Kundapra.com ಕುಂದಾಪ್ರ ಡಾಟ್ ಕಾಂ

ಭಂಡಾರ್‌ಕಾರ್ಸ್ ಕಾಲೇಜು ಹಳೆ ವಿದ್ಯಾರ್ಥಿ ಸಂಘ: ಅಧ್ಯಕ್ಷ-ಕಾರ್ಯದರ್ಶಿ ಪುನರಾಯ್ಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರದ ಭಂಡಾರ್‌ಕಾರ್ಸ್ ಕಾಲೇಜಿನ ಹಳೆವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆ ಕಾಲೇಜಿನ ಎ.ವಿ. ಹಾಲ್‌ನಲ್ಲಿ ನಡೆಯಿತು.

ಮಹಾಸಭೆಯಲ್ಲಿ ಸಂಘದ ಕಾರ್ಯದರ್ಶಿ ರಂಜಿತ್ ಕುಮಾರ್ ಶೆಟ್ಟಿ ವಕ್ವಾಡಿ ವರದಿ ವಾಚಿಸಿದರು. ಕೋಶಾಧಿಕಾರಿ ಕೆ. ಶಾಂತರಾಮ್ ಆಯ ವ್ಯಯ ಮಂಡಿಸಿದರು. ಅಧ್ಯಕ್ಷ ಕೆ. ಕಾರ್ತಿಕೇಯ ಮಧ್ಯಸ್ಥ ಎರಡು ವರ್ಷಗಳ ಕಾಲ ಹಳೆ ವಿದ್ಯಾರ್ಥಿ ಸಂಘವನ್ನು ಉತ್ತಮವಾಗಿ ಮುನ್ನಡೆಸಲು ಸಹಕರಿಸಿದ ಸದಸ್ಯರಿಗೆ ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು

ಇದೇ ಸಂದರ್ಭದಲ್ಲಿ ಮುಂದಿನ ಎರಡು ವರ್ಷ ಅವಧಿಗೆ ನೂತನ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳ ಆಯ್ಕೆ ಪ್ರಕ್ರಿಯೆಗೆ ಚುನಾವಣಾಧಿಕಾರಿಯಾಗಿ ಹಿರಿಯ ಸದಸ್ಯ ಕೃಷ್ಣಾನಂದ ಚಾತ್ರ ಅವರನ್ನು ನೇಮಿಸಿದ್ದು, ಅಧ್ಯಕ್ಷ ಮತ್ತು ಕಾರ್ಯದರ್ಶಿಯನ್ನು ಮುಂದಿನ ಎರಡು ವರ್ಷಗಳ ಅವಧಿಗೆ ಪುನರಾಯ್ಕೆ ಮಾಡುವ ಕುರಿತು ಸಭೆ ನಿರ್ಧರಿಸಿತು.

ಸಂಘದ ಪೂರ್ವಾಧ್ಯಕ್ಷ ರಾಜೀವ ಕೋಟ್ಯಾನ್ ಅವರು ಕೆ. ಕಾರ್ತಿಕೇಯ ಮಧ್ಯಸ್ಥರನ್ನು ಅಧ್ಯಕ್ಷ ಹಾಗೂ ರಂಜಿತ್ ಕುಮಾರ್ ಶೆಟ್ಟಿಯವರನ್ನು ಕಾರ್ಯದರ್ಶಿಯಾಗಿ ಸೂಚಿಸಿದರು. ಸಂಘದ ಉಪಾಧ್ಯಕ್ಷ ಸಂದೀಪ ಪೂಜಾರಿ ಅನುಮೋದಿಸಿದರು. ಮುಂಬರುವ ದಿನಗಳಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ನಡೆಸುವುದಾಗಿ ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಪುನರಾಯ್ಕೆಗೊಂಡ ಕೆ. ಕಾರ್ತಿಕೇಯ ಮಧ್ಯಸ್ಥ ತಿಳಿಸಿದ್ದಾರೆ.

Exit mobile version