Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರಿನಲ್ಲಿ ಶಿಕ್ಷಕ ದಿನಾಚರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಶೈಕ್ಷಣಿಕ ಕ್ಷೇತ್ರ ವ್ಯಾಪ್ತಿಯ ಶಿಕ್ಷಕರ ದಿನಾಚರಣೆಯು ಸೋಮವಾರ ಇಲ್ಲಿನ ರೋಟರಿ ಸಮುದಾಯ ಭವನದಲ್ಲಿ ನಡೆಯಿತು. ಶಾಸಕ ಕೆ. ಗೋಪಾಲ ಪೂಜಾರಿ ಸಮಾರಂಭವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಶಿಕ್ಷಕ ದಿನ ದೇಶದ ಅಪ್ರತಿಮ ತತ್ವವೇತ್ತ ಡಾ. ಎಸ್. ರಾಧಾಕೃಷ್ಣನ್ ಅವರ ಬದುಕು, ಸಾಧನೆ ಮತ್ತು ವಿಚಾರಗಳನ್ನು ಮನನ ಮಾಡಬೇಕಾದ ದಿನ. ಅವರು ರಾಷ್ಟ್ರದ ಗುರು ಸ್ಥಾನದಲ್ಲಿರುವವರು. ಶಿಕ್ಷಕರು ಅವರ ಆದರ್ಶಗಳನ್ನು ಅನುಸರಿಸುವ ಮೂಲಕ ಸಮಾಜ ರೂಪಿಸುವ ತಮ್ಮ ಕೆಲಸ ನಿರ್ವಹಿಸಬೇಕು ಎಂದರು.

ಉಡುಪಿ ಜಿಲ್ಲೆಯ ಉತ್ಕೃಷ್ಟ ಶೈಕ್ಷಣಿಕ ಸಾಧನೆಯ ಹಿಂದೆ ಎಲ್ಲ ಶಿಕ್ಷಕರ ಪ್ರಾಮಾಣಿಕ ದುಡಿಮೆ, ಶ್ರಮ ಇದೆ. ಅವರಿಂದಾಗಿ ಜಿಲ್ಲೆಯ ಜನರಿಗೆ, ಜನಪ್ರತಿನಿಧಿಗಳಿಗೆ ಗೌರವ ಬಂದಿದೆ. ಇಲ್ಲಿನ ಶಿಕ್ಷಣ ಕ್ಷೇತ್ರದ ಸಮಸ್ಯೆಗಳಿಗೆ ಸದಾ ಸ್ಪಂದಿಸಲಾಗಿದೆ. ಸುಗಮ ಶೈಕ್ಷಣಿಕ ಆಡಳಿತದ ಉದ್ದೇಶದಿಂದ ವಂಡ್ಸೆ ಕೇಂದ್ರಿತವಾಗಿ ಕ್ಷೇತ್ರ ಶಿಕ್ಷಣ ಕಚೇರಿ ತೆರೆಯಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ್ ಸ್ವಾಗತಿಸಿದರು. ಕಳೆದ ವರ್ಷ ಸೇವಾವಧಿಯಲ್ಲಿ ನಿಧನರಾದ ಮೈಕಳದ ಜನಾರ್ದನ ಆಚಾರಿ, ಗೋಳಿಹೊಳೆಯ ಜಯರಾಮ ಬಿ, ಶಿರೂರಿನ ಪ್ರೇಮಲತಾ ಬಿ. ನಾಯ್ಕ್, ತೊಂಡೆಮಕ್ಕಿಯ ಗೌರಿ ಬಾಯಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ಕೆ. ಬಾಬು ಶೆಟ್ಟಿ, ಸದಸ್ಯರಾದ ಶಂಕರ ಪೂಜಾರಿ, ಗೌರಿ ದೇವಾಡಿಗ, ಸುರೇಶ ಬಟವಾಡಿ, ತಾಲೂಕು ಪಂಚಾಯತ್ ಸದಸ್ಯೆ ಸುಜಾತಾ ದೇವಾಡಿಗ, ದೈಹಿಕ ಶಿಕ್ಷಣ ಪರಿವೀಕ್ಷಕ ರಾಜು ಪೂಜಾರಿ, ಶಿಕ್ಷಕರ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ, ಅನುದಾನಿತ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗಣಪತಿ ಅತಿಥಿಗಳಾಗಿದ್ದರು.

ಸುಳ್ಸೆ ಶಾಲೆಯ ನಿವೃತ್ತ ಶಿಕ್ಷಕರಾದ ಗೋಪಾಲಕೃಷ್ಣ ಶೆಟ್ಟಿ, ಉಪ್ಪುಂದದ ಶಾರದಾ ಕೆ, ಮೊವಾಡಿಯ ಎಂ. ಶಂಕರ ಬಿಲ್ಲವ, ಹೆಮ್ಮಾಡಿಯ ಚಂದ್ರ ನಾಯ್ಕ್, ಹಳ್ಳಿಹೊಳೆಯ ಚಂದ್ರಶೇಖರ ಶೆಟ್ಟಿ, ಕಾಲ್ತೋಡಿನ ದಾರ, ಮಡಿಕಲ್‌ನ ಕುಷ್ಟು ಪೂಜಾರಿ, ಕೊಲ್ಲೂರಿನ ಮಾಲತಿ, ಯಳಜಿತದ ನಾರಾಯಣ ಎಚ್, ಬಿಜೂರಿನ ದಯಾವತಿ ಅವರನ್ನು ಸನ್ಮಾನಿಸಲಾಯಿತು.

ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಜನಾರ್ದನ ವಂದಿಸಿದರು. ಗಣಪತಿ ಹೋಬಳಿದಾರ್, ರಾಘವೇಂದ್ರ ದಡ್ಡು ನಿರೂಪಿಸಿದರು.

Exit mobile version