬಲ ನೀಡುತ್ತಿರುವುದರಿಂದ ಸಂಘಟನೆ ದೀರ್ಘ ಕಾಲದವರೆಗೆ ತನ್ನ ಕಾರ್ಯಕ್ಷೇತ್ರವನ್ನು ಉಳಿಸಿ ಬೆಳೆಸೆಕೊಳ್ಳುವ ಸಾಮರ್ಥ್ಯ ಹೊಂದಿದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ಕುಂದಾಪುರ ತಾಲೂಕು ಸಂಘಟನೆಯ ಅಧ್ಯಕ್ಷ ಕೆ.ಟಿ.ರಮೇಶ್ ಟಿಟಿರಸ್ತೆ ವಹಿಸಿದ್ದರು. ಮಾಜಿ ಅಧ್ಯಕ್ಷ ಸದಾನಂದ ಬಳ್ಕೂರು, ಸತೀಶ್ ಎಂ. ನಾಯ್ಕ್, ಕೆ. ಕೆ. ಕಾಂಚನ್, ಸಂಪನ್ಮೂ ವ್ಯಕ್ತಿ ಶಿವರಾಮ ಕೋಟ, ಕಾರ್ಯದರ್ಶಿ ರಾಘವೇಂದ್ರ ಬೈಕಾಡಿ, ಶೇಖರ ಬಳ್ಕೂರು, ಉಪಸ್ಥಿತರಿದ್ದರು. ಈ ಸಂದರ್ಭ ಎಂಭತ್ತು ಹೊಸ ಸದಸ್ಯರನ್ನು ಸಂಘಟನೆಗೆ ಸೇರ್ಪಡೆಗೊಳಿಸಲಾಯಿತು.

Exit mobile version