Kundapra.com ಕುಂದಾಪ್ರ ಡಾಟ್ ಕಾಂ

ಚಂಡೆವಾದಕ ಶಿವಾನಂದ ಕೋಟಗೆ ಡಾ.ಹೆಚ್.ಶಾಂತಾರಾಮ್ ಯಕ್ಷಗಾನ ಪುರಸ್ಕಾರ ಪ್ರದಾನ

ರಾಜ್ಯೋತ್ಸವ ಯಕ್ಷಗಾನ ತಾಳಮದ್ದಳೆ-೪೦

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನವೆಂಬರ್ ೧ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ರಾಜ್ಯೋತ್ಸವ ಯಕ್ಷಗಾನ ತಾಳಮದ್ದಳೆ-೪೦ರಸಂಭ್ರಮ ಕಾರ್ಯಕ್ರಮದಲ್ಲಿ ಮಣಿಪಾಲದ ಅಕಾಡೆಮಿ ಆಫ್ ಜನರ್ಲ್ ಎಜುಕೇಶನ್ ಇದರ ಆಡಳಿತಾಧಿಕಾರಿಗಳಾದ ಡಾ.ಹೆಚ್.ಶಾಂತಾರಾಮ್ ಅವರು ಬಡಗು ಹಾಗೂ ತೆಂಕುತಿಟ್ಟು ಸವ್ಯಸಾಚಿ ಚಂಡೆವಾದಕ  ಶಿವಾನಂದ ಕೋಟ ಇವರಿಗೆ ಡಾ.ಹೆಚ್.ಶಾಂತಾರಾಮ್ ಯಕ್ಷಗಾನ ಪುರಸ್ಕಾರವನ್ನು ನೀಡಿ ಸನ್ಮಾನಿಸಿದರು.

ಬಳಿಕ ಮಾತನಾಡಿದ ಡಾ. ಹೆಚ್. ಶಾಂತಾರಾಮ್ ಕರ್ನಾಟಕ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಬೇಕೆಂಬ ಉದ್ದೇಶದಿಂದ ಕರಾವಳಿಯ ಹೆಮ್ಮೆಯ ಕಲೆ ಯಕ್ಷಗಾನ ತಾಳಮದ್ದಳೆಯನ್ನು ಆರಭಿಸಲಾಯಿತು. ಅಲ್ಲದೇ ಯುವಜನತೆಗೆ ಯಕ್ಷಗಾನ ಕಲೆಯ ವಿಶಿಷ್ಠತೆಯನ್ನು ತಿಳಿಸುವುದು ಇದರ ಉದ್ದೇಶವಾಗಿದೆ. ಅಹೋರಾತ್ರಿ ನಡೆಯುತ್ತಿದ್ದ ಈ ಕಾರ್ಯಕ್ರಮ ನಂತರದ ದಿನಗಳಲ್ಲಿ ಮಧ್ಯಾಹ್ನದಿಂದ ಸಂಜೆಯವರೆಗೆ ಮಾತ್ರ ನಡೆಯುತ್ತಿತ್ತು. ನಂತರ ಯಕ್ಷಗಾನಕ್ಕೆ ಹೊಸ ಆಯಾಮಗಳನ್ನು ಕೊಡಬೇಕು ಎಂಬ ಉದ್ದೇಶದಿಂದ ಯುವ ಯಕ್ಷಗಾನ ಕಲಾವಿದರನ್ನು ಬೆಳೆಸಬೇಕೆಂಬ ಅಭಿಲಾಷೆಯಿಂದ ಯಕ್ಷಗಾನ ಪುರಸ್ಕಾರವನ್ನು ನೀಡಲು ಆರಂಭಿಸಲಾಯಿತು. ಪುರಸ್ಕಾರವನ್ನು ನೀಡುವುದರೊಂದಿಗೆ ಯಕ್ಷಗಾನವನ್ನು ಇನ್ನೂ ಮುತುವರ್ಜಿಯಿಂದ ಉಳಿಸಿ ಬೆಳೆಯಬೇಕು. ಪಡೆದವರ ಮೂಲಕ ಕಲೆ ಬೆಳೆಯಬೇಖು. ಮುಮ್ಮೇಳ ಹಿಮ್ಮೇಳ ಎಲ್ಲಾ ಕಲಾಕಾರರಿಗೂ ಈ ಪುರಸ್ಕಾರ ಸಲ್ಲಬೇಕು. ಎಳೆಯ್ ಕಲಾವಿದರನ್ನು ಬೆಳೆಸಬೇಕು. ಅವರು ಇಅನ್ನಷ್ಟು ಕಲಾವಿಅದರನ್ನು ಯಕ್ಷಗಾನ ರಂಗಕ್ಕೆ ತರಬೇಕು. ಮುಂದಿನ ದಿನಗಳಲ್ಲಿ ಯುವಜನತೆ ಈ ಜವಾಬ್ದಾರಿಯನ್ನು ಸರಿಯಾಘಿ ನಿಭಾಯಿಸಬೇಕು. ತನ್ಮೂಲಕ ಯಕ್ಷಗಾನ ಕಲೆ ಅನುಜ್ನಾನವಾಗಿ ಬೆಳೆಯಲಿ ಎಂದು ಆಶಿಸಿದರು.
ಯಕ್ಷಗಾನ ಪುರಸ್ಕಾರ ಸ್ವೀಕರಿಸಿದ ಬಡಗು ಹಾಗೂ ತೆಂಕುತಿಟ್ಟು ಸವ್ಯಸಾಚಿ ಚಂಡೆವಾದಕ ಶ್ರೀ ಶಿವಾನಂದ ಕೋಟ ತಮ್ಮ ಕಲೆಯನ್ನು ಪೋಷಿಸಿ ಬೆಳೆಸಿದ ಎಲ್ಲರಿಗೂ ಕೃತಜ್ನತೆಗಳನ್ನು ಹೇಳಿದರು.

