Kundapra.com ಕುಂದಾಪ್ರ ಡಾಟ್ ಕಾಂ

ಉಪ್ಪುಂದದ ಹೊಳಪು ಅಭಿನಂದನಾ ಗ್ರಂಥ ಬಿಡುಗಡೆ ಹಾಗೂ ಕುಂದಶ್ರಿ ಪ್ರಶಸ್ತಿ ಪ್ರದಾನ

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಅಸಹಿಷ್ಟುತೆಯ ನೆಪವೊಡ್ಡಿ ಪ್ರಶಸ್ತಿ ವಾಪಾಸಿ ಚಳುವಳಿಗಳಲ್ಲಿ ಮುಂಚೂಣಿಯಲ್ಲಿದ್ದ ಸಾಹಿತಿಗಳು ಇಂದು ಮತ್ತೆ ಪ್ರಶಸ್ತಿ ಪಡೆಯವ ಹಪಹಪಿಯಲ್ಲಿದ್ದಾರೆ. ಸಣ್ಣತನದ ಮನಸ್ಥಿತಿ ಹೊಂದಿರುವ ಹಾಗೂ ಅಪ್ರಾಮಾಣಿಕ ಸಾಹಿತಿಗಳಿಂದಾಗಿ, ಸಾಹಿತ್ಯ ಕ್ಷೇತ್ರವೇ ಕುಲಗೆಟ್ಟು ಹೋಗಿದೆ. ಇಲ್ಲಿ ಕೆಲಸಮಾಡುವುದು ಕೇವಲ ಪ್ರಶಸ್ತಿಗಾಗಿ ಎಂಬ ಭಾವನೆಯಿದೆ, ಜನರು ಇಲ್ಲಿನ ಪ್ರಶಸ್ತಿಗಳ ಬಗ್ಗೆ ನಂಬಿಕೆ ಕಳೆದುಕೊಂಡಿದ್ದಾರೆ, ಬದಲಾಗಿ ಲೇವಡಿ ಮಾಡುವ ಪರಿಸ್ಥಿತಿ ಎದುರಾಗಿದೆ, ಇದು ಹೀಗೆ ಮುಂದುವರಿದರೇ ಇಡೀ ಸಾಹಿತ್ಯ ಕೇತ್ರಕ್ಕೆ ಗಂಡಾಂತರ ಕಾದಿದೆ ಎಂದು ಹಿರಿಯ ಸಾಹಿತಿ ಡಾ. ಮೊಗಸಾಲೆ ಹೇಳಿದರು.

ಉಪ್ಪುಂದ ಶಂಕರಕಲಾ ಮಂದಿರದಲ್ಲಿ ಕುಂದ ಅಧ್ಯಯನ ಕೇಂದ್ರ ಉಪ್ಪುಂದ, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಘಟಕ ಹಾಗೂ ಸ್ಥಳೀಯ ಸಂಘಟನೆಗಳ ಸಹಕಾರದೊಂದಿಗೆ ಸಹಕಾರದೊಂದಿಗೆ ಉಪ್ಪುಂದದ ಹೊಳಪು ಅಭಿನಂದನಾ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಕುಂದಶ್ರೀ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಉಪ್ಪುಂದ ಚಂದ್ರಶೇಖರ ಹೊಳ್ಳ ದಂಪತಿ ಅನನ್ಯವಾದುದು. ಹೊಳ್ಳರು ನಿಜಕ್ಕೂ ಸಂತಸದ ಸಂತರು. ಎಲ್ಲಾ ಟೀಕೆ ಟಿಪ್ಪಣಿಗಳ ನಡುವೆಯೇ ತಮ್ಮ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬಂದವರು ಎಂದ ಅವರು, ನವ್ಯ ಹರಿಕಾರ ಮೊಗೇರಿ ಗೋಪಾಲಕೃಷ್ಣ ಅಡಿಗರ ಹೆಸರಿನಲ್ಲಿ ಇನ್ನೂ ಪ್ರಶಸ್ತಿ ನೀಡದಿರುವುದು ವಿಪರ‍್ಯಾಸದ ಸಂಗತಿಯಾಗಿದೆ, ಶೀಘ್ರ ಸರ್ಕಾರ ಅವರ ಹೆಸರಿನಲ್ಲಿ ಟ್ರಸ್ಟ್ ರಚಿಸಿ ಪ್ರಶಸ್ತಿ ನೀಡಲು ಮುಂದಾಗಬೇಕು ಎಂದರು.

