Kundapra.com ಕುಂದಾಪ್ರ ಡಾಟ್ ಕಾಂ

ಅಮೇರಿಕ ‘ಅಕ್ಕ ಸಮ್ಮೇಳನ’ಕ್ಕೆ ಯಾಕೂಬ್ ಖಾದರ್ ಗುಲ್ವಾಡಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅಮೇರಿಕದ ನ್ಯೂಜೆರ್ಸಿಯ ಅಟ್ಲಾಂಟಿಕ್ ನಗರದಲ್ಲಿ ಸೆಪ್ಟೆಂಬರ್ 2ರಿಂದ 4ರ ವರೆಗೆ ನಡೆಯುವ 9ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದ ಬಹುಭಾಷಾ ಕವಿಗೋಷ್ಠಿಯಲ್ಲಿ ಭಾಗವಹಿಸಲು ಬ್ಯಾರಿ ಸಾಹಿತ್ಯ ಅಕಾಡೆಮಿಯ ೨೦೧೫ನೇ ಸಾಲಿನ ಡಾ| ವಹಾಬ್ ದೊಡ್ಮನೆ ಪ್ರಶಸ್ತಿ ಪುರಸ್ಕೃತ ಬರಹಗಾರ ಮತ್ತು ಕಲಾವಿದ ಯಾಕೂಬ್ ಖಾದರ್ ಗುಲ್ವಾಡಿ ವಿಶೇಷ ಆಮಂತ್ರಿತರಾಗಿದ್ದಾರೆ.

ಬಹುಮುಖ ಪ್ರತಿಭೆ ಯಾಕೂಬ್ ಖಾದರ್ ಗುಲ್ವಾಡಿ ದೇಶದ ವಿವಿದೆಡೆ ಅಲ್ಲದೇ ವಿದೇಶಗಳಾದ ಅಮೇರಿಕ, ಕೆನಡಾ, ಸಿಂಗಾಪುರ, ದುಬೈ, ಓಮನ್, ಶ್ರೀಲಂಕಾ ಮಾಲ್ಡೀವ್ಸ್, ಕತಾರ್, ಕೀನ್ಯಾ, ತಾನ್ಜೇನಿಯಾ, ಮಲೇಶಿಯಾ, ಥೈಲಾಂಡ್, ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ನಡೆದ ಸಾಹಿತ್ಯ, ಸಾಂಸ್ಕೃತಿಕ ಸಮ್ಮೇಳನಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದಲ್ಲದೇ ಪ್ರವಾಸಕಥನಗಳನ್ನು ಪ್ರಕಟಿಸಿದ್ದಾರೆ. ಯುವ ಬರಹಗಾರರಾಗಿ, ಚಲನಚಿತ್ರಗಳಿಗೆ ಕಲಾ ನಿರ್ದೇಶಕನಾಗಿ, ವಸ್ತ್ರವಿನ್ಯಾಸಕಾರರಾಗಿ ಕೆಲಸ ಮಾಡಿದ್ದಲ್ಲದೇ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ.

ಗುಲ್ವಾಡಿ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಧಾನ ನಿರ್ದೇಶಕರಾಗಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಸದಸ್ಯನಾಗಿ, ಕರ್ನಾಟಕ ಚಲನಚಿತ್ರ ಆಯ್ಕೆ ಸಮಿತಿಯ ಸದಸ್ಯನಾಗಿ, ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿಯ ಸಲಹಾ ಮಂಡಳಿಯ ನಿರ್ದೇಶಕನಾಗಿ, ಹೊರದೇಶಗಳಲ್ಲಿ ಕನ್ನಡ ಸಮ್ಮೇಳನವನ್ನು ಸಂಘಟಿಸುವ ಮೂಲಕ ಕನ್ನಡ ಕಟ್ಟುವ ಕೆಲಸ ಮಾಡಿದ್ದಾರೆ. ಇವರ ಸಾಮಾಜಿಕ ಸೇವೆಗಳನ್ನು ಗುರುತಿಸಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಡಾ| ವಹಾಬ್ ದೊಡ್ಮನೆ ಸ್ಮಾರಕ ಅಧ್ಯಯನ ಪ್ರಶಸ್ತಿ, ಅಬುದಾಬಿ ಕನ್ನಡ ಸಂಘದಿಂದ ಪ್ರಶಸ್ತಿ, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಕಲ್ಯಾಣ ಮಂಡಳಿಯಿಂದ ರಾಜ್ಯ ಮಟ್ಟದ ಸದ್ಭಾವನಾ ಪ್ರಶಸ್ತಿ, ಕರ್ನಾಟಕ ಸಾಂಸ್ಕೃತಿ ಅಕಾಡೆಮಿ ನೀಡಿದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಮತ್ತು ತ್ಸುನಾಮಿ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಕ್ಕೆ ಕೇಂದ್ರ ಸರಕಾರ ನೀಡಿದ ಪ್ರಶಸ್ತಿಗಳಿಗೆ ಅರ್ಹರಾಗಿದ್ದಾರೆ.

Exit mobile version