Kundapra.com ಕುಂದಾಪ್ರ ಡಾಟ್ ಕಾಂ

ಅಮೇರಿಕಾ ಸಮ್ಮೇಳನ: ಕೊಂಕಣಿ ಮಾತೃಭಾಷಿಗರು ಕೊಂಕಣಿ ಸ್ಮರಿಸುವುದೆಂದರೆ ಭಾರತವನ್ನು ಸ್ಮರಿಸಿದಂತೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅದು ಅಮೇರಿಕಾ ಅಟ್ಲಾಂಟಾದ ಕೊಂಕಣಿ ಸಮ್ಮೇಳನದ ಪ್ರಧಾನ ಸಭಾಂಗಣ. ಅಂದಿನ ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ವೇದಿಕೆಗೆ ಬಂದ ಜಾದೂಗಾರ ಮೂವರು ಗಣ್ಯರನ್ನು ವೇದಿಕೆಗೆ ಬರಮಾಡಿಕೊಂಡ. ಬಂದವರ ಕೈಯಲ್ಲಿ ಕೇಸರಿ ಬಿಳಿ ಹಾಗೂ ಹಸಿರು ಬಣ್ಣದ ಕರವಸ್ತ್ರವನ್ನು ಬೇರೆ ಬೇರೆಯಾಗಿ ನೀಡಿದ. ಶಕ್ತಿ ಭಕ್ತಿ ಯುಕ್ತಿಯನ್ನು ಬಿಂಬಿಸುವ ಆ ಕರವಸ್ತ್ರಗಳ ಬಗ್ಗೆ ವಿಶ್ಲೇಷಿಸಿದ. ಬಂದವರು ಅದನ್ನು ಪರಿಶೀಲಿಸಿದ ನಂತರ ಗಟ್ಟಿಯಾಗಿ ಎರಡೂ ಕೈಯಲ್ಲಿ ಅವೆಲ್ಲವನ್ನೂ ಮುಷ್ಠಿ ಹಿಡಿಯುವಂತೆ ಸೂಚಿಸಿದ. ಹ್ಹಾಗೆ ಬಿಗಿಯಾಗಿ ಹಿಡಿದ ಬಿಡಿ ಬಿಡಿ ಕರವಸ್ತ್ರಗಳು ನೋಡುನೋಡುತ್ತಿದ್ದಂತೆ ಇಡಿಯಾಗಿ ಭಾರತದ ರಾಷ್ಟ್ರ ದ್ವಜವಾಗಿ ಆ ಮೂವರ ಕೈಯಲ್ಲಿ ಅರಳಿಕೊಂಡಿತ್ತು.

ಹೀಗೆ ದೂರದ ಅಮೇರಿಕಾದಲ್ಲಿ ತನ್ನ ಜಾದೂವಿನ ಮೂಲಕ ತ್ರೀವರ್ಣ ಧ್ವಜ ಅರಳಿಸಿದ ಜಾದೂಗಾರ ಉಪ್ಪುಂದದ ಓಂಗಣೇಶ್. ಮೂರು ದಿನದ ಸಮ್ಮೇಳನಕ್ಕೆ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದ ಅವರು ತಮ್ಮ ಜಾದೂವನ್ನು ಉದ್ಘಾಟಿಸುತ್ತಾ ಕೊಂಕಣಿ ಭಾಷೆ ಭಾರತದ ಸಂಪತ್ತು. ಜಗತ್ತಿನ ಯಾವ ಭಾಗದಲ್ಲೇ ಇರಲಿ ಕೊಂಕಣಿ ಸ್ಮರಿಸುವುದೆಂದರೆ ಭಾರತವನ್ನು ಸ್ಮರಿಸಿದಂತೆ. ವಿದೇಶದಲ್ಲೂ ನಿತ್ಯ ತನ್ನ ತಾಯ್ನೆಲವನ್ನ ಸ್ಮರಿಸುವ ರೂಢಿ ಮುಂದಿನ ಪೀಳಿಗೆಯವರಿಗೂ ಅರಿವಾಗ ಬೇಕು. ನಮ್ಮ ಭಾಷೆ ಪರಂಪರೆ ಹಾಗೂ ಸಂಸ್ಕೃತಿಯ ಬಗ್ಗೆ ಹೆಚ್ಚು ಒಲುಮೆ ಉಕ್ಕುವಂತೆ ಆಯೋಜಿಸಿದ ಈ ಸಮ್ಮೇಳನ ಸಾರ್ಥಕ ಕಂಡಿದೆ. ಎಂದು ತನ್ನ ಜಾದೂವಿನ ಆಶಯವನ್ನು ಮಾತಿನ ಮೂಲಕವೂ ಹಂಚಿಕೊಂಡರು.

ಈ ತ್ರಿವರ್ಣ ಮ್ಯಾಜಿಕ್ ಪ್ರಹಸನಕ್ಕೆ ಉತ್ತರ ಅಮೇರಿಕಾ ಕೊಂಕಣಿ ಸಂಸ್ಥೆಯ ಅಧ್ಯಕ್ಷೆ ಶೀಲಾ ಶೆಣೈ, 2016ರ ಸಮ್ಮೇಳನಾ ಸಮಿತಿ ಅಧ್ಯಕ್ಷ ರಾಜ್ ಕಿಣಿ ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿ ಬಾಣೂರು ನಾಗೇಶ್ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಳಿಕ ಅಮ್ಮನ ರೂಪಾಯಿ, ಜೈ ಹೊ ಕೊಂಕಣಿ, ಬೆಂಕಿಯಲ್ಲಿ ಅರಳಿದ ಹೂಗಳು ಹೀಗೆ ಹಲವು ವೈವಿಧ್ಯಮಯ ಚಿಂತನಾ ಜಾದೂ ಪ್ರದರ್ಶನ ನಡೆಯಿತು. ಸ್ವಾತಿ ಹಾಲಾಡಿ ಕಾರ್ಯಕ್ರಮ ನಿರೂಪಿಸಿ ಸುಮನಾ ಪೈ ವಂದಿಸಿದರು.

Exit mobile version