Kundapra.com ಕುಂದಾಪ್ರ ಡಾಟ್ ಕಾಂ

ಒಳ್ಳೆಯ ವಿಚಾರಗಳು ಶ್ರೇಯಸ್ಸನ್ನು ಕಲ್ಪಸುವ ದಾರಿ: ಎಂ. ಜಯರಾಮ ಅಡಿಗ

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಒಳ್ಳೆಯ ವಿಚಾರಗಳು ಎಲ್ಲ ಕಡೆಯಿಂದಲೂ ಬರುತ್ತಿರಲಿ ಎಂಬುದು ವೇದಗಳ ಆಶಯ. ಅದು ಎಲ್ಲ ಕಾಲಕ್ಕೂ, ಎಲ್ಲರಿಗೂ ಶ್ರೇಯಸ್ಸನ್ನು ಕರುಣಿಸುವ ದಾರಿ. ಒಮ್ಮುಖ ವಿಚಾರಧಾರೆಗಿಂತ ದ್ವಿಮುಖ, ಬಹುಮುಖೀ ವಿಚಾರ ವಿನಿಮಯಕ್ಕೆ ಅವಕಾಶ ಕಲ್ಪಿಸುವ ವೇದಿಕೆ ಇಂದು ಅವಶ್ಯವಾಗಿದೆ. ದೇಶ, ಕಾಲ, ಪರಿಸ್ಥಿಗಳಿಗೆ ಹೊಂದಿಕೆಯಾಗುವ ಚಿಂತಕರ ಚಾವಡಿ ಕೇವಲ ಬೌದ್ಧಿಕವಾಗಿಲ್ಲದೆ ಭಾವನಾತ್ಮಕ ಸಂಬಂಧಗಳ ಹಿತಮಿತವಾಗಿ ಹೊಂದುವ ಆಶಯದ ಕುಂದ ಅಧ್ಯಯನ ಕೇಂದ್ರದ ಸುವಿಚಾರ ಬಳಗದ ಕಲ್ಪನೆಯೇ ಆಶಾದಾಯಕವೂ ಚೇತೋಹಾರಿಯೂ ಆಗಿದೆ ಎಂದು ಬೆಂಗಳೂರು ಭಾರತೀಯ ವಿದ್ಯಾಭವನದ ಮಾಧ್ಯಮ ಭಾರತೀಯ ನಿರ್ದೇಶಕ ಎಂ. ಜಯರಾಮ ಅಡಿಗ ನುಡಿದರು.

ಉಪ್ಪುಂದ ಶಂಕರ ಕಲಾ ಮಂದಿರದಲ್ಲಿ ಕುಂದ ಅಧ್ಯಯನ ಕೇಂದ್ರದ ಸುವಿಚಾರ ಬಳಗದ ಕಾರ್ಯಚಟುವಟಿಕೆಗಳನ್ನು ದೀಪ ಬೆಳಗಿಸಿ ಉದ್ಘಾಟಿಸುತ್ತಾ ನುಡಿದರು.

ನಿವೃತ್ತ ಉಪನ್ಯಾಸಕ, ವಿಪ್ರನುಡಿ ಸಂಪಾದಕ ವಿದ್ವಾನ್ ಭಾಸ್ಕರ ಉಡುಪ ವರ್ಷದ ವಿವಿಧ ಮಾಸಗಳಲ್ಲಿ ಆಚರಿಸಬಹುದಾದ ವಿವಿಧ ವೃತಾಚರಣೆಗಳು, ಅವುಗಳ ಹಿನ್ನಲೆ, ಉದ್ದೇಶ ಮತ್ತು ವಿಧಿ ನಿಯಮಗಳ ಕುರಿತು ಉಪನ್ಯಾಸ ನೀಡುತ್ತಾ ಉಪವಾಸ, ತೀರ್ಥಸ್ನಾನ, ದೇವತಾರಾಧನೆ, ದಾನ, ದಕ್ಷಿಣೆಗಳಿಂದ ನಮ್ಮ ಮನಸ್ಸಿನ ಒಳ-ಹೊರಗುಗಳನ್ನು ಪರಿಶುದ್ಧಿಗೊಳಿಸಿಕೊಂಡು ಇಷ್ಟದೇವತಾ ಕೃಪೆಗೆ ಪಾತ್ರರಾಗುವುದು ಮುಖ್ಯ ಜೀವನದಲ್ಲಿ ಯಾರಿಗೂ ತೊಂದರೆಯಾಗದಂತೆಯೂ, ಸಕಲ ಜೀವಿಗಳ ಒಳಿತನ್ನು ಹಾರೈಸುವುದು ವೃತಾಚರಣೆಯ ಪ್ರಮುಖ ಭಾಗವಾಗಿದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ಸುವಿಚಾರ ಬಳಗದ ಅಧ್ಯಕ್ಷ ಬಿ.ರಾಮಕೃಷ್ಣ ಸೇರೆಗಾರರು ವಹಿಸಿದ್ದರು. ಸಂಸ್ಥಾಪಕ ಯು.ಸಿ.ಹೊಳ್ಳರು ಸಜ್ಜನರು, ಸಾತ್ತ್ವಿಕರ ಸದ್ದಡಗುತ್ತಿರುವ ಇಂದಿನ ದಿನಗಳಲ್ಲಿ ಶಾಂತ ವಾತಾವರಣದಲ್ಲಿ ಸತ್‌ಸಂಘದಲ್ಲಿ ಒಂದುಗೂಡುವುದೇ ಚೇತೋಹಾರಿಯಾಗಿದೆ ಎಂದರು.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಶುಭಾಶಂಸನೆಗೈದರು. ವಿಪ್ರರಂಜನಿ ತಂಡದ ಶ್ರೀಮತಿ ವರಮಹಾಲಕ್ಷ್ಮೀ ಹೊಳ್ಳ ತಂಡದವರಿಂದ ತುಳಸೀದಾಸಕೃತ ಹನುಮಾನ್ ಚಾಲೀಸ್ ವನ್ನು ಸುಶ್ರಾವ್ಯವಾಗಿ ಪ್ರಸ್ತುತಪಡಿಸಲಾಯ್ತು. ಮಾತೃಮಂಡಳಿಯ ಶ್ರೀಮತಿ ಆಶಾ ಪಟವಾಲ್ ಮತ್ತು ತಂಡದವರಿಂದ ಭಗವದ್ಗೀತೆಯ ಧ್ಯಾನ ಶ್ಲೋಕವನ್ನು ಪಠಿಸಲಾಯ್ತು. ಶ್ರೀನಿವಾಸ ಮದ್ದೋಡಿ ಮತ್ತು ಸರಾಫ್ ರಮಾನಂದ ಪೈ ತಮ್ಮ ವಿಶಿಷ್ಟ ಅನುಭವಗಳನ್ನು ಹಂಚಿಕೊಂಡರು. ಸುವಿಚಾರ ಬಳಗದ ಸಂಚಾಲಕ ವಿ.ಹೆಚ್.ನಾಯಕ್ ಕಾರ್ಯಕ್ರಮವನ್ನು ನಿರೂಪಿಸಿದರು. ಯು.ಗಣೇಶ ಪ್ರಸನ್ನ ಮಯ್ಯ ಸ್ವಾಗತಿಸಿದರು.

Exit mobile version