ಈ ಸಂದರ್ಭದಲ್ಲಿ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ರಾಜ್ಯೋತ್ಸವ ಯಕ್ಷಗಾನ ತಾಳಮದ್ದಳೆ ಆರಂಬಿಸುವುದಕ್ಕೆ ಪ್ರಯತ್ನಿಸಿ ಕಾರಣೀಭೂತರಾದ ಪ್ರೊ ಸಿ.ಪಿ.ಅಧಿಕಾರಿ ಅವರು ಆರಂಭಿಕ ದಿನಗಳ ಯಕ್ಷಗಾನ ತಾಳಮದ್ದಳೆ ಕಾರ‍್ಯಕ್ರಮವನ್ನು ನೆನಪಿಸಿಕೊಂಡರು. ಸಾಲಿಗ್ರಾಮ ಮಕ್ಕಳ ಮೇಳದ ಶ್ರೀ ಹೆಚ್.ಶ್ರೀಧರ ಹಂದೆ ಅಭಿನಂದನಾ ಭಾಷಣ ಮಾಡಿದರು.

ವೇದಿಕೆಯಲ್ಲಿ ಯಕ್ಷಗಾನ ಪುರಸ್ಕಾರ ಸಮಿತಿ ಸಂಚಾಲಕರಾದ ಡಾ.ರಮೇಶ್ ಚಿಂಬಾಳ್ಕರ್ ಉಪಸ್ಥಿತರಿದ್ದರು. ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ಸ್ವಾಗತಿಸಿದರು. ಕನ್ನಡ ಪ್ರಾಧ್ಯಾಪಕರಾದ ಗಣಪತಿ ಭಟ್ ಸನ್ಮಾನ ಪತ್ರ ವಾಚಿಸಿದರು. ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಜಿ.ಎಂ.ಗೊಂಡ ವಂದಿಸಿದರು. ಕನ್ನಡ ಉಪನ್ಯಾಸಕ ರಂಜಿತ್ ಕುಮಾರ್ ಶೆಟ್ಟಿ ಕಾರ‍್ಯಕ್ರಮ ನಿರ್ವಹಿಸಿದರು.

