Kundapra.com ಕುಂದಾಪ್ರ ಡಾಟ್ ಕಾಂ

ಬರವಣಿಗೆ ಸಮುದಾಯ ಕಟ್ಟುವ ಹಂತದಲ್ಲಿ ನಿರ್ಣಾಯಕ ಪಾತ್ರವಹಿಸುತ್ತದೆ: ಪ್ರೊ. ಬಿ. ಶಿವರಾಮ ಶೆಟ್ಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಾಹಿತ್ಯಿಕ ಬರವಣಿಗೆ, ಓದು, ಕ್ರಿಯಾಚರಣೆಗೆ ಸಂಬಂಧಿಸಿದ್ದಲ್ಲ. ಬದಲಾಗಿ ಅದು ಹೊಸದೊಂದು ಮನಸ್ಥಿತಿ ರೂಪಿಸುವ ಮಾಧ್ಯಮ. ಬರವಣಿಗೆ ಸಮುದಾಯ ಕಟ್ಟುವ ಹಂತದಲ್ಲಿ ನಿರ್ಣಾಯಕ ಪಾತ್ರವಹಿಸುತ್ತದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆ ಅಧ್ಯಕ್ಷ ಪ್ರೊ. ಬಿ. ಶಿವರಾಮ ಶೆಟ್ಟಿ ಹೇಳಿದ್ದಾರೆ.

ಬಸ್ರೂರು ಶ್ರೀ ಶಾರದಾ ಕಾಲೇಜು ಆಶ್ರಯದಲ್ಲಿ ನಡೆದ ಸಾಹಿತ್ಯಿಕ ಬರವಣಿಗೆ, ಹೊಸಬಗೆ ಸಾಧ್ಯತೆ ಮತ್ತು ಅವಕಾಶಗಳು ಎಂಬ ವಿಷಯದ ಕುರಿತು ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಬರವಣಿಗೆ ಕ್ರಿಯೆ ಆಧುನಿಕಪೂರ್ವದಲ್ಲಿಯೇ ಆರಂಭಗೊಂಡು, ಆಧುನಿಕ ಸಂದರ್ಭದಲ್ಲಿ ಹಲವು ಆಯಾಮಗಳಲ್ಲಿ ತೆರೆದುಕೊಂಡಿರುದ ಕಾಣಲು ಸಾಧ್ಯವಿದೆ. ಇದು ಭೂತ, ವರ್ತಮಾನ, ಭವಿಷ್ಯದಲ್ಲಿ ಪ್ರಕಟಗೊಳ್ಳುವ ಮೂಲಕ ಕಾಲದ ನಿರ್ದಿಷ್ಟತೆ ಮೀರಿ ನಿಲ್ಲುವಂಥದ್ದಾಗಿದೆ. ಬಹುಬಗೆಯ ಓದು, ತಿಳಿವಳಿಕೆ ಇದ್ದಾಗ ಮಾತ್ರ ಉತ್ತಮ ಬರವಣಿಗೆಗೆ ಸಾಧ್ಯವಾಗಬಲ್ಲದು ಎಂದರು. ಬರವಣಿಗೆಗೆ ತೊಡಗುವ ಯುವ ತಲೆಮಾರು ಈ ನಿಟ್ಟಿನಲ್ಲಿ ಮಗದಷ್ಟು ಗಂಭೀರವಾಗಿ ಯೋಚಿಸಬೇಕಾಗಿದೆ ಎಂದರು.

ಕಾಲೇಜು ಸಂಚಾಲಕ ಬಿ. ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಸೃಜನಶೀಲ ಬರವಣಿಗೆ ಬಗ್ಗೆ ಡಾ. ಬಿ. ಜನಾರ್ಧನ ಭಟ್, ಪತ್ರಿಕಾ ಬರವಣಿಗೆ ಕುರಿತು ನಿತ್ಯಾನಂದ ಪಡ್ರೆ ಹಾಗೂ ಅಂತರ್ಜಾಲ ಬರವಣಿಗೆ ಕುರಿತು ಡಾ. ಸಾತ್ವಿಕ್ ಎನ್. ವಿ. ತರಬೇತಿ ನೀಡಿದರು. ಪ್ರಾಂಶುಪಾಲ ಕೆ. ರಾಧಾಕೃಷ್ಣ ಶೆಟ್ಟಿ ಸ್ವಾಗತಿಸಿದರು. ಉಪನ್ಯಾಸಕ ಪ್ರತಾಪಚಂದ್ರ ಶೆಟ್ಟಿ ಹಳ್ನಾಡು ಹಾಗೂ ಮಮತ ನಿರ್ವಹಿಸಿದರು. ಕಾರ್ಯಾಗಾರ ಸಂಯೋಜಕಿ ಡಾ. ಚಂದ್ರಾವತಿ ಶೆಟ್ಟಿ ವಂದಿಸಿದರು.

Exit mobile version