Kundapra.com ಕುಂದಾಪ್ರ ಡಾಟ್ ಕಾಂ

ರಾಷ್ಟ್ರೀಯ ಕುಟುಂಬ ನೆರವು ಯೋಜನೆ: ಫಲಾನುಭವಿಗಳಿಗೆ ಚೆಕ್ ವಿತರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕ್ಷೇತ್ರದ ಪ್ರತಿಯೊಂದು ಗ್ರಾಮ ಪಂಚಾಯತ್‌ನಲ್ಲಿ ಆ ಭಾಗದ ಗ್ರಾಮಸ್ಥರ ಅನುಕೂಲಕ್ಕಾಗಿ ಸರಕಾರ ಬಾಪೂಜಿ ಸೇವಾ ಕೇಂದ್ರ ಆರಂಭಿಸಿದೆ. ನಾಡ ಗ್ರಾಮದಲ್ಲಿ ಶುಕ್ರವಾರ ಚಾಲನೆ ನೀಡಿದ್ದು, ಈ ಬಗ್ಗೆ ಇನ್ನು ಮುಂದೆ ಪ್ರತೀ ಶುಕ್ರವಾರ ಜನಸಾಮಾನ್ಯರ ಸಮಸ್ಯೆಗಳನ್ನು ಪರಿಹರಿಸಲು ಆಂದೋಲನದ ರೀತಿಯಲ್ಲಿ ೨೬ ಪಂಚಾಯತ್ ವ್ಯಾಪ್ತಿಯಲ್ಲಿ ಕೆಲಸ ಮಾಡಲಾಗುವುದು ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.

ಬೈಂದೂರು ಶಾಸಕರ ಕಚೇರಿಯಲ್ಲಿ ರಾಷ್ಟ್ರೀಯ ಕುಟುಂಬ ನೆರವು ಯೋಜನೆಯಡಿಯಲ್ಲಿ 21 ಫಲಾನುಭವಿಗಳಿಗೆ ತಲಾ 20 ಸಾವಿರ ಚೆಕ್ ವಿತರಿಸಿ ಮಾತನಾಡಿದರು. ಸರಕಾರದ ಯೋಜನೆಗಳನ್ನು ಜನರಿಗೆ ಮುಟ್ಟಿಸುವ ನಿಟ್ಟಿನಲ್ಲಿ ಒಂದೇ ಸೂರಿನಡಿ ೧೦೦ ಸೌಲಭ್ಯ ಒದಗಿಸುವ ವ್ಯವಸ್ಥೆ ಈ ಯೋಜನೆಯಲ್ಲಿದೆ. ಕ್ಷೇತ್ರವನ್ನು ಪೋಡಿಮುಕ್ತ ಮಾಡುವುದೇ ಮುಂದಿನ ಗುರಿಯಾಗಿದೆ ಎಂದರು.

ಫಲಾನುಭವಿಗಳಿಗೆ ಪಹಣಿ ಪತ್ರ, ಸ್ಥಳನಕ್ಷೆ ಪಂಚಾಯತ್‌ನಲ್ಲಿಯೇ ನೀಡಲಾಗುತ್ತದೆ. ಇದರಿಂದ ದೂರದವರಿಗೆ ತಾಲೂಕು ಕೇಂದ್ರದಲ್ಲಿರುವ ತಹಶೀಲ್ದಾರರ ಕಚೇರಿ ಅಲೆದಾಟ ತಪ್ಪಿದಂತಾಗುತ್ತದೆ. ಇದರಿಂದ ಸಮಯದ ಜತೆಗೆ ಹಣವೂ ಉಳಿತಾಯವಾಗುತ್ತದೆ. ಗ್ರಾಪಂ ಆಸ್ಥಿಗಳ ಪುನರುಜ್ಜೀವನಗೊಳಿಸುವುದು ಹಾಗೂ ಮೂಲಸೌಕರ್ಯ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ ಎಂದರು.

