Kundapra.com ಕುಂದಾಪ್ರ ಡಾಟ್ ಕಾಂ

ಸರಕಾರಿ ಶಾಲೆಗಳ ವಿಲೀನಕ್ಕೆ ಹಾಲಾಡಿ ಗ್ರಾ.ಪಂ ಮುನ್ನುಡಿ. ಗ್ರಾಮಸಭೆಯಲ್ಲಿ ಮಹತ್ವದ ನಿರ್ಣಯ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಕ್ಕಳ ಸಂಖ್ಯೆ ಕಡಿಮೆಯಿರುವ ಹಾಲಾಡಿ ಗ್ರಾ.ಪಂ ವ್ಯಾಪ್ತಿಯಲ್ಲಿನ ಮೂರು ಸರಕಾರಿ ಹಿರಿಯ ಹಾಗೂ ಕಿರಿಯ ಪ್ರಾಥಮಿಕ ಶಾಲೆಗಳನ್ನು ವಿಲೀನಗೊಳಿಸುವ ಮಹತ್ವದ ನಿರ್ಣಯವನ್ನು ಹಾಲಾಡಿ ಗ್ರಾಪಂ ಕೈಗೊಂಡಿದೆ. ಸ.ಕಿ.ಪ್ರಾ ಶಾಲೆ ತಟ್ಟೊಟ್ಟು, ಸ.ಹಿ.ಪ್ರಾ ಶಾಲೆ ಹಾಲಾಡಿ ಇವೆರಡು ಶಾಲೆಯನ್ನು ಪೂರಕ ಶೈಕ್ಷಣಿಕ ವ್ಯವಸ್ಥೆಯಿರುವ ಮೂಡುಹಾಲಾಡಿಯ ಹಿರಿಯ ಪ್ರಾಥಮಿಕ ಶಾಲೆಗೆ ವಿಲಿನಗೊಳಿಸಲು ಗ್ರಾ.ಪಂ ಮುಂದಾಗಿದೆ. ಒಂದೇ ಕಡೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದು, ಶಿಕ್ಷಕರ ಕೊರತೆ ನೀಗಿಸುವುದು, ದೂರದ ಮಕ್ಕಳನ್ನು ಕರೆತರಲು ವಾಹನದ ವ್ಯವಸ್ಥೆ ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸುವ ಸಲುವಾಗಿ ಮೂಡುಹಾಲಾಡಿ ಶಾಲೆಯಲ್ಲಿ ನಡೆದ ಪ್ರಥಮ ಸುತ್ತಿನ ಗ್ರಾಮಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

ಈ ಬಗ್ಗೆ ಗ್ರಾಮಸಭೆಯಲ್ಲಿ ಮಾತನಾಡಿದ ಹಾಲಾಡಿ ಗ್ರಾಪಂ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಮಕ್ಕಳ ಸಂಖ್ಯೆ ಕಡಿಮೆಯಿರುವುದರಿಂದ ಶಿಕ್ಷಕರು ಹಾಗೂ ಮೂಲಭೂತ ಸೌಲಭ್ಯಗಳ ಕೊರತೆಯನ್ನು ಗಮನಿಸಿ, ಸರಕಾರಿ ಶಾಲೆಗಳಿಗೆ ಅಗತ್ಯ ಸೌಕರ್ಯ ದೊರೆಯಬೇಕು ಎಂಬ ಕಾರಣಕ್ಕೆ ಮೂರು ಶಾಲೆಗಳನ್ನು ವಿಲೀನಗೊಳಿಸುವ ನಿರ್ಣಯಕ್ಕೆ ಬಂದಿದ್ದು ಶಿಕ್ಷಣ ಇಲಾಖೆಯಗೆ ಪಂಚಾಯತಿಯಲ್ಲಿ ಕೈಗೊಂಡ ನಿರ್ಣಯವನ್ನು ಕಳುಹಿಸಿ ಒಪ್ಪಿಗೆ ಪಡೆಯಲಾಗುವುದು ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಗ್ರಾಮದ ಅಭಿವೃದ್ಧಿಗೆ ಗ್ರಾಮಸ್ಥರ ಸಹಕಾರ ಅಗತ್ಯ: ಸರಕಾರದ ಸುತ್ತೋಲೆಯ ಪ್ರಕಾರದಲ್ಲಿ ಗ್ರಾ. ಪಂ.ನಲ್ಲಿ ಕೆಲಸವಾಗುತ್ತಿದ್ದು, ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದೇವೆ. ವ್ಯಾಪಾರಸ್ತರು ಹಾಗೂ ಗ್ರಾಮಸ್ತರು ಪೇಟೆಯ ನೈರ್ಮಲ್ಯ ಕಾಪಾಡಬೇಕು ಮತ್ತು ಸೂಕ್ತ ಸಮಯದಲ್ಲಿ ತೆರಿಗೆ ಪಾವತಿಸಬೇಕು. ಈ ಮೂಲಕ ಗ್ರಾಮ ಪಂಚಾಯತಿನ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸಬೇಕು ಎಂದ ಅವರು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಗ್ರಾ.ಪಂ.ಗೆ ಸಭಾಭವನ ನಿರ್ಮಿಸಲು ರೂ.20 ಲಕ್ಷ ಅಂದಾಜು ಮೊತ್ತ ಮಂಜೂರು ಮಾಡಿರುವ ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಚಂದ್ರ ಶೆಟ್ಟಿ ಅವರಿಗೆ ಅಭಿನಂದನೆ ಸಲ್ಲಿಸಿದರು.

ಸಿದ್ದಾಪುರ ಕ್ಷೇತ್ರದ ಜಿ. ಪಂ. ಸದಸ್ಯ ಹಾಲಾಡಿ ತಾರಾನಾಥ ಶೆಟ್ಟಿ ಮಾತನಾಡಿ, ಆಡಳಿತ ವ್ಯವಸ್ಥೆ ಹಾಗೂ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿದರೇ ಗ್ರಾಮದ ಅಭಿವೃದ್ಧಿ ಸಾಧ್ಯವಿದೆ ಎಂದರು.

ತಾ.ಪಂ ಸದಸ್ಯೆ ಸವಿತಾ ಮೊಗವೀರ, ಗ್ರಾ. ಪಂ. ಉಪಾಧ್ಯಕ್ಷೆ ಶಾರದಾ ಅರ್ಜುನ್, ಸದಸ್ಯರಾದ ಅಶೋಕ ಶೆಟ್ಟಿ ಚೋರಾಡಿ, ಭೋಜರಾಜ ಕುಲಾಲ್, ಗುರುಪ್ರಸಾದ ಶೆಟ್ಟಿ, ಸುಶೀಲ ಸಿ. ಶೆಟ್ಟಿ, ಜಾನಕಿ, ಮಂಜಿ, ಸುಮತಿ ಕುಲಾಲ, ರತ್ನಾಬಾಯಿ, ಹಾಲಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಶೋಭಾ, ಅಂಗನವಾಡಿ ಕೇಂದ್ರಗಳ ಮೇಲ್ವಿಚಾರಕಿ ಶೋಭಾ ನಾಡಕರ್ಣಿ, ಮೆಸ್ಕಾಂ ಹಾಲಾಡಿ ಶಾಖೆಯ ಕಿರಿಯ ಅಭಿಯಂತರ ಮಂಜುನಾಥ ಶಾನೂಭೋಗ್, ಭೂ ಅಭಿವೃದ್ಧಿ ಬ್ಯಾಂಕ್ ಕುಂದಾಪುರದ ಕ್ಷೇತಾಧಿಕಾರಿ ರತ್ನಾಕರ ಶೆಟ್ಟಿ, ಶಂಕರನಾರಾಯಣ ಆರಕ್ಷಕ ಠಾಣೆಯ ಸಹಾಯಕ ಆರಕ್ಷಕ ನಿರೀಕ್ಷಕ ಶುಭಕರ, ಪಂಚಾಯತ್ ರಾಜ್ ಇಂಜೀನಿಯರ್ ಉಪವಿಭಾಗದ ಸಹಾಯಕ ಅಭಿಯಂತರ ಪ್ರಕಾಶ್, ಗ್ರಾಮ ಕರಣಿಕ ಅಫ್ರೋಜ್ ಮೊದಲಾದವರು ಉಪಸ್ಥಿತರಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಸಂತ್ ಕುಮಾರ್ ಸ್ವಾಗತಿಸಿದರು. ಗುಮಾಸ್ತೆ ಲಲಿತಾ ವರದಿ ವಾಚಿಸಿದರು. ಕಾರ್ಯದರ್ಶಿ ಹರೀಶ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು/ಕುಂದಾಪ್ರ ಡಾಟ್ ಕಾಂ ಸುದ್ದಿ./

Exit mobile version