ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ನಾವುಂದದ ಮಹಾಗಣಪತಿ ಮಾಂಗಲ್ಯ ಮಂಟಪದಲ್ಲಿ ಸೋಮವಾರ ನಡೆಯಿತು. ಸಂಘದ ಅಧ್ಯಕ್ಷ ಎಸ್. ರಾಜು ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಸಂಘವು ಕಳೆದ ಆರ್ಥಿಕ ವರ್ಷದಲ್ಲಿ ಠೇವಣಿ ಸಂಗ್ರಹ, ಸಾಲ ನೀಡಿಕೆ, ವಸೂಲಿ ಸೇರಿದಂತೆ ಎಲ್ಲ ವಿಭಾಗಗಳಲ್ಲಿ ಗಣನೀಯ ಪ್ರಗತಿ ಸಾಧಿಸಿದೆ. ಅದರ ದುಡಿಯುವ ಬಂಡವಾಳ 34 ಕೋಟಿಗೇರಿದೆ. ವರ್ಷದ ಅಂತ್ಯಕ್ಕೆ ಅದು ಹೊಂದಿರುವ ಠೇವಣಿಯ ಮೊತ್ತ ರೂ. 23.59 ಕೋಟಿಯಾಗಿದ್ದು ಪ್ರಸಕ್ತ ವರ್ಷ ಅದನ್ನು ರೂ. 30 ಕೋಟಿಗೆ ಏರಿಸುವ ಗುರಿ ಹೊಂದಲಾಗಿದೆ. ರೂ 35 ಕೋಟಿ ಸಾಲ ವಿತರಿಸಿ, ರೂ 30 ಕೋಟಿ ಸಂಗ್ರಹಿಸಲಾಗಿದೆ. ಸಂಘ ರೂ 72.5 ಲಕ್ಷ ಲಾಭ ಗಳಿಸಿದೆ. ಸದಸ್ಯರ ಒತ್ತಾಯದ ಹಿನ್ನೆಲೆಯಲ್ಲಿ ಶೇ. 14 ಡಿವಿಡೆಂಡ್ ನೀಡಲಾಗುವುದು ಎಂದು ಅವರು ಹೇಳಿದರು.
ಆರಂಭದಲ್ಲಿ ಗಣೇಶ ಗಂಗೊಳ್ಳಿ ರೈತಗೀತೆ ಹಾಡಿದರು. ವ್ಯವಸ್ಥಾಪಕ ಬಿ. ರಮೇಶ ಅಡಿಗ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಜೀವ ಮಡಿವಾಳ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು. ಮರವಂತೆ ಶಾಖಾಧಿಕಾರಿ ಸೋಮಯ್ಯ ಬಿಲ್ಲವ ವಂದಿಸಿದರು. ಉಪಾಧ್ಯಕ್ಷ ಚಂದ್ರಶೀಲ ಶೆಟ್ಟಿ, ನಿರ್ದೇಶಕರಾದ ಎಂ. ವಿನಾಯಕ ರಾವ್, ವಾಸು ಪೂಜಾರಿ, ಭೋಜ ನಾಯ್ಕ್, ಜಗದೀಶ ಪಿ. ಪೂಜಾರಿ, ಬಿ. ಎಚ್. ಅಬ್ದುಲ್ ರಹಿಮಾನ್, ಎಂ. ರಾಮಕೃಷ್ಣ ಖಾರ್ವಿ, ಪ್ರಕಾಶ ದೇವಾಡಿಗ, ನಾಗಮ್ಮ, ಸರೋಜಾ ಆರ್. ಗಾಣಿಗ, ಕೇಂದ್ರ ಸಹಕಾರಿ ಬ್ಯಾಂಕ್ ಪ್ರತಿನಿಧಿ ಶಿವರಾಮ ಯಡ್ತರೆ ಉಪಸ್ಥಿತರಿದ್ದರು.