94ಸಿ ಬಗ್ಗೆ ಯಾರೂ ಹೋರಾಟ ಮಾಡುವ ಅಥವಾ ಸರಕಾರಕ್ಕೆ ಆಗ್ರಹಿಸುವ ಅಗತ್ಯವಿಲ್ಲ. ಸರಕಾರ ಈಗಾಗಲೇ ಈ ಪ್ರಕ್ರೀಯೆಗೆ ಚಾಲನೆ ನೀಡಿದ್ದು, ಸಮಯ ಕೂಡಾ ನಿಗದಿ ಮಾಡಲಾಗಿದೆ. ಅಲ್ಲದೇ ಕಂದಾಯ ಸಚಿವರು ಕೂಡಾ ಡಿಸೆಂಬರ್ ಅಂತ್ಯದೊಳಗೆ ಅರ್ಜಿ ವಿಲೇವಾರಿ ಮಾಡುವ ಬಗ್ಗೆ ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ಮಾಡಿದ್ದಾರೆ. ಈ ಕುರಿತು ಹಣ ಮಾಡುವ ಉದ್ದೇಶದಿಂದ ಕೆಲವು ಸಂಘಟನೆಗಳು ಮಧ್ಯವರ್ತಿಗಳಂತೆ ನಾಟಕಮಾಡಿ ಜನರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸಿ ಲೂಟಿ ಮಾಡುತ್ತಿದ್ದಾರೆ. ಕೆಲವರು ಇದರಿಂದ ಮೋಸಹೋಗಿದ್ದು ನಮ್ಮ ಗಮನಕ್ಕೆ ಬಂದಿದೆ. ಸುಲಿಗೆ ಮಾಡುವವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಳಿಗೆ ತಿಳಿಸಲಾಗಿದೆ. ಅರ್ಜಿದಾರರು ತಹಶೀಲ್ದಾರ, ಗ್ರಾಮ ಕರಣಿಕರನ್ನು ನೇರವಾಗಿ ಭೇಟಿಮಾಡಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು. ಇದಕ್ಕೆ ಮೂರನೆಯವರ ಅಗತ್ಯವಿಲ್ಲ. ಅಲ್ಲದೇ ಈಗ ಕಟ್ಟುವ ಹಣದ ಪ್ರಮಾಣವನ್ನು ಕೂಡಾ ಸರಕಾರ ಕಡಿಮೆ ಮಾಡಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಉಚಿತವಾಗಿ ಮಂಜೂರು ಮಾಡುವ ನಿರ್ಧಾರದ ಮಾತುಕತೆ ಇಲಾಖೆಯ ಮಟ್ಟದಲ್ಲಿ ನಡೆಯುತ್ತಿದೆ ಎಂದರು.

ಜಿಪಂ ಸದಸ್ಯೆ ಗೌರಿ ದೇವಾಡಿಗ, ತಾಪಂ ಸದಸ್ಯರಾದ ಎಚ್. ವಿಜಯ್ ಶೆಟ್ಟಿ, ರಾಜು ದೇವಾಡಿಗ ತ್ರಾಸಿ, ಜಗದೀಶ ದೇವಾಡಿಗ, ಮಾಜಿ ಸದಸ್ಯ ಕೆ. ರಮೇಶ ಗಾಣಿಗ, ಕೆಡಿಪಿ ಸದಸ್ಯ ಎಸ್. ರಾಜು. ಪೂಜಾರಿ, ತಹಶೀಲ್ದಾರ್ ಕಿರಣ್ ಜಿ. ಗೌರಯ್ಯ, ಕಂದಾಯ ಅಧಿಕಾರಿ ಅಣ್ಣಪ್ಪ ದೇವಾಡಿಗ, ಗ್ರಾಮ ಕರಣಿಕರು ಹಾಗೂ ಕಂದಾಯ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version