Kundapra.com ಕುಂದಾಪ್ರ ಡಾಟ್ ಕಾಂ

ನಾಯ್ಕನಕಟ್ಟೆ ಜಿಎಸ್‌ಬಿ ಸಮಾಜದ ಶ್ರೀ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬುದ್ಧವಂತಿಕೆ, ಕಾರ್ಯಚತುರತೆ ಇದ್ದವರಿಗೆ ಸಾಧನೆ ಮಾಡುವುದು ಕಷ್ಟಕರವಾಗದು. ಹಾಗೆಯೇ ತಮ್ಮ ಹಿರಿಯರು ಹಾಕಿಕೊಟ್ಟ ವಿಚಾರಧಾರೆ ಹಾಗೂ ಸ್ವ-ಪ್ರತಿಭೆಯಿಂದ ಸಪ್ತ ಕೊಂಕಣಿ ಸಮುದಾಯದ ಭವ್ಯ ಪರಂಪರೆ ನಡೆದುಬಂದಿದೆ. ಇದನ್ನು ಹೀಗೆಯೆ ಉಳಿಸಿ ಬೆಳೆಸಬೇಕು ಎಂದು ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀ ವಿದ್ಯಾಧಿರಾಜ ತೀರ್ಥ ಸ್ವಾಮೀಜಿ ಹೇಳಿದರು.

ನಾಯ್ಕನಕಟ್ಟೆ ಜಿಎಸ್‌ಬಿ ಸಮಾಜದವರು ನೂತನವಾಗಿ ನಿರ್ಮಿಸಿದ ಶ್ರೀ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾ ಮಹೋತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.

ಸರ್ವಸಿದ್ಧಿಗೆ ಸಾಧನೆಯೇ ಮುಖ್ಯ. ಮನೋಕಲ್ಪತ ವಿಕಲ್ಪಗಳಲ್ಲಿ ಮರೆಯಾಗಿರುವ ಮಾನವನ ನೈಜ ಸ್ವಭಾವ ಅಭಿವ್ಯಕ್ತವಾಗುವಂತೆ ಈ ಶರೀರವನ್ನು ದೇಗುಲವನ್ನಾಗಿ ಮಾಡುವುದೇ ಸಂಸ್ಕಾರ. ನಮ್ಮ ಜೀವನವು ಒಂದು ಯಜ್ಞವಿದ್ದಂತೆ. ಯಜ್ಞ ಮಾಡುವ ಮೊದಲು ಸಲಕರಣೆಗಳನ್ನು ಶುದ್ಧೀಕರಿಸುವಂತೆ ಪ್ರತಿಯೊಬ್ಬರು ತಮ್ಮ ತನು ಮನಗಳನ್ನು ಕೆಲವು ವಿಧಿ ಪೂರ್ವಕ ಕರ್ಮಗಳಿಂದ ಪರಿಶುದ್ಧಗೊಳಿಸಬೇಕು. ಇಂತಹ ಕರ್ಮಗಳಿಗೆ ಅನೇಕ ನಡಾವಳಿಗಳನ್ನು ಋಷಿ ಮುನಿಗಳು, ಯೋಗಿಗಳು ಹಾಕಿಕೊಟ್ಟಿದ್ದಾರೆ ಎಂದರು.

ದೇವಳದ ಪುನಃ ಪ್ರತಿಷ್ಟಾ ಮಹೋತ್ಸವದ ಪ್ರಧಾನ ಸೇವಾದಾರರಾದ ರವೀಂದ್ರ ಪುಂಡಲೀಕ್ ಪ್ರಭು, ನರಸಿಂಹ ಆರ್. ಪ್ರಭು, ಆನಂದರಾಯ್ ಯಶವಂತ್ ಪ್ರಭು, ಇಂಜಿನಿಯರ್ ಉಡುಪಿ ಮಾಧವರಾಯ್ ಕಾಮತ್, ದೇವರಿಗೆ ಬೆಳ್ಳಿ ಪ್ರಭಾವಳಿ ಸಮರ್ಪಿಸಿದ ಕಮಲಾವತಿ ರತ್ನಾಕರ ಭಟ್ ಇವರಿಗೆಲ್ಲರಿಗೂ ಸ್ವಾಮೀಜಿ ಗೌರವಿಸಿ, ಆಶೀರ್ವದಿಸಿದರು.

ಶ್ರೀ ವೆಂಕಟರಮಣ ಸೇವಾ ಸಮಿತಿ ಅಧ್ಯಕ್ಷ ದಾಮೋದರ ಪ್ರಭು ಪ್ರಾಸ್ತಾವಿಸಿದರು. ಹತ್ತು ಸಮಸ್ತರ ಪರವಾಗಿ ಉದ್ಯಮಿ ರಾಘವೇಂದ್ರ ಸುಬ್ರಾಯ ಪ್ರಭು ಮಾತನಾಡಿದರು. ಕಾರ್ಯದರ್ಶಿ ರಮೇಶ ಪೈ ವಂದಿಸಿದರು. ನಂತರ ಉಡುಪಿ ಹಸ್ಮುಖಿ ಕಲಾತಂಡದವರಿಂದ ಕೊಂಕಣಿ ನಾಟಕ ಪ್ರದರ್ಶನಗೊಂಡಿತು.

Exit mobile version