Kundapra.com ಕುಂದಾಪ್ರ ಡಾಟ್ ಕಾಂ

ಮಕ್ಕಳ ಮನಸ್ಸನ್ನು ಅರಿಯುವ ಕೆಲಸವನ್ನು ಪೋಷಕರು ಮಾಡಬೇಕು: ಡಾ. ಪಿ. ವಿ ಭಂಡಾರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಉನ್ನತ ಆದರ್ಶಗಳನ್ನು ಹೊಂದಲು ಅಂಕಗಳು ಮಾನದಂಡವಲ್ಲ. ಬಾಲ್ಯದಿಂದಲೇ ಶಿಸ್ತುಬದ್ದ ಜೀವನ, ಕನಸು ನನಸಾಗಿಸುವ ದೃಢ ನಿರ್ಧಾರ ಮಾಡಿ ಶ್ರದ್ಧೆಯಿಂದ ಓದಿದರೆ ಉತ್ತಮ ಫಲಿತಾಂಶ ನಿಮ್ಮದಾಗಲಿದೆ ಎಂದು ಉಡುಪಿ ಬಾಳಿಗಾ ಆಸ್ಪತ್ರೆ ಮುಖ್ಯಸ್ಥ, ಮನಃಶಾಸ್ತ್ರಜ್ಞ ಡಾ. ಪಿ. ವಿ ಭಂಡಾರಿ ಹೇಳಿದರು.

ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಉಪ್ಪುಂದ, ರೈತಶಕ್ತಿ, ರೈತ ಸೇವಾ ಒಕ್ಕೂಟ ಹಾಗೂ ಖಂಬದಕೋಣೆ ಪದವಿ ಪೂರ್ವ ಕಾಲೇಜಿನ ಜಂಟಿ ಆಶ್ರಯದಲ್ಲಿ ಕಾಲೇಜು ಸಭಾಂಗಣದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಮನೋವಿಕಾಸ, ಪೋಷಕರ, ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವೆ ನಡೆಯುವ ಕಲಿಕಾ ಪ್ರಕ್ರೀಯೆಗಳ ಸವಾಲುಗಳು ಹಾಗೂ ಪರಿಹಾರ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.

ಪಾಲಕರು ತಮ್ಮ ಮಕ್ಕಳಿಗೆ ಕಷ್ಟಪಟ್ಟು ಓದು ಅಂತಾರೆಯೇ ವಿನಃ ಇಷ್ಟಪಟ್ಟು ಓದು ಎನ್ನುವ ಪರಿಪಾಠ ಬೆಳೆಸಿಕೊಂಡಿಲ್ಲ. ಪ್ರತಿಯೊಬ್ಬ ಮಕ್ಕಳಲ್ಲೂ ಒಳ್ಳೆಯ ಗುಣಗಳಿರುತ್ತವೆ. ಅವುಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಅವರ ಆತ್ಮಸ್ಥೈರ್ಯವನ್ನು ಹೆಚ್ಚಿಸಬೇಕು. ಮಕ್ಕಳ ನಡುವೆ ಹೋಲಿಕೆ, ತುಲನೆಯನ್ನು ಮಾಡದೇ ಅವರ ತಪ್ಪುಗಳನ್ನೇ ಹುಡುಕುತ್ತಾ ಅನಗತ್ಯ ಒತ್ತಡಗಳನ್ನು ಹೇರುತ್ತಾ ಹೀಯಾಳಿಸುವುದರಿಂದ ಅವರನ್ನು ಮನಸ್ಸು ಚಂಚಲತೆಗೆ ಸಿಲುಕುತ್ತದೆ. ಅವರು ಓದುವ ಸಮಯವನ್ನು ಗೌರವಿಸಿ. ಈ ನಿಟ್ಟಿನಲ್ಲಿ ಹೆತ್ತವರು ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಂಡು ಅದಕ್ಕೆ ತಕ್ಕಂತೆ ತಮ್ಮ ಮನಸ್ಥಿತಿ ಬದಲಾಯಿಸಿಕೊಳ್ಳಬೇಕು. ಪ್ರತಿಯೊಂದು ಕೆಲಸವನ್ನು ಘನತೆಯಿಂದ ಮಾಡಿ ಹಣ ಗಳಿಸುವ ಜತೆಗೆ ಮಕ್ಕಳಲ್ಲಿ ಒಳ್ಳೆಯ ಗುಣಗಳನ್ನು ಬೆಳೆಸುವ ಮೂಲಕ ರಾಷ್ಟ್ರದ ಮಾದರಿ ಪ್ರಜೆಯಾಗಿ ರೂಪಿಸಬೇಕು ಎಂದರು.

ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಅಧ್ಯಕ್ಷತೆವಹಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಸಂಸ್ಥೆಯ ವತಿಯಿಂದ ಡಾ. ಪಿ. ವಿ ಭಂಡಾರಿಯವರನ್ನು ಸನ್ಮಾನಿಸಲಾಯಿತು. ಮನೋವೈದ್ಯ ಡಾ. ಪ್ರಕಾಶ್ ಶೆಟ್ಟಿ, ಪ್ರಾಂಶುಪಾಲೆ ಜಯಲಕ್ಷ್ಮೀ ಕಾರಂತ್, ಸಂಘದ ನಿರ್ದೇಶಕರಾದ ಮೋಹನ ಪೂಜಾರಿ, ಗುರುರಾಜ್ ಹೆಬ್ಬಾರ್ ಉಪಸ್ಥಿತರಿದ್ದರು. ಉಪಪ್ರಾಂಶುಪಾಲ ಉಮೇಶ್ ರಾಯ್ಕರ್ ಸ್ವಾಗತಿಸಿ ಸಂಘದ ಸಿಇಒ ಸತೀಶ್ ಪೈ ವಂದಿಸಿದರು. ಶಿಕ್ಷಕ ವಿಶ್ವನಾಥ ಶೆಟ್ಟಿ ನಿರೂಪಿಸಿದರು. ನಂತರ ಸಂವಾದ ಕಾರ್ಯಕ್ರಮ ನಡೆಯಿತು.

Exit mobile version