ಶಾಸಕ ಗೋಪಾಲ ಪೂಜಾರಿ ಮಾತನಾಡಿ, ಉಪ್ಪುಂದ ಚಂದ್ರಶೇಖರ ಹೊಳ್ಳರು ಕೇವಲ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳದೇ, ಸಾಮಾಜಿಕ, ಧಾರ್ಮಿಕ ಹಾಗೂ ಸಂಶೋಧನ ಕ್ಷೇತ್ರದಲ್ಲಿಯೂ ಅಪಾರ ಕೊಡುಗೆ ನೀಡಿದ್ದಾರೆ. ಅವರ 70ರ ವರ್ಷಾಚರಣೆಯ ಸಂದರ್ಭದಲ್ಲಿ 7 ಮಂದಿ ಹಿರಿಯ ಸಾಹಿತಿಗಳನ್ನು ಗೌರವಿಸುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದ್ದು ಇದು ಮುಂದಿನ ಪೀಳಿಗೆಗೆ ಮಾದರಿಯಾಗಲಿದೆ ಎಂದರು.

ಧರ್ಮಸ್ಥಳ ಜನಜಾಗೃತಿ ವೇದಿಕೆಯ ಅಧ್ಯಕ್ಷ ಬಿ. ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅಭಿನಂದನಾ ಗ್ರಂಥ ಬಿಡುಗಡೆ ಮಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಭಿನಂದನಾ ಭಾಷಣ ಮಾಡಿದರು. ಪುರೋಹಿತ ವೇ.ಮೂ. ರಾಮಕೃಷ್ಣ ಜೋಷಿ, ಇತಿಹಾಸ ತಜ್ಞ ಡಾ. ಪಿ.ಎನ್. ನರಸಿಂಹ ಮೂರ್ತಿ, ಹಿರಿಯ ಸಾಹಿತಿ ಡಾ. ನಾ. ಮೊಗಸಾಲೆ, ಮಂಗಳೂರು ಮುದ್ದಣ ಚಾವಡಿಯ ನಂದಳಿಕೆ ಬಾಲಚಂದ್ರ ರಾವ್ ಅವರಿಗೆ ಕುಂದಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಹೊಳ್ಳ ದಂಪತಿಗಳ ಸಾಹಿತ್ಯದ ಕುರಿತಾದ ಬರಹವನ್ನೊಳಗೊಂಡ ‘ಸಾಹಿತ್ಯ ಸಮೀಕ್ಷೆ’ ಹಾಗೂ ‘ಶುಚಿ-ರುಚಿ’ ಗ್ರಂಥಗಳ ಬಿಡುಗಡೆಗೊಂಡವು. ಸ್ಥಳೀಯ ಸಂಘಟನೆಗಳ ಪರವಾಗಿ ಉಪ್ಪುಂದ ಚಂದ್ರಶೇಖರ ಹೊಳ್ಳ ಹಾಗೂ ಅವರ ಧರ್ಮಪತ್ನಿ ವರಮಹಾಲಕ್ಷ್ಮೀ ಹೊಳ್ಳ ದಂಪತಿಯನ್ನು ಸನ್ಮಾನಿಸಲಾಯಿತು.

ಡಾ. ಕನರಾಡಿ ವಾದಿರಾಜ ಭಟ್ಟ ಸಂಪಾದಕರ ನುಡಿಗಳನ್ನಾಡಿದರು, ಪ್ರೋ. ಉಪೇಂದ್ರ ಸೋಮಯಾಜಿ ಸನ್ಮಾನಿತರ ಪರಿಚಯ ಪತ್ರ ವಾಚಿಸಿದರು, ರಾಮಕೃಷ್ಣ ಸೇರುಗಾರ್ ಬಿಜೂರು ಸ್ವಾಗತಿಸಿದರು, ನಿತ್ಯಾನಂದ ಶೆಟ್ಟಿ ವಂದಿಸಿದರು. ಗಣಪತಿ ಹೋಬಳಿದಾರ್ ಹಾಗೂ ಯು ಗಣೇಶ ಪ್ರಸನ್ನ ಮಯ್ಯ ನಿರೂಪಿಸಿದರು.

Exit mobile version