ಕನ್ನಡ ರಾಜ್ಯೋತ್ಸವ ತಾಳಮದ್ದಳೆ ೪೦ರ ಸಂಭ್ರಮದ ಪ್ರಯುಕ್ತ ನಡೆದ ಗಾನವೈವಿಧ್ಯ, ಯಕ್ಷಗಾನ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಇದರ ಆಡಳಿತಾಧಿಕಾರಿಗಳಾದ ಡಾ.ಹೆಚ್.ಶಾಂತಾರಾಮ್ ಉದ್ಘಾಟಿಸಿದರು.

ಗಾನವೈವಿಧ್ಯದಲ್ಲಿ ಭಾಗವತರಾಗಿ ಸುರೇಶ ಶೆಟ್ಟಿ (ಬಡಗುತಿಟ್ಟು), ಚಂದ್ರಕಾಂತ ಮೂಡುಬೆಳ್ಳೆ (ಬಡಗುತಿಟ್ಟು), ಕುಮಾರಿ ಕಾವ್ಯಶ್ರೀ ಅಜೇರು (ತೆಂಕುತಿಟ್ಟು) ಮದ್ದಳೆಗಾರರಾಗಿ ಎನ್.ಜಿ.ಹೆಗೆಡೆ ಮತ್ತು ಗಣೆಶ ರಾವ್ ಅಡೂರು, ಚಂಡೆವಾದಕರಾಗಿ ಶಿವಾನಂದ ಕೋಟ, ಚಕ್ರತಾಳಕಾರರಾಗಿ ಶ್ರೀಪತಿ ನಾಯಕ್ ಅಜೇರು ಭಾಗವಹಿಸಿದ್ದರು. ಇಂದ್ರಾಳಿಯ ಯಕ್ಷಗಾನ ಕೇಂದ್ರದ ಪ್ರಾಂಶುಪಾಲರಾದ ಬನ್ನಂಜೆ ಸಂಜೀವ ಸುವರ್ಣರ ನಿರ್ದೇಶನದಲ್ಲಿ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರಾತ್ಯಕ್ಷಿಕೆ ನಡೆಯಿತು. ಕನ್ನಡ ರಾಜ್ಯೋತ್ಸವ ತಾಳಮದ್ದಳೆಯಲ್ಲಿ ದೇವಯಾನಿ ಕಲ್ಯಾಣ ಎಂಬ ಪ್ರಸಂಗವನ್ನು ಪ್ರಸ್ತುತಪಡಿಸಲಾಯಿತು. ಭಾಗವತರಾಗಿ ಪುತ್ತಿಗೆ ರಘುರಾಮ ಹೊಳ್ಳ, ಮದ್ದಳೆಕಾರರಾಗಿ ಪದ್ಯಾಣ ಶಂಕರ ನಾರಾಯಣ ಭಟ್, ಚಂಡೆವಾದಕರಾಗಿ ಶಿವಾನಂದ ಕೋಟ, ಅರ್ಥಧಾರಿಗಳಾಗಿ ಡಾ.ಎಂ.ಪ್ರಭಾಕರ ಜೋಶಿ, ಎಂ.ಕೆ.ರಮೇಶ್ ಆಚಾರ್, ರಾಧಾಕೃಷ್ಣ ಕಲ್ಚಾರ್, ಗಣರಾಜ ಕುಂಬ್ಳೆ, ಮತ್ತು ಸುಜಯೀಂದ್ರ ಹಂದೆ ಭಾಗವಹಿಸಿದ್ದರು.

Exit mobile version