Kundapra.com ಕುಂದಾಪ್ರ ಡಾಟ್ ಕಾಂ

ಎ.10-12: ’ಕೊಂಕಣಿ ರಂಗರತ್ನ’ ಪ್ರಶಸ್ತಿ ಪ್ರದಾನ

ಬೈಂದೂರು: ಕೊಂಕಣಿ ಭಾಷಾ ರಂಗ ಸಾಧಕರನ್ನು ಗೌರವಿಸಿ ತನ್ಮೂಲಕ ಕೊಂಕಣಿ ರಂಗ ಭೂಮಿ ಚಟುವಟಿಕೆಯನ್ನು ಹುರಿದುಂಬಿಸುವ ಉದ್ದೇಶಕ್ಕಾಗಿ ಉಪ್ಪುಂದದ ರಂಗತರಂಗ ಸಂಸ್ಥೆ ಆರಂಬಿಸಿರುವ ’ಕೊಂಕಣಿ ರಂಗರತ್ನ ಪ್ರಶಸ್ತಿ’ಗೆ ರಾಜ್ಯದ 9 ಕಲಾವಿದರನ್ನು ಆಯ್ಕೆಮಾಡಲಾಗಿದ್ದು ಏಪ್ರಿಲ್ 10, 11 ಹಾಗೂ 12ರಂದು ಕಂಬದಕೋಣೆ ನಿರ್ಮಲಾ ಸಭಾ ಭವನದಲ್ಲಿ ಜರಗುವ ಕೊಂಕಣಿ ರಂಗೋತ್ಸವದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಜರುಗಲಿದೆ. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ನಡೆಯುವ ಈ ಉತ್ಸವವನ್ನು ಏ 10 ರಂದು ಸಂಜೆ 5:30ಕ್ಕೆ ಮಾನ್ಯ ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಉದ್ಘಾಟಿಸಲಿದ್ದು ಶಾಸಕ ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ.

ರಂಗ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದು ಕೊಂಕಣಿ ಭಾಷೆಗೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ನೀಡಲಾಗುವ ಈ ಗೌರವಕ್ಕೆ ರಂಗನಟ ನಿರ್ದೇಶಕ ಸತೀಶ್ ಬಾಲಕೃಷ್ಣ ಪೈ ಕುಂದಾಪುರ, ಯಕ್ಷಗಾನ ಕಲಾವಿದೆ ಕಿರಣ ಪೈ, ಹಾಸ್ಯ ಸಾಹಿತಿ ಸಂಧ್ಯಾ ಶೆಣೈ, ಸಂಗೀತ ಹಾಗೂ ರಂಗಭೂಮಿ ನಿರ್ದೇಶಕ ಶ್ರೀನಿವಾಸ ಪ್ರಭು ಉಪ್ಪುಂದ, ನಿರ್ದೇಶಕ ರಂಗ ನಟ ಅಲ್ವೀನ್ ಅಂದ್ರಾದೆ ಸಾಸ್ತಾನ, ಲೇಖಕಿ ನಟಿ ಮಮತಾ ಕಾಮತ್ ಮೈಸೂರು, ನಿರ್ದೇಶಕ ನಟ ರವೀಂದ್ರ ಕೃಷ್ಣ ಪ್ರಭು ಶಿರಾಲಿ, ರಂಗನಟ ಪಾಂಡುರಂಗ ಮಡಿವಾಳ ಗಂಗೊಳ್ಳಿ, ರಂಗ ನಟ ನಿರ್ದೇಶಕ ಸಂತೋಷ ಶೆಣೈ ಮಂಗಳೂರು ಪಾತ್ರರಾಗಿದ್ದಾರೆ.
ಹಲವು ಗಣ್ಯರ ಸಮಕ್ಷಮ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದ ಮೂರೂ ದಿನಗಳಕಾಲ ಕೊಂಕಣಿ ಮಹಿಳಾ ಸಮಾವೇಶ, ಶಿಕ್ಷಣದಲ್ಲಿ ನಮ್ಮ ಪಾತ್ರ ವಿಚಾರ ಗೋಷ್ಥಿ, ನಾಟಕ, ಯಕ್ಷಗಾನವಲ್ಲದೆ ಸ್ಥಳೀಯ ವರಮಹಾಲಕ್ಮೀ ವೃತ ಸೇವಾ ಸಮಿತಿಯವರ ಹಾಡು ನೃತ್ಯದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ ಎಂದು ರಂಗತರಂಗ ಅಧ್ಯಕ್ಷ ಓಂಗಣೇಶ್, ಕಾರ್ಯದರ್ಶಿ ಶಶಿಧರ ಶೆಣೈ, ಸಂಚಾಲಕ ಶ್ರೀಶ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Exit mobile version