Kundapra.com ಕುಂದಾಪ್ರ ಡಾಟ್ ಕಾಂ

ಹಕ್ಕುಪತ್ರಕ್ಕಾಗಿ ಶೀಘ್ರ ವಿಲೇವಾರಿ ಮಾಡಿ: ಬೈಂದೂರಿನಲ್ಲಿ ಪ್ರತಿಭಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ವಿಧಾನಸಭಾ ವ್ಯಾಪ್ತಿಯ ಗ್ರಾಮಗಳ ನಿವೇಶನ ರಹಿತ ಬಡ ಕೂಲಿ ಕಾರ್ಮಿಕರು ಭೂಮಿ ಹಕ್ಕುಪತ್ರಕ್ಕಾಗಿ ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿ ವರ್ಷ ಐದು ಕಳೆದರೂ ಇಲ್ಲಿಯ ತನಕ ತುಂಡು ಭೂಮಿಯನ್ನು ನಿವೇಶನ ರಹಿತರಿಗೆ ನೀಡಲು ಸಾಧ್ಯವಾಗಲಿಲ್ಲ. ಶಾಸಕರ, ಸಂಸದರ ಸಂಬಳ ಏರಿಕೆಯಾಗುತ್ತಲೇ ಇದೆ. ಆದರೆ ಸರಕಾರಕ್ಕೆ ಮಾತ್ರ ಬಡ ಕೃಷಿ ಕೂಲಿಕಾರರ ಬಗ್ಗೆ ಕಾಳಜಿ ಇದ್ದಂತಿಲ್ಲ ಎಂದು ಕರ್ನಾಟಕ ಪ್ರಾಂತ್ಯ ಕೃಷಿ, ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ದಾಸ್ ಭಂಡಾರಿ ವ್ಯಂಗವಾಡಿದರು.

ಬೈಂದೂರು ವಿಶೇಷ ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ನಿವೇಶನ ರಹಿತರು ಭೂಮಿ ಹಕ್ಕುಪತ್ರಕ್ಕಾಗಿ ಸಲ್ಲಿಸಿದ್ದ ಅರ್ಜಿಗಳನ್ನು ತಕ್ಷಣ ವಿಲೇವಾರಿ ಮಾಡುವಂತೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು. ಜನಸಾಮಾನ್ಯರು ಬೆವರು ಸುರಿಸಿ ದುಡಿದು ತೆರಿಗೆ ಕಟ್ಟಿದ ಹಣದಲ್ಲಿ ಜನಪ್ರತಿನಿಧಿಗಳು ಮೆರೆಯುತ್ತಿದ್ದು, ರಿಯಲ್ ಎಸ್ಟೇಟ್, ಗುತ್ತಿಗೆ ಕಾಮಗಾರಿ, ಅಕ್ರಮ ವ್ಯವಹಾರಗಳ ಮೂಲಕ ಬಡವರನ್ನು ಲೂಟಿ ಮಾಡುತ್ತಿದ್ದಾರೆ. ಸರಕಾರವೂ ಕೂಡಾ ಈ ವ್ಯವಸ್ಥೆಯಲ್ಲಿ ಶಾಮೀಲಾಗಿದ್ದು, ಸರ್ಕಾರಿ ಭೂಮಿಯನ್ನು ಬಡನಿವೇಶನ ರಹಿತರಿಗೆ ಹಂಚಿಕೊಡುವಲ್ಲಿ ದಿನದೂಡುತ್ತಿದ್ದಾರೆ. ನಾವು ನಮ್ಮ ಹಕ್ಕನ್ನು ಕೇಳುತ್ತಿದ್ದೇವೆಯೇ ಹೊರತು ಯಾರಪ್ಪನ ಆಸ್ತಿಯನ್ನಲ್ಲ. ಅಕ್ರಮ-ಸಕ್ರಮದ ಅರ್ಜಿ ವಾರದಲ್ಲಿ ಇತ್ಯರ್ಥವಾಗುದಾದರೆ ನಮ್ಮ ಬೇಡಿಗಳಿಗೆ ಮೀನಾ ಮೇಷ ಮಾಡುತ್ತಿರುವುದೇಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ಪ್ರಾಂತ್ಯ ಕೃಷಿ, ಕೂಲಿಕಾರರ ಸಂಘದ ಅಧ್ಯಕ್ಷ ಕೋಣಿ ವೆಂಕಟೇಶ್ ನಾಯಕ್ ಪ್ರತಿಭಟನೆಯ ನೇತೃತ್ವವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ನಾಗರತ್ನ ನಾಡ, ಕೋಶಾಧಿಕಾರಿ ಪದ್ಮಾವತಿ ಶೆಟ್ಟಿ, ಮುಖಂಡರಾದ ಸುರೇಶ ಕಲ್ಲಾಗರ್, ಕೆ. ಶಂಕರ್, ರಾಜು ಪಡುಕೋಣೆ, ಶೀಲಾವತಿ ಪಡುಕೋಣೆ, ಕುಶಲ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ನಂತರ ವಿಶೇಷ ತಹಶೀಲ್ದಾರ್ ಕಿರಣ್ ಜಿ. ಗೌರಯ್ಯ ಇವರಿಗೆ ಮನವಿ ಸಲ್ಲಿಸಿ, ಗ್ರಾಮ ಕರಣಿಕ, ಪಿಡಿಒಗಳೊಂದಿಗೆ ಸಂಘದ ಮುಖಂಡರನ್ನು ಕೂಡಿಕೊಂಡು ಜಂಟಿ ಸಭೆ ಮಾಡುವಂತೆ ಒತ್ತಾಯಿಸಲಾಯಿತು.

Exit mobile version