Site icon Kundapra.com ಕುಂದಾಪ್ರ ಡಾಟ್ ಕಾಂ

ಸೇವಾ ಮನೋಭಾವದಿಂದ ನಾಯಕತ್ವ ಗುಣ: ಗೋಪಾಲ ಪೂಜಾರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ವಿದ್ಯಾರ್ಥಿಗಳು ಸೇವಾ ಮನೋಭಾವನೆಯಿಂದ ಸತ್ಕಾರ್ಯದಲ್ಲಿ ತೊಡಗಿಸಿಕೊಂಡಾಗ ಸಾಮಾಜಿಕ ಜವಾಬ್ದಾರಿ ಮತ್ತು ನಾಯಕತ್ವದ ಗುಣಗಳು ಬೆಳೆಯಲು ಸಾಧ್ಯ. ಪಠ್ಯೇತರ ಚಟುವಟಿಕೆಗಳಿಂದ ದೈಹಿಕ ಮತ್ತು ಮಾನಸಿಕ ಚಟುವಟಿಕೆಗಳು ಹೆಚ್ಚಾದಂತೆ ಮನೋಬಲ ವೃದ್ಧಿಸುತ್ತದೆ. ಸೇವೆಯಲ್ಲಿ ಸಕ್ರೀಯರಾದಾಗ ಒತ್ತಡದ ಜೀವನದಿಂದ ಮುಕ್ತರಾಗಿ ಪ್ರೀತಿ ಸಹಬಾಳ್ವೆಯಿಂದ ಉತ್ತಮ ಜೀವನ ನಿರ್ವಹಿಸಲು ಸಾದ್ಯ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.

ಬೈಂದೂರು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ೨೦೧೬-೧೭ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಬದುಕಿನಲ್ಲಿ ಶಿಸ್ತು ಮತ್ತು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು. ಶಿಕ್ಷಣವು ಸಮಗ್ರ ವ್ಯಕ್ತಿತ್ವವನ್ನು ರೂಪಿಸುವ ಪ್ರಕ್ರೀಯೆ ಎಂಬುದನ್ನು ಸಾಧಿಸಿ ತೋರಿಸಬೇಕು ಎಂದ ಶಾಸಕರು, ಎನ್‌ಎಸ್‌ಎಸ್‌ನಿಂದ ಪಡೆದ ಉತ್ತಮ ಅನುಭವಗಳು ನಿಮ್ಮ ಭವಿಷ್ಯದ ಬಾಳಿಗೆ ದಾರಿದೀಪವಾಗಲಿ ಎಂದು ಹಾರೈಸಿದರು.

ಕಾಲೇಜಿನ ಪ್ರಾಂಶುಪಾಲ ಪಾಲಾಕ್ಷ ಟಿ. ಅಧ್ಯಕ್ಷತೆವಹಿಸಿದ್ದರು. ಮಣಿಪಾಲ ಎಂಐಟಿ ಪ್ರೊಫೆಸರ್ ಬಾಲಕೃಷ್ಣ ಮದ್ದೋಡಿ, ಸಿಕ್ಕಿಂ ಮಣಿಪಾಲ ವಿಶ್ವವಿದ್ಯಾಲಯದ ಪ್ರೊಫೆಸರ್ ಕೆನ್ಯೂಟ್ ಎಫ್. ರೊಡ್ರಿಗಸ್ ಎನ್‌ಎಸ್‌ಎಸ್‌ನ ಕಾರ್ಯಚಟುವಟಿಕೆ ಹಾಗೂ ಉದ್ದೇಶಗಳ ಬಗ್ಗೆ ವಿವರಿಸಿದರು.

ಯಡ್ತರೆ ಗ್ರಾಪಂ ಅಧ್ಯಕ್ಷ ಎನ್. ನಾಗರಾಜ ಶೆಟ್ಟಿ, ಜಿಪಂ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಉದ್ಯಮಿ ಬಿ. ಎಂ. ನಾಗರಾಜ ಗಾಣಿಗ, ಉಪನ್ಯಾಸಕರಾದ ರಾಮನಾಥ ನಾಯ್ಕ್, ಉದಯಕುಮಾರ್ ಎಂ.ಪಿ., ಪ್ರಸನ್ನ ಮಯ್ಯ, ಪ್ರದೀಪಕುಮಾರ್ ಉಪಸ್ಥಿತರಿದ್ದರು. ಘಟಕದ ಯೋಜನಾಧಿಕಾರಿ ರಾಘವೇಂದ್ರ ಗುಡಿಗಾರ್, ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಉಪನ್ಯಾಸಕರಾದ ಹರೀಶ್ ಕೋಟ್ಯಾನ್ ವಂದಿಸಿ, ಸತೀಶ್ ಎಂ. ನಿರೂಪಿಸಿದರು.

Exit mobile version