Kundapra.com ಕುಂದಾಪ್ರ ಡಾಟ್ ಕಾಂ

ಉಪ್ಪುಂದ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನ ಆಡಳಿತ ಮಂಡಳಿ ಸುವರ್ಣ ಮಹೋತ್ಸವ

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ದೇವಾಲಯಗಳಲ್ಲಿ ನಡೆಯುವ ಕರ್ಮಕ್ಕೆ ವಿಶೇಷ ಫಲ ದೊರಕುವುದಲ್ಲದೇ ಅಚಲವಾದ ನಂಬಿಕೆಯಿಂದ ಪ್ರಾರ್ಥಿಸಿದಲ್ಲಿ ದೇವರ ಪರಿಪೂರ್ಣ ಅನುಗ್ರಹವಾಗುತ್ತದೆ. ನಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ಮರೆತು ಸರ್ವರ ಸಹಕಾರದೊಂದಿಗೆ ಒಗ್ಗಟ್ಟಿನಿಂದ ಮುಂದುವರಿದರೆ ಏನನ್ನಾದರೂ ಸಾಧಿಸಬಹುದು ಎಂದು ರಾಯಚೂರಿನ ಉದ್ಯಮಿ ಯು. ಸದಾನಂದ ಪ್ರಭು ಹೇಳಿದರು.

ಉಪ್ಪುಂದ ಶ್ರೀಲಕ್ಷ್ಮೀವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿಯ ಸುವರ್ಣ ಮಹೋತ್ಸವ ಹಾಗೂ ನೂತನ ಆಡಳಿತ ಟ್ರಸ್ಟಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ನಮ್ಮ ಹಿರಿಯರು ಹಾಕಿಕೊಟ್ಟ ವಿಚಾರಧಾರೆ ಹಾಗೂ ಸ್ವ-ಪ್ರತಿಭೆಯಿಂದ ಸಪ್ತ ಕೊಂಕಣಿ ಸಮುದಾಯದ ಭವ್ಯ ಪರಂಪರೆ ನಡೆದುಬಂದಿದೆ. ನಮ್ಮಲ್ಲಿರುವ ದ್ವೇಷ, ಮನೆಯ ಸಮಸ್ಯೆಗಳ ಚರ್ಚೆ ಈ ಚೌಕಟ್ಟಿನ ಒಳಗೆ ತಾರದೇ ಸಹಬಾಳ್ವೆ, ನೆಮ್ಮದಿ ಹಾಗೂ ಸಂತೋಷಕ್ಕಾಗಿ ಆತ್ಮ, ದೇಹಶುದ್ದರಾಗಿ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವ ಮೂಲಕ ನಮ್ಮ ಪರಮೋನ್ನತಿಗಾಗಿ ದೇವರಲ್ಲಿ ಪ್ರಾರ್ಥಿಸಬೇಕು ಎಂದರು.

ಡಾ. ಎಸ್. ಎನ್. ಪಡಿಯಾರ್ ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭ ಆಡಳಿತ ಮಂಡಳಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಶ್ರೀಧರ ಪ್ರಭು, ಎನ್. ಅಚ್ಚುತ ಪೈ ನದಿಕಂಠ, ಬಿ. ಗಣಪತಿ ಪ್ರಭು, ಯು. ವಿಷ್ಣು ಪಡಿಯಾರ್ ಹಾಗೂ ಹಿರಿಯರ ಅನುಪಸ್ಥಿತಿಯಲ್ಲಿ ಹರೀಶ್ ಡಿ. ಭಟ್, ಸರಸ್ವತಿ ಭಟ್, ಎನ್. ನಾಗಪ್ಪಯ್ಯ ಪೈ ಭಟ್ಕಳ, ಯು. ಸತೀಶ್ ಪಡಿಯಾರ್, ಯು. ಶ್ರೀನಾಥ ಪಡಿಯಾರ್, ಯು. ಕಾಶೀನಾಥ ಪಡಿಯಾರ್, ಯು. ಉದಯ್ ಪಡಿಯಾರ್, ಯು. ಸುಧಾಕರ ಪ್ರಭು ಇವರಿಗೆ ಸನ್ಮಾನಿಸಲಾಯಿತು. ನೂತನ ಆಡಳಿತ ಟ್ರಸ್ಟಿಗಳ ಪದಗ್ರಹಣದ ನಂತರ ಅಧಿಕಾರ ಹಸ್ತಾಂತರಿಸಲಾಯಿತು.

ಕೊಲ್ಲೂರು ವಲಯ ಜಿಎಸ್‌ಬಿ ಸೇವಾ ಸಮಿತಿ ಅಧ್ಯಕ್ಷ ವಿಶ್ವನಾಥ ಪಡಿಯಾರ್ ಯಳಜೀತ, ಉದ್ಯಮಿಗಳಾದ ಕೆ. ವೆಂಕಟೇಶ ಕಿಣಿ, ಕೆ. ಪ್ರಭಾಕರ ಕಿಣಿ, ಯು. ಅನಂತ ಪಡಿಯಾರ್, ಯು. ರಾಜೀವ ಭಟ್, ಯು. ರಾಮಚಂದ್ರ ಪ್ರಭು, ಯು. ವೆಂಕಟೇಶ ಪ್ರಭು, ಟ್ರಸ್ಟಿನ ಉಪಾಧ್ಯಕ್ಷ ರಾಜೇಶ್ ಪೈ, ಲಾವಣ್ಯ ಬೈಂದೂರು ಇದರ ಗೌರವಾಧ್ಯಕ್ಷ ಯು. ಶ್ರೀನಿವಾಸ ಪ್ರಭು, ಜಾದೂಗಾರ ಓಗಣೇಶ್ ಕಾಮತ್ ಉಪಸ್ಥಿತರಿದ್ದರು. ಬಿ. ವಿಠಲದಾಸ್ ಪ್ರಭು ನಿರೂಪಿಸಿದರು. ಆರಂಭದಲ್ಲಿ ಸಮಾಜದ ಮಕ್ಕಳು, ಮಹಿಳೆಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಆಡಳಿತ ಮಂಡಳಿಯ ಐವತ್ತರ ಸವಿನೆನಪಿಗಾಗಿ ಬೆಳಿಗ್ಗೆ ದೇವಳದಲ್ಲಿ ಹತ್ತು ಸಮಸ್ತರಿಂದ ಲೋಕಲ್ಯಾಣಾರ್ಥವಾಗಿ ಲಘುವಿಷ್ಣು ಹವನ ನೆರವೇರಿಸಲಾಯಿತು.

Exit mobile version