Kundapra.com ಕುಂದಾಪ್ರ ಡಾಟ್ ಕಾಂ

ಶಿರೂರು: ಸಾವಯವ ಕೃಷಿಯ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಾವಯವ ಮತ್ತು ರಸಗೊಬ್ಬರ ನಡುವೆ ಸಮತೋಲನ ಕಾಪಾಡುವ ಅಗತ್ಯವಿದೆ. ಅದರ ಕುರಿತು ತರಬೇತಿ ಪಡೆದುಕೊಳ್ಳಬೇಕು. ಅದರೊಂದಿಗೆ ಹೈನುಗಾರಿಕೆ, ಕೋಳಿಸಾಕಣೆ ನಡೆಸುವುದಲ್ಲದೆ ಸುಲಭದಲ್ಲಿ ಆರೋಗ್ಯ ನೀಡುವ ವಿವಿಧ ತರಕಾರಿ, ಹಣ್ಣುಗಳನ್ನು ಬೆಳೆಸಿ ಮನೆಯ ಖರ್ಚಿಗೆ ಬಳಸಿಕೊಂಡು ಸ್ವಾವಲಂಬನೆ ಸಾಧಿಸಬೇಕು ಎಂದು ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್ ಕರೆ ನೀಡಿದರು.

ಶಿರೂರು ಶ್ರೀವೆಂಕಟರಮಣ ಸಭಾಭವನದಲ್ಲಿ, ಸಂಸದರ ಆದರ್ಶಗ್ರಾಮ ಯೋಜನೆ, ಪ್ರಾದೇಶಿಕ ಸಾವಯವ ಕೃಷಿ ಕೇಂದ್ರ ಬೆಂಗಳೂರು, ಗ್ರಾಮ ಪಂಚಾಯತ್ ಶಿರೂರು, ಕೃಷಿ ಇಲಾಖೆ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಸಾವಯವ ಕೃಷಿಯ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಾಲ್ಕು ದಶಕಗಳ ಹಿಂದೆ ದೇಶದಲ್ಲಿ ಅನ್ನದ ಕೊರತೆ ಇದ್ದಾಗ ರಾಸಾಯನಿಕ ಗೊಬ್ಬರ ಬಳಸಿ ಹಸಿರು ಕ್ರಾಂತಿ ಸಾಧಿಸಲಾಯಿತು. ಆದರೆ ಅತಿಯಾದ ರಸಗೊಬ್ಬರ ಬಳಕೆಯಿಂದ ಭೂಮಿ ಸತ್ವ ಕಳೆದುಕೊಳ್ಳುತ್ತಿರುವುದರಿಂದ ಸಾವಯವ ಕೃಷಿಗೆ ಮರಳುವುದು ಈಗ ಅನಿವಾರ್ಯವೆನಿಸಿದೆ. ಬೇಸಾಯವೆಂದರೆ ಹೆಚ್ಚು ರಾಸಾಯನಿಕ ಗೊಬ್ಬರ ಬಳಸಿ ಬೆಳೆ ಬೆಳೆಯುವುದಲ್ಲ. ಸಾವಯವ ಕೃಷಿಯ ಮೂಲಕ ಬರಡಾಗುತ್ತಿರುವ ಭೂಮಿಯ ಮಣ್ಣಿನ ಗುಣ ರಕ್ಷಣೆ ಮಡುವ ಮೂಲಕ ಹೆಚ್ಚು ನೀರನ್ನು ಹೀರಿಕೊಳ್ಳುವಂತೆ ನೋಡಿಕೊಳ್ಳಬೇಕು ಎಂದರು.

ಗ್ರಾಪಂ ಅಧ್ಯಕ್ಷೆ ದಿಲ್‌ಶಾದ್ ಬೇಗಂ ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭ ಶಿರೂರು ಭಾಗದ ಪ್ರಗತಿಪರ ಕೃಷಿಕ ಸರ್ಪನಮನೆ ಗೋವಿಂದ ಮೇಸ್ತರನ್ನು ಸಂಸದರು ಗೌರವಿಸಿ ಸನ್ಮಾನಿಸಿದರು. ಶಾಸಕ ಕೆ. ಗೋಪಾಲ ಪೂಜಾರಿ, ಜಿಪಂ ಸದಸ್ಯ ಸುರೇಶ ಬಟ್ವಾಡಿ, ತಾಪಂ ಸದಸ್ಯರಾದ ಮೌಲಾನಾ ದಸ್ತಗೀರ್, ಪುಷ್ಪರಾಜ್ ಶೆಟ್ಟಿ, ಗ್ರಾಪಂ ಉಪಾಧ್ಯಕ್ಷ ನಾಗೇಶ ಮೊಗೇರ, ಪ್ರಾದೇಶಿಕ ಸಾವಯವ ಕೃಷಿ ಕೇಂದ್ರ ಬೆಂಗಳೂರು ಇಲ್ಲಿನ ಸಹಾಯಕ ನಿರ್ದೇಶಕ ಡಾ. ವಿ.ವೈ. ದೋಗರೆ, ಕೆಡಿಪಿ ಸದಸ್ಯ ಎಸ್. ರಾಜು ಪೂಜಾರಿ, ವಿಶೇಷ ತಹಶೀಲ್ದಾರ್ ಕಿರಣ್ ಜಿ. ಗೌರಯ್ಯ, ಕೆಪಿಸಿಸಿ ಕಾರ್ಯದರ್ಶಿ ಎಂ. ಎ. ಗಫೂರ್ ಉಪಸ್ಥಿತರಿದ್ದರು. ಬ್ರಹ್ಮಾವರ ಕೃಷಿವಿಜ್ಞಾನ ಕೇಂದ್ರದ ವಿಷಯ ತಜ್ಞ ಡಾ. ನವೀನ್ ಎನ್.ಈ., ಪ್ರಗತಿಪರ ಕೃಷಿಕರಾದ ತಿಮ್ಮಣ್ಣ ಹೆಗಡೆ ಯಳ್‌ಜೀತ್, ಉದಯಶಂಕರ ಭಟ್ ಕಿರಿಮಂಜೇಶ್ವರ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ರೈತರಿಗೆ ಸಾವಯವ ಕೃಷಿಯ ಕುರಿತು ಮಾಹಿತಿ ಹಾಗೂ ತರಬೇತಿ ನೀಡಿದರು. ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಚಂದ್ರಶೇಖರ ನಾಯಕ್ ಪ್ರಾಸ್ತಾವಿಸಿದರು. ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ವಿಠಲರಾವ್ ಸ್ವಾಗತಿಸಿ, ಅರುಣ್‌ಕುಮಾರ್ ಶಿರೂರು ನಿರೂಪಿಸಿ, ವಂದಿಸಿದರು.

Exit mobile version