Kundapra.com ಕುಂದಾಪ್ರ ಡಾಟ್ ಕಾಂ

ಬಾಪುಜಿ ಸೇವಾಕೇಂದ್ರದ ಮೂಲಕ ಗ್ರಾಪಂನಲ್ಲಿಯೇ ವಿವಿಧ ಸೇವೆಗಳು: ಶಾಸಕ ಗೋಪಾಲ ಪೂಜಾರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಪ್ಪುಂದ: ಸರಕಾರದ ಯೋಜನೆಗಳನ್ನು ಜನರಿಗೆ ಮುಟ್ಟಿಸುವ ನಿಟ್ಟಿನಲ್ಲಿ ಒಂದೇ ಸೂರಿನಡಿ ವಿವಿಧ ಇಲಾಖೆಗಳ ನೂರು ಸೌಲಭ್ಯ ಒದಗಿಸುವ ವ್ಯವಸ್ಥೆಯಿರುವ ಈ ಯೋಜನೆಯನ್ನು ದೇಶದಲ್ಲಿಯೇ ಪ್ರಥಮವಾಗಿ ರಾಜ್ಯದಲ್ಲಿ ಬಾಪುಜಿ ಸೇವಾ ಕೇಂದ್ರ ಆರಂಭಿಸಲಾಗಿದೆ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.

ಉಪ್ಪುಂದ ಗ್ರಾಪಂ ಸಭಾಭವನದಲ್ಲಿ ಬಾಪೂಜಿ ಸೇವಾ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿ ತಾಲೂಕು ಕಚೇರಿಗಳಲ್ಲಿ ಸರತಿ ಸಾಲು ಕಡಿಮೆ ಮಾಡಲು ಜನಸಾಮಾನ್ಯರ ಸಲಹೆಯಂತೆ ಫಲಾನುಭವಿಗಳ ಕಡತಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡುವ ಉದ್ದೇಶದಿಂದ ಸಂಪುಟ ಸಭೆಯಲ್ಲಿ ಪಂಚಾಯತ್ ರಾಜ್ ತಿದ್ದುಪಡಿ ಮಾಡುವುದರ ಮೂಲಕ ಈ ಯೋಜನೆ ಜಾರಿಗೆ ತರಲಾಗಿದೆ. ಇದರಿಂದ ದೂರದವರಿಗೆ ತಾಲೂಕು ಕೇಂದ್ರದಲ್ಲಿರುವ ತಹಶೀಲ್ದಾರರ ಕಚೇರಿ ಅಲೆದಾಟ ತಪ್ಪಿದಂತಾಗುತ್ತದೆ. ಸಮಯದ ಜತೆಗೆ ಹಣವೂ ಉಳಿತಾಯವಾಗುತ್ತದೆ ಎಂದರು.

ಗ್ರಾಪಂ ಅಧ್ಯಕ್ಷೆ ದುರ್ಗಮ್ಮ ಅಧ್ಯಕ್ಷತೆವಹಿಸಿದ್ದರು. ಉಪಾಧ್ಯಕ್ಷೆ ಸಿಂಗಾರಿ ಶೆಟ್ಟಿ, ಹಾಗೂ ಸದಸ್ಯರು, ಜಿಪಂ ಸದಸ್ಯರಾದ ಸುರೇಶ ಬಟ್ವಾಡಿ, ಗೌರಿ ದೇವಾಡಿಗ, ತಾಪಂ ಸದಸ್ಯೆ ಪ್ರಮಿಳಾ ದೇವಾಡಿಗ, ತಾಪಂ ಕಾರ್ಯನಿರ್ವಹಣಾಧಿಕಾರಿ ನಾರಾಯಣ ಸ್ವಾಮಿ ಉಪಸ್ಥಿತರಿದ್ದರು. ಪ್ರಭಾರ ಪಿಡಿಒ ಗಣೇಶ ಸ್ವಾಗತಿಸಿ, ನಿರೂಪಿಸಿದರು.  ಈ ಭಾಗದ ಬೈಂದೂರು, ಶಿರೂರು, ಪಡುವರಿ ಹಾಗೂ ಬಿಜೂರು ಪಂಚಾಯತ್‌ಗಳಲ್ಲಿ ಕೂಡಾ ಬಾಪೂಜಿ ಸೇವಾ ಕೇಂದ್ರಕ್ಕೆ ಶಾಸಕರು ಚಾಲನೆ ನೀಡಿದರು.

Exit mobile version