ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರಾಜ್ಯದ 16 ಒಕ್ಕೂಟಗಳಲ್ಲಿಯೇ ದ.ಕ. ಹಾಲು ಉತ್ಪಾದಕರ ಒಕ್ಕೂಟ ರಾಜ್ಯದಲ್ಲಿ ದಾಖಲೆ ಪ್ರಮಾಣದ ಹಾಲು ಸಂಗ್ರಹಿಸುತ್ತಿದ್ದು ಈವರೆಗೂ ಪ್ರಥಮ ಸ್ಥಾನ ಕಾಯ್ದುಕೊಂಡಿದೆ ಎಂದು ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೊಡವೂರು ರವಿರಾಜ್ ಹೆಗ್ಡೆ ಹೇಳಿದರು.
ಗೋಳಿಹೊಳೆ ಗ್ರಾಪಂ ವ್ಯಾಪ್ತಿಯಲ್ಲಿ ಒಕ್ಕೂಟದ ೬೯೨ನೇ ಶಾಖೆಯಾದ ಅರೆಶಿರೂರು ಹಾಲು ಉತ್ಪಾದಕರ ಸಹಕಾರ ಸಂಘ ಉದ್ಘಾಟಿಸಿ ಮಾತನಾಡಿದರು. ಮಿಶ್ರತಳಿಯ ಹಸುಗಳನ್ನು ಸಾಕಿ ಆಧುನಿಕ ವಿಧಿವಿಧಾನಗಳಿಂದ ಹೈನುಗಾರಿಕೆಯಲ್ಲಿ ಹೆಚ್ಚಿನ ಲಾಭಗಳಿಸಲು ಸಾಧ್ಯವಾಗುತ್ತದೆ. ಸಂಘದಲ್ಲಿ ಬಂದ ಲಾಭಾಂಶದಲ್ಲಿ ಡಿವಿಡೆಂಟ್, ಬೋನಸ್ ಮೂಲಕ ಸದಸ್ಯರಿಗೆ ಕೊಡಲಾಗುತ್ತಿದೆ. ಹೈನುಗಾರಿಕೆ ಲಾಭದಾಯಿಕ ಕೃಷಿಯಾಗಿದ್ದು, ಗ್ರಾಮೀಣ ಭಾಗದ ಜನರ ಜೀವನಮಟ್ಟವನ್ನು ಆರ್ಥಿಕವಾಗಿ ಹೆಚ್ಚಿಸಲು ಸಹಕಾರಿಯಾಗುತ್ತದೆ ಎಂದರು.
ಬಸ್ರೂರು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ. ಅಪ್ಪಣ್ಣ ಹೆಗ್ಡೆ ಂಘದ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿ ನಮ್ಮ ತಾಲೂಕಿನಲ್ಲಿ ಪ್ರತಿದಿನ ನಗರಗಳಿಂದ ೧.೨೦ ಕೋಟಿ ರೂಪಾಯಿ ಹಾಲಿನ ಲಾಭಾಂಶದ ಮೂಲಕ ಹಳ್ಳಿಗಳಿಗೆ ಬರುತ್ತದೆ. ವಿಪರ್ಯಾಸವೆಂದರೆ ನಮ್ಮಲ್ಲಿ ಪ್ರತಿದಿನ ೨.೪೦ ಕೋಟಿ ರೂಪಾಯಿಗಳಷ್ಟು ಹಣ ಆಲ್ಕೋಹಾಲಿಗಾಗಿ ವೆಚ್ಚವಾಗುತ್ತಿರುವುದು ದುರಂತ. ಈ ಬಗ್ಗೆ ಮಹಿಳೆಯರು ತಮ್ಮ ಹೊಣೆಗಾರಿಕೆ ಅರಿತು ಎಚ್ಚೆತ್ತಕೊಂಡಾಗ ಮಾತ್ರ ಸಂಸಾರದಲ್ಲಿ ಸುಧಾರಣೆ ಸಾಧ್ಯ. ಹಾಲಿನ ದರದ ಬಗ್ಗೆ ಚರ್ಚೆ ಮಾಡುವವರು ನೀರಿನ ಬಾಟಲ್ಗೆ ಹಣ ಖರ್ಚು ಮಾಡುತ್ತಿರುವುದು ಕೂಡಾ ಬೇಸರದ ವಿಚಾರ ಎಂದರು.
ಶಾಸಕ ಕೆ. ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಒಕ್ಕೂಟದ ನಿರ್ದೇಶಕರಾದ ಹದ್ದೂರು ರಾಜೀವ ಶೆಟ್ಟಿ, ಜಾನಕಿ ಹಂದೆ, ಟಿ. ಸೂರ್ಯ ಶೆಟ್ಟಿ, ಅಶೋಕ್ ಕುಮಾರ್ ಶೆಟ್ಟಿ. ಒಕ್ಕೂಟದ ಶೇಖರಣೆ ವಿಭಾಗದ ವ್ಯವಸ್ಥಾಪಕ ಡಾ. ನಿತ್ಯಾನಂದ ಭಕ್ತ, ಸಹಾಯಕ ವ್ಯವಸ್ಥಾಪಕ ಮನೋಹರ್ ಕೆ., ಹಿರಿಯರಾದ ನಾರಾಯಣ ಕೆ. ಉಪಸ್ಥಿತರಿದ್ದರು. ಅರೆಶಿರೂರು ಹಾ.ಉ.ಸ.ಸಂಘದ ಅಧ್ಯಕ್ಷ ಗೌತಮ್ ಶೆಟ್ಟಿ ಕೆ. ಸ್ವಾಗತಿಸಿ, ಪ್ರಾಸ್ತಾವಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಮಂಜುಳಾ ಬಿ. ವಂದಿಸಿದರು. ಸದಾಶಿವ ಶೆಟ್ಟಿ ನಿರೂಪಿಸಿದರು.