Kundapra.com ಕುಂದಾಪ್ರ ಡಾಟ್ ಕಾಂ

ಮರವಂತೆಯಲ್ಲಿ ದಾಸ ಭಾಗವತರ ಸಂಸ್ಮರಣ ಕಾರ್ಯಕ್ರಮ, ಕಲಾ ಗೌರವ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮರವಂತೆ: ಹಿಂದಿನ ಪ್ರಮುಖ ಯಕ್ಷಗಾನ ಭಾಗವತರ ಶೈಲಿಯ ಅನುಕರಣೆ ನಡೆಯುತ್ತಲೇ ಇದೆ. ಆದರೆ ಮರವಂತೆ ನರಸಿಂಹ ದಾಸ ಮತ್ತು ಅವರ ಸಹೋದರ ಶ್ರೀನಿವಾಸ ದಾಸರ ಶೈಲಿಗಳನ್ನು ಯಾರೂ ಅನುಕರಣೆ ಮಾಡಿಲ್ಲ. ಇದಕ್ಕೆ ಕಾರಣ ಅವರ ಶೈಲಿಯ ಅನುಕರಣೆ ಅಸಾಧ್ಯವೆನ್ನುವಷ್ಟು ಭಿನ್ನ. ಪರಂಪರೆಯ ಚೌಕಟ್ಟಿನಲ್ಲೇ ಹೊಸ ಹಾದಿ ತುಳಿದು ಕ್ರಾಂತಿ ಮಾಡಿದವರು ಅವರು ಎಂದು ಖ್ಯಾತ ಯಕ್ಷಗಾನ ವಿಮರ್ಶಕ, ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಎಸ್. ವಿ. ಉದಯಕುಮಾರ ಶೆಟ್ಟಿ ಹೇಳಿದರು.

ಮರವಂತೆಯ ದಾಸ ಭಾಗವತ ಟ್ರಸ್ಟ್ ಅಲ್ಲಿನ ಸಾಧನಾ ಸಮುದಾಯ ಭವನದ ವಿ. ಕೆ. ಕಾಮತ್ ಸಭಾಗೃಹದಲ್ಲಿ ಶನಿವಾರ ಆಯೋಜಿಸಿದ್ದ ದಾಸ ಭಾಗವತರ ಸಂಸ್ಮರಣಾ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ, ಸಂಸ್ಮರಣ ಭಾಷಣ ಮಾಡಿದರು. ದಾಸ ಸಹೋದರರು ಭಾಗವತ ಶಿರೋಮಣಿಗಳು. ಧ್ವನಿವರ್ಧಕಗಳಿಲ್ಲದ ಕಾಲದಲ್ಲಿ ಅವರು ಇಡೀ ರಾತ್ರಿ ಹಾಡಬಲ್ಲವರಾಗಿದ್ದರು. ಅವರ ಧ್ವನಿ ಸಾಮರ್ಥ್ಯ ಮತ್ತು ಮಾಧುರ್ಯ ಅದ್ವಿತೀಯವೆನಿಸಿತ್ತು. ನರಸಿಂಹ ದಾಸರು ತೆಂಕು ಮತ್ತು ಬಡಗು ತಿಟ್ಟುಗಳೆರಡರಲ್ಲೂ ಮಿಂಚಿದ್ದರು. ಅವರು ವಿರಳ ರಾಗಗಳನ್ನೂ ಜನಪ್ರಿಯಗೊಳಿಸಿದರು. ಅವರನ್ನು ‘ಲಯಬ್ರಹ್ಮ’ ಎಂದು ಗುರುತಿಸಲಾಗಿತ್ತು. ಅವರಿಬ್ಬರ ಸಾಧನೆಯಿಂದ ಇಂದಿನ ಮತ್ತು ಮುಂದಿನ ತಲೆಮಾರಿನ ಕಲಾವಿದರು ಸ್ಫೂರ್ತಿಪಡೆಯಬೇಕು ಎಂದು ಅವರು ನುಡಿದರು.

ಟ್ರಸ್ಟ್‌ನ ಅಧ್ಯಕ್ಷ ಮಂಜುನಾಥ ಎನ್ ದಾಸ್ ಅಧ್ಯಕ್ಷತೆ ವಹಿಸಿದ್ದರು. ಉಪ್ಪುಂದದ ಉದ್ಯಮಿ ರಾಜು ಭಟ್, ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ, ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ಆರ್. ಕೆ. ಗಂಗೊಳ್ಳಿ ಎಸ್‌ವಿ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಎಚ್. ಸುಜಯೀಂದ್ರ ಹಂದೆ ಅತಿಥಿಗಳಾಗಿದ್ದರು.

ಮರವಂತೆಯ ಸಾಧನಾ ಸಮುದಾಯ ಭವನದಲ್ಲಿ ಶನಿವಾರ ನಡೆದ ದಾಸ ಭಾಗವತರ ಸಂಸ್ಮರಣ ಸಮಾರಂಭದಲ್ಲಿ ಹಿರಿಯ ಭಾಗವತ ಮಾರ್ವಿ ನಿತ್ಯಾನಂದ ಹೆಬ್ಬಾರ್ ಅವರಿಗೆ ಕಲಾ ಗೌರವ ಸಲ್ಲಿಸಲಾಯಿತು. ಟ್ರಸ್ಟ್‌ನ ಕಾರ್ಯದರ್ಶಿ ಡಾ. ಶುಭಾ ಮರವಂತೆ ಸ್ವಾಗತಿಸಿ ನಿರೂಪಿಸಿದರು. ಹಿರಿಯ ಭಾಗವತ ಮಾರ್ವಿ ನಿತ್ಯಾನಂದ ಹೆಬ್ಬಾರ್ ಅವರನ್ನು ಸನ್ಮಾನಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಪ್ರಮೋದಾ ಸಂತೋಷ ಸನ್ಮಾನಿತರನ್ನು ಪರಿಚಯಿಸಿದರು. ಹವ್ಯಾಸಿ ಕಲಾವಿದರು ಶ್ರೀರಾಮ ದರ್ಶನ ಯಕ್ಷಗಾನ ಪ್ರದರ್ಶಿಸಿದರು.

Exit mobile version