Kundapra.com ಕುಂದಾಪ್ರ ಡಾಟ್ ಕಾಂ

ನಾಗೂರಿನಲ್ಲಿ ಯಕ್ಷೋತ್ಸವ ಸಂಪನ್ನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬಿಜೂರು ಮಕ್ಕಿದೇವಸ್ಥಾನದ ಮಹಾಲಿಂಗೇಶ್ವರ ಯಕ್ಷಗಾನ ಕಲಾಮಂಡಳಿಯ ಆಶ್ರಯದಲ್ಲಿ ನಾಗೂರಿನಲ್ಲಿ ಯಕ್ಷೋತ್ಸವ-೨೦೧೬ ಪ್ರಸ್ತುತಗೊಂಡಿತು. ಅಲ್ಲಿನ ಸಂದೀಪನ್ ಶಾಲೆಯ ಆವರಣದಲ್ಲಿ ನಡೆದ ಈ ಅದ್ದೂರಿಯ ಕಾರ್ಯಕ್ರಮವನ್ನು ಕಿರುತೆರೆಯ ನಟಿ ತಳಕಾಲ್‌ಕೊಪ್ಪದ ಅನುಜ್ಞಾ ಪಿ. ರಾವ್ ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಅವರು ಯಕ್ಷಗಾನವು ಜೀವಂತ ಕಲೆಯಾಗಿರುವುದರಿಂದ ಅದನ್ನು ಸಿನಿಮಾದೊಂದಿಗೆ ಹೋಲಿಸಲಾಗದು. ಸಿನಿಮಾ ತಯಾರಿ ಹಂತದಲ್ಲಿ ಅದರ ಯಾವುದೇ ವಿಭಾಗದಲ್ಲಿ ನುಸುಳುವ ದೋಷವನ್ನು ಪ್ರದರ್ಶನಪೂರ್ವದಲ್ಲಿ ಸರಿಪಡಿಸಬಹುದು. ಯಕ್ಷಗಾನದಲ್ಲಿ ಅದು ಸಾಧ್ಯವಿಲ್ಲವಾದ್ದರಿಂದ ಅದರಲ್ಲಿ ಪಾತ್ರ ನಿರ್ವಹಿಸುವವರು ಉತ್ಕೃಷ್ಟ ಸಾಧನೆ ಮಾಡಬೇಕಾಗುತ್ತದೆ. ಯಕ್ಷಗಾನ ಶ್ರೀಮಂತ ಕಲೆಯಾದುದರಿಂದ ಅದರ ಪರಂಪರೆಗೆ ಚ್ಯುತಿ ಬರದಂತೆ ಉಳಿಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂದೀಪನ್ ಶಾಲೆಯ ಮುಖ್ಯೋಪಾಧ್ಯಾಯ ಬಿ. ವಿಶ್ವೇಶ್ವರ ಅಡಿಗ ಯಕ್ಷಗಾನದ ಪುರಾಣ ಪ್ರಸಂಗಗಳು ಎಲ್ಲ ಕಾಲಕ್ಕೂ ಅನ್ವಯವಾಗುತ್ತವೆ. ಇಂದು ಪ್ರದರ್ಶನಗೊಳ್ಳುವ ವೀರ ಅಭಿಮನ್ಯು ದೇಶದ ರಕ್ಷಣೆಗೆ ಹುತಾತ್ಮರಾಗುವ ಯೋಧರ ತ್ಯಾಗವನ್ನು ನೆನಪಿಸುತ್ತದೆ ಎಂದರು. ಮಂಗಳೂರಿನ ಸುಧಾಕರ ಸಾಲಿಯಾನ್ ಮತ್ತು ಡಾ. ಗುರುರಾಜ ಭಟ್ಟ ಶುಭ ಹಾರೈಸಿದರು.

ತೆಂಕುತಿಟ್ಟಿನ ಪ್ರಸಿದ್ಧ ಭಾಗವತರಾದ ಪಟ್ಲ ಸತೀಶ ಶೆಟ್ಟಿ ಅವರಿಗೆ ನಾದಬ್ರಹ್ಮಶ್ರೀ ಪ್ರಶಸ್ತಿ ಮತ್ತು ರವಿಚಂದ್ರ ಕನ್ನಡಿಕಟ್ಟೆ ಅವರಿಗೆ ಮಹಾದೇವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಂಡಳಿಯ ಅಧ್ಯಕ್ಷ ನಾಗರಾಜ ಭಟ್ಟ ಸ್ವಾಗತಿಸಿದರು. ವಿಧಾತ್ರಿ ಭಟ್ಟ ಕಲಾವಿದರನ್ನು ಪರಿಚಯಿಸಿದರು. ಡಾ. ಬಾಲಚಂದ್ರ ಭಟ್ಟ ಅಭಿನಂದನ ಭಾಷಣ ಮಾಡಿದರು. ಎಚ್. ವೆಂಕಟೇಶ ರಾವ್ ವಂದಿಸಿದರು. ರಾಘವೇಂದ್ರ ಆಚಾರ‍್ಯ ನಿರೂಪಿಸಿದರು. ಸಭೆಯ ಬಳಿಕ ಪ್ರಸಿದ್ಧ ಕಲಾವಿದರು ವೀರ ಅಭಿಮನ್ಯು ಯಕ್ಷಗಾನ ಪ್ರಸಂಗ ಪ್ರದರ್ಶಿಸಿದರು./

Exit mobile version