Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಮನೆಯೊಳಕ್ಕೆ ಕಾಳಿಂಗ ಸರ್ಪ ಇದೆಯೆಂದು ಹುಡುಕಾಡಿದರೆ ಸಿಕ್ಕಿದ್ದು ಮರಿ ನಾಗ!

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ನಗರದ ಮನೆಯೊಂದರಲ್ಲಿ ಸೇರಿಕೊಂಡಿದ್ದ ಕಾಳಿಂಗ ಸರ್ಪವೊಂದು ಕೆಲಕಾಲ ಈ ಪರಿಸರದವರನ್ನು ಆತಂಕಕ್ಕೀಡು ಮಾಡಿತ್ತು. ಚಿಂತಾಕ್ರಾಂತರಾದ ಮನೆಮಂದಿ ಅರಣ್ಯ ಇಲಾಖೆಗೆ ಸಂದೇಶ ರವಾನಿಸಿದರು. ಕೆಲಹೊತ್ತಿನಲ್ಲಿ ಉರಗ ತಜ್ಞರೂ ಬಂದು ಹುಡುಕಾಟ ಆರಂಭಿಸಿದರು. ಕಾಳಿಂಗ ಸರ್ಪವನ್ನು ನೋಡಲು ಮನೆ ಎದುರೊಂದಿಷ್ಟು ಜನ. ಆದರೆ ಮನೆಯಲ್ಲ ಹುಡುಕಾಡಿದ ಮೇಲೆ ಉರಗ ತಜ್ಞರ ಕಣ್ಣಿಗೆ ಬಿದ್ದದ್ದು ಮಾತ್ರ ನಾಗರಹಾವಿನ ಮರಿ!

ಅರೆ ಮನೆಯಲ್ಲಿ ಸೇರಿದ್ದ ಕಾಳಿಂಗ ಸರ್ಪ ಮಾಯವಾಯ್ತು ಅಂದುಕೊಂಡಿರಾ? ವಾಸ್ತವಾಗಿ ಅಲ್ಲಿ ಕಾಳಿಂಗ ಸರ್ಪವೇ ಬಂದಿರಲಿಲ್ಲ! ಮನೆಯವರಿಗೆ ಹಾವಿನ ಪರಿಚಯವೂ ಇಲ್ಲದ್ದರಿಂದ, ಮನೆಯೊಳಕ್ಕೆ ಬಂದ ಹಾವನ್ನು ಸ್ಪಷ್ಟವಾಗಿ ಗಮನಿಸದೇ ಏಕಾಏಕಿ ಕಾಳಿಂಗ ಸರ್ಪವೆಂದು ಕೂಗಾಡಿಕೊಂಡಿದ್ದಾರೆ. ಆದರೆ ಅಲ್ಲಿಗೆ ಒಂದಿದ್ದು ಮರಿ ನಾಗರಹಾವು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಅರಣ್ಯ ಇಲಾಖೆ ಮಾಹಿತಿ ಮೇರೆಗೆ ಹೆಮ್ಮಾಡಿಯ ಉರಗ ತಜ್ಞ ಜೋಸೆಫ್ ಲೂವೀಸ್ ಕ್ಷೇತ್ರ ಶಿಕ್ಷಣಾಧಿಕಾಗಳ ಕಛೇರಿ ಸಮೀಪದ ಮನೆಯನ್ನು ಸೇರಿಕೊಂಡಿದ್ದ ಹಾವನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬಂದಿದ್ದಾರೆ. ಅಂತು ಹಾವು ಮನೆಯಿಂದ ಹೊರಹೊಯಿತಲ್ಲ ಎಂದು ಮನೆಯವರು ತೃಪ್ತಿಪಟ್ಟುಕೊಂಡರೇ, ಕಾಳಿಂಗ ಸರ್ಪವನ್ನು ನೋಡುವ ಭಾಗ್ಯ ತಪ್ಪಿಹೊಯಿತಲ್ಲ ಎಂದು ಕುತೂಹಲದಿಂದ ಕಾಯುತ್ತಿದ್ದ ಜನ ಬೇಸರದಿಂದ ಹಿಂತಿರುಗಿದ್ದಾರೆ/ಕುಂದಾಪ್ರ ಡಾಟ್ ಕಾಂ ಸುದ್ದಿ/

 news sneke incident in kundapura11

Exit